ಪರಿಸರ ಸಂರಕ್ಷಣೆಗೆ ಎಲ್ಲರೂ ಪಣ ತೊಡೋಣ

| Published : Jun 06 2025, 01:59 AM IST

ಸಾರಾಂಶ

ಮನೆ, ಕಚೇರಿ, ಓಣಿ, ಊರುಗಳಲ್ಲೆಲ್ಲ ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಟ್ಟು, ಮರಗಳಾಗಿ ಬೆಳೆಸುವ ಜವಾಬ್ದಾರಿ ನಿಭಾಯಿಸಬೇಕಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಸಕ್ತ ಸಂದರ್ಭದಲ್ಲಿ ಅಪಾಯದ ಮಟ್ಟದಲ್ಲಿ ಸಾಗುತ್ತಿರುವ ಜಾಗತಿಕ ತಾಪಮಾನ ತಗ್ಗಿಸಲು ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗಾಗಿ ಪಣ ತೊಡಬೇಕಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಹೇಳಿದರು.

ಗುರುವಾರ ನಗರದಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿ ಜಿಲ್ಲಾ ಸಹಕಾರ ಯುನಿಯನ್, ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಳ ಸಹಕಾರಿ ಇಲಾಖೆ ಸಹಯೋಗದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಹಕಾರಿ ವರ್ಷಾಚರಣೆಗಾಗಿ ತಾಯಿ ಹೆಸರಲ್ಲಿ ಒಂದು ಸಸಿ ನೆಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನೆ, ಕಚೇರಿ, ಓಣಿ, ಊರುಗಳಲ್ಲೆಲ್ಲ ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಟ್ಟು, ಮರಗಳಾಗಿ ಬೆಳೆಸುವ ಜವಾಬ್ದಾರಿ ನಿಭಾಯಿಸಬೇಕಿದೆ. ಪರಿಸರ ಪ್ರಜ್ಞೆ ಕಳೆದುಕೊಂಡರೆ ಜೀವ ಸಂಕುಲಕಕ್ಕೆ ಕುತ್ತು ಬರಲಿದೆ. ಹೀಗಾಗಿ ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರ ಹೊಣೆ ನಿಭಾಯಿಸಲು ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಪಣ ತೊಡಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜೀವರಕ್ಷಕ ಆಮ್ಲಜನಕ ಹಾಗೂ ಪರಿಶುದ್ಧ ಗಾಳಿಯ ಅಗತ್ಯವನ್ನು ಮನವರಿಕೆ ಮಾಡಿಸಿದೆ. ಹೀಗಾಗಿ ಹೆತ್ತವರು, ಪಾಲಕರನ್ನು ಪ್ರೀತಿಸಿ, ಗೌರವಿಸುವ ಮಾದರಿಯಲ್ಲಿ ಸಸಿಗಳನ್ನು ನೆಟ್ಟು, ಮರಗಳಾಗಿ ಸಂರಕ್ಷಿಸಿ, ಬೆಳೆಸುವ ಕೆಲಸ ಆಗಬೇಕಿದೆ. ಕಡಕೋಳ ಮಡಿವಾಳ ಶರಣರ ಅನುಭಾವ ಕಾವ್ಯ ಸವಿಯುವಂತೆ ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಸರ್ಕಾರ ತಾಯಿಯ ಹೆಸರಿನಲ್ಲಿ ಪ್ರತಿಯೊಬ್ಬರೂ ಒಂದೊಂದು ಸಸಿ ನೆಡುವ ಅಭಿಯಾನ ಬದ್ಧತೆಯಿಂದ ನಡೆಯಬೇಕಿದೆ ಎಂದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಡಿಜಿಎಂ ಸತೀಶ ಪಾಟೀಲ ಮಾತನಾಡಿ, ಹಿರಿಯರು ನಮಗಾಗಿ ಸ್ವಚ್ಛ-ಸುಂದರ ಪರಿಸರ ಬಿಟ್ಟುಹೋಗಿದ್ದಾರೆ. ಅದರಂತೆ ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಸುಂದರ ಪರಿಸರ ಸಂರಕ್ಷಿಸಿ ಬಿಟ್ಟು ಹೋಗುವುದು ಇಂದಿನ ನಮ್ಮೆಲ್ಲರ ಕರ್ತವ್ಯ. ಜಪಾನ್ ಮಾದರಿಯಲ್ಲಿ ನಮ್ಮ ಮಕ್ಕಳಿಗೆ ಪರಿಸರವನ್ನು ಬದುಕಿನ ಭಾಗವೆಂಬ ಜ್ಞಾನ ನೀಡಬೇಕು ಎಂದು ಸಲಹೆ ನೀಡಿದರು.

ಸಹಕಾರಿ ಸಂಘಗಳ ಉಪ ನಿಬಂಧಕರಾದ ಎಸ್.ಕೆ.ಭಾಗ್ಯಶ್ರೀ ಮಾತನಾಡಿ, ಅಂತಾರಾಷ್ಟ್ರೀಯ ಸಹಕಾರಿ ಅಭಿಯಾನ ವರ್ಷಾಚರಣೆ ಈ ಹಂತದಲ್ಲಿ ಪರಿಸರ ಸಂರಕ್ಷಣೆ ಮಹತ್ವವನ್ನು ಸಾರುವ ಕೆಲಸ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಒಂದೊಂದು ಸಸಿಗಳನ್ನು ನೆಟ್ಟು ಪರಿಸರಕ್ಕೆ ನಮ್ಮ ಕೊಡುಗೆ ನೀಡಬೇಕಿದೆ ಎಂದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯಕಾರ್ಯನಿರ್ವಾಹಕರಾದ ಎಸ್.ಎ.ಢವಳಗಿ, ಡಿಜಿಎಂಗಳಾದ ಸುರೇಶ ಪಾಟೀಲ, ಆರ್.ಎಂ.ಪಾಟೀಲ, ಎಂ.ಜಿ.ಬಿರಾದಾರ, ಜೆ.ಬಿ.ಪಾಟೀಲ, ಪಿ.ವೈ.ಡೆಂಗಿ, ಸಹಕಾರಿ ಯುನಿಯನ್ ಬ್ಯಾಂಕ್ ನಿರ್ದೇಶಕರಾದ ಎನ್.ಎ.ನಾವಿ, ಸಹಕಾರಿ ಅಭಿವೃದ್ಧಿ ಅಧಿಕಾರಿಗಳಾದ ಎಸ್.ಡಿ.ಮನಗೂಳಿ, ಶ್ರೀಶೈಲ ಹಂಗರಗಿ, ವಿಜಯಕುಮಾರ ಉತ್ನಾಳ, ಕೆ.ಬಿ,ಪಾಟೀಲ, ಲೀಲಾವತಿಗೌಡ ಸೇರಿದಂತೆ ಮುಂತಾದವರು ಇದ್ದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಆರ್.ಎಂ.ಬಣಗಾರ ಸ್ವಾಗತಿಸಿ, ನಿರೂಪಿಸಿದರು. ಸಹಕಾರಿ ಯುನಿಯನ್ ಬ್ಯಾಂಕ್ ಸಿಇಒ ಕೆ.ಎನ್.ಪಾರಗೊಂಡ ವಂದಿಸಿದರು. ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಸಾಮೂಹಿಕವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.