ಸಾರಾಂಶ
- ಅವಘಡ ಸಂಭವಿಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ: ಪಿಎಸ್ಐ ಎಚ್ಚರಿಕೆ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ತ್ಯಾಗ ಮತ್ತು ಬಲಿದಾನದ ಬಕ್ರೀದ್ ಹಬ್ಬದ ಮೆರವಣಿಗೆಯಲ್ಲಿ ದುರ್ವರ್ತನೆ ತೋರಿ, ಅವಘಡ ಸಂಭವಿಸಿದರೆ ಕಾನೂನು ಕ್ರಮ ಖಂಡಿತಾ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಉಪ ನಿರೀಕ್ಷಕ ಪ್ರಭು ಕೆಳಗಿನಮನಿ ಎಚ್ಚರಿಕೆ ನೀಡಿದರು.
ಬುಧವಾರ ಸಂಜೆ ಠಾಣೆಯಲ್ಲಿ ನಡೆಸಿದ ಶಾಂತಿ ಮತ್ತು ಸೌಹಾರ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಾಮೂಹಿಕ ಪ್ರಾರ್ಥನೆಗೆ ತೆರಳುವ ಮಾರ್ಗದಲ್ಲಿ ರಸ್ತೆಯ ಒಂದು ಪಕ್ಕದಲ್ಲಿ ನಡೆದುಕೊಂಡು ಹೋಗುವುದು, ಪ್ರಾರ್ಥನೆ ವೇಳೆಯಲ್ಲಿ ಒಂದು ಬದಿಯಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಿ ಬೇರೆ ವಾಹನಗಳು ಚಲಿಸಲು ಅವಕಾಶ ಮಾಡಬೇಕು ಎಂದು ತಿಳಿಸಿದರು.18 ವರ್ಷ ತುಂಬದ ಚಿಕ್ಕಮಕ್ಕಳು ಬೈಕ್ ಓಡಿಸುವುದು ಕಾನೂನುಬಾಹಿರ ಚಟುವಟಿಕೆಯಾಗಿದೆ. ಈ ಪ್ರಕರಣಗಳಲ್ಲಿ ವಾಹನದ ಮಾಲೀಕರಿಗೆ ದಂಡ ವಿಧಿಸಲಾಗುವುದು. ಭಾರೀ ಶಬ್ದ ಮಾಡುವ ಸೈಲೆನ್ಸರ್ ಹಾಕುವುದು ಸಹ ಅಪರಾಧವಾಗಿದೆ. ಧ್ವನಿವರ್ಧಕ ಬಳಕೆಗೆ ವೃತ್ತ ನಿರೀಕ್ಷಕರಿಂದ ಮತ್ತು ಫ್ಲೆಕ್ಸ್ ಹಾಕಲು ಪುರಸಭೆಯಿಂದ ಅನುಮತಿ ಪಡೆಯಬೇಕು. ಹಬ್ಬದ ಹೆಸರಲ್ಲಿ ಯಾವುದೇ ಪ್ರಾಣಿಬಲಿ ನಿಷೇಧ ಮತ್ತು ಮತ್ತು ಬೇರೆ ಸಮುದಾಯಕ್ಕೆ ಧಕ್ಕೆ ತರುವಂತಹ ಕೃತ್ಯ ನಡೆದಲ್ಲಿ ಬಿಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಎಎಸ್ಐ ಶ್ರೀನಿವಾಸ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ತಯಾರಿಸಿದ ಆಹಾರ ಸೇವನೆ ಮಾಡದಂತೆ ಮಕ್ಕಳಿಗೆ ಹಿರಿಯರು ತಿಳಿವಳಿಕೆ ನೀಡಬೇಕು. ಯಾವುದೇ ಗಲಭೆಗೆ ಅವಕಶ ನೀಡದೇ ಹಬ್ಬ ಆಚರಿಸಿ ಎಂದು ಹೇಳಿದರು.ಜಾಮಿಯಾ ಮಸೀದಿ ಮುಖ್ಯಸ್ಥ ಮೊಹಮ್ಮದ್ ಆಶಂ ಮಾತನಾಡಿ, ಜೂನ್ 7ರಂದು ಬಕ್ರೀದ್ ಹಬ್ಬವಿದೆ. ಬೆಳಗ್ಗೆ ಮಸೀದಿ ಬಳಿ ಜಮಾವಣೆಯಾಗಿ ನಂತರ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಗುವುದು. ಶಾಂತಿಯುತ ಆಚರಣೆಗೆ ಎಲ್ಲ ಧರ್ಮದವರ ಸಹಕಾರ ಅಗತ್ಯವಿದೆ. ಹಬ್ಬದ ಕಾರಣ ಪುರಸಭೆಯಿಂದ ಸ್ವಚ್ಛತಾ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಮುಖಂಡರಾದ ಜಾಕಿರ್ ಖಾನ್, ನಯಾಜ್, ದಾದಪೀರ್, ಶಿವು, ರಾಜು, ಶಬ್ಬೀರ್, ದಾದಾವಲಿ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಪೇದೆ ಪ್ರದೀಪ್ ಸ್ವಾಗತಿಸಿ, ಶಿವಕುಮಾರ್ ವಂದಿಸಿದರು.- - -
-ಚಿತ್ರ-೧:ಶಾಂತಿ, ಸೌಹಾರ್ದತಾ ಸಭೆಯಲ್ಲಿ ಪಿಎಸ್ಐ ಪ್ರಭು ಕೆಳಗಿನಮನಿ ಮಾತನಾಡಿದರು.