ಸಾರಾಂಶ
ಮುಂಡರಗಿ: ವರ್ಷದಿಂದ ವರ್ಷಕ್ಕೆ ಯಾತ್ರಾ ಮಹೋತ್ಸವಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿ ಕೇವಲ ತೇರನೆಳೆಯುವ ಬದಲು ಕೃಷಿ, ತೋಟಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸುತ್ತಿದ್ದು, ಎಲ್ಲರೂ ಸೇರಿ ಅಜ್ಜನ ಯಾತ್ರಾ ಮಹೋತ್ಸವ ಅದ್ಧೂರಿಯಿಂದ ಆಚರಿಸೋಣ ಎಂದು ಜ. ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಸಂಜೆ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ 155ನೇ ಯಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಚನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ನಡೆಸುವುದು ಹಾಗೂ ಉಚಿತ ಆರೋಗ್ಯ ಶಿಬಿರ ನಡೆಸುವುದರಿಂದ ಬಡವರು ಹಾಗೂ ಮಧ್ಯಮ ಕುಟುಂಬಗಳು ಹಾಗೂ ಕಾರ್ಮಿಕ ಕುಟುಂಬಗಳಿಗೆ ಅನುಕೂಲವಾಗಲಿದೆ. ವಚನ ಎಂದರೆ ಮಾತು ಕೊಡುವುದು ಎಂದರ್ಥ. ಶಿವಶರಣರ ಸೂಳ್ ನುಡಿ ಕೇಳಿದರೆ ಸಾಕ್ಷಾತ್ ಶಿವನನ್ನು ದರ್ಶನ ಮಾಡಿದಂತಾಗುತ್ತದೆ. ಆದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರವಚನ ಆಲಿಸಬೇಕು ಎಂದರು.
ಪ್ರೊ. ಆರ್.ಎಲ್.ಪೊಲೀಸ್ ಪಾಟೀಲ ಮಾತನಾಡಿ,ನಾಡಿನ ವೀರಶೈವ ಲಿಂಗಾಯತ ಮಠಗಳು ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕವಾಗಿ ಯಾವ ವಿಶ್ವವಿದ್ಯಾಲಯ ಮಾಡುದಷ್ಟು ಕಾರ್ಯ ಮಾಡುತ್ತಾ ಬಂದಿವೆ. ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಸ್ವತಹ ಸಾಹಿತಿಗಳಾಗಿ 160ಕ್ಕೂ ಹೆಚ್ಚು ಸಾಹಿತ್ಯ ಕೃತಿ ರಚಿಸಿದ್ದು, ಶ್ರೀಗಳ ಸಾಹಿತ್ಯವನ್ನು 19 ಸಂಪುಟಗಳನ್ನಾಗಿ ಮಾಡಲಾಗಿದೆ. ಅನೇಕರು ಶ್ರೀಗಳ ಸಾಹಿತ್ಯದ ಮೇಲೆ ಪಿಎಚ್ಡಿ ಹಾಗೂ ಎಂಫೀಲ್ ಪದವಿ ಪಡೆದುಕೊಂಡಿದ್ದಾರೆ. ಶ್ರೀಗಳು ಈ ನಾಡಿನ ಕಾಮಧೇನು, ಕಲ್ಪವೃಕ್ಷವಾಗಿದ್ದಾರೆ ಎಂದರು.ಹೊಳಲದ ಚನ್ನಬಸವ ದೇವರು ಮಾತನಾಡಿ, ಇಂದು ಆಧ್ಯಾತ್ಮದ ಕಾರ್ಯಕ್ರಮಗಳಿಗೆ ಜನತೆ ಬರುತ್ತಿಲ್ಲ. ವಚನ ಸಾಹಿತ್ಯ ನಮ್ಮ ಮನಸ್ಸನ್ನು ಅರಳಿಸುತ್ತದೆ. ಅಂತಹ ಸಾಹಿತ್ಯ ಎಲ್ಲರೂ ಓದಬೇಕು. ಶ್ರೀಗಳು ವಚನ ದರ್ಶನ ಪ್ರವಚನ ಮಾಡಿಸುವ ಮೂಲಕ ಬಸವಾದಿ ಶಿವಶರಣರ ತತ್ವಾದರ್ಶ ಎಲ್ಲರಿಗೂ ತಿಳಿಸುತ್ತಿದ್ದಾರೆ ಎಂದರು.
ವಚನ ದರ್ಶನ ಪ್ರವಚನಕ್ಕೆ ಡಾ. ಸಂತೋಷ ಹಿರೇಮಠ ಚಾಲನೆ ನೀಡಿ ಮಾತನಾಡಿ, ವಚನ ಕೇವಲ ಮಾತಾಗುವುದಿಲ್ಲ, ಭಾಷೆ, ಪ್ರಮಾಣ ಆಗುತ್ತದೆ. ಕನ್ನಡ ನೆಲದ ಸ್ವಂತಿಕೆಯ ಗುಣ ಈ ನಮ್ಮ ವಚನ ಸಾಹಿತ್ಯದಲ್ಲಿದೆ ಎಂದರು.ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ಎಂ.ಎಸ್.ಶಿವಶೆಟ್ಟರ, ಡಾ.ಬಿ.ಜಿ.ಜವಳಿ, ಎಂ.ಜಿ.ಗಚ್ಚನ್ನವರ, ಅಂದಪ್ಪ ಗೋಡಿ, ವೀರನಗೌಡ ಗುಡದಪ್ಪನವರ, ಯಾತ್ರಾ ಮಹೋತ್ಸವ ಅಧ್ಯಕ್ಷ ವಿ.ಜೆ.ಹಿರೇಮಠ, ದೇವು ಹಡಪದ, ಮಂಜುನಾಥ ಇಟಗಿ, ದೇವಪ್ಪ ಇಟಗಿ, ನಾಗರಾಜ ಮುರುಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಸ್.ಆರ್. ರಿತ್ತಿ ನಿರೂಪಿಸಿದರು.