ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಹಿಂದಿನ ಕಾಲದಲ್ಲಿ ಭಾರತದಲ್ಲಿ ಶಿಕ್ಷಣದ ವ್ಯವಸ್ಥೆಯಲ್ಲಿ ಅಷ್ಟೊಂದು ಸುಧಾರಣೆ ಇರಲಿಲ್ಲ. ಆದರೆ, ಮಾನವೀಯ ಮೌಲ್ಯಗಳಿಂದ ಕೂಡಿದ ಸಂಸ್ಕಾರ ಪದ್ದತಿಯಿತ್ತು. ಜೊತೆಗೆ ಮನೆ ಬಾಗಿಲಿಗೆ ಬಂದು ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಅವಕಾಶಗಳಿದ್ದವು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆಯಲ್ಲಿ ಹಲವು ಸೌಲಭ್ಯಗಳಿವೆ. ಆದರೆ, ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಸಂಸ್ಕಾರ ಸತ್ತುಹೋಗಿದೆ. ಇಂತಹ ಸಂದರ್ಭದಲ್ಲಿ ಕೌಶಲ್ಯ ತರಬೇತಿ ಶಿಬಿರಗಳು ಪೂರಕವಾಗಿವೆ ಎಂದು ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಹೇಳಿದರು.ಪಟ್ಟಣದ ವಿದ್ಯಾನಗರ ಬಡಾವಣೆಯ ಅಭ್ಯುದಯ ಪಿಯು ಸೈನ್ಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕಿಗಾಗಿ ಉದ್ಯೋಗಕ್ಕಾಗಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೌಶಲ ತರಬೇತಿಗಳು ಪೂರಕವಾಗಿದ್ದು, ಗುಣಮಟ್ಟ ಶಿಕ್ಷಣ ಅಷ್ಟೇ ಮುಖ್ಯವಾಗಿದೆ. ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಮದರಿಯವರು ತಮ್ಮ ಶಿಕ್ಷಣ ಸಂಸ್ಥೆಯಿಂದ ಕಳೇದ ಹಲವು ವರ್ಷಗಳಿಂದ ಬಡ ಕುಟುಂಬಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿ ಮೂಡಿಸಿದ್ದಾರೆ. ಅದರಂತೆ ಸದ್ಯ ಪದವಿ ಸ್ನಾತಕೋತ್ತರ ಪಡೆದ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿ ಶಿಬಿರ ನಡೆಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಿರುವುದು ನಿಜಕ್ಕೂ ಶ್ಲಾಘನಿಯ ಎಂದರು.
ಈ ವೇಳೆ ಅಹಿಲ್ಯಾದೇವಿ ಹೋಳ್ಕರ ಗ್ರಾಮಿಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಮಾತನಾಡಿ,ವಿದ್ಯಾರ್ಥಿಗಳು ಕೇವಲ ರಾಜ್ಯ ಸರ್ಕಾರದ ಉದ್ಯೋಗಕಾಂಕ್ಷಿಯಾಗಿರದೇ ಕೇಂದ್ರ ಸರ್ಕಾರದ ಉದ್ಯೋಗಕ್ಕು ಪ್ರಯತ್ನಿಸಬೇಕು. ಇದರಿಂದ ಉದ್ಯೋಗ ಪಡೆಯಲು ಯಶಸ್ವಿಯಾಗಬಹುದು ಎಂದು ಹೇಳಿದರು.
ಈ ವೇಳೆ ಧಾರವಾಡದ ಸ್ಪರ್ಧಾ ಜೀನಿಯಸ್ ಆಕಾಡೆಮಿ ಉಪನ್ಯಾಸಕ ಸಿದ್ದಣ್ಣ ದಳವಾಯಿ, ಉಪನ್ಯಾಸಕಿ ಪ್ರಿಯಾಂಕ ಪತ್ತಾರ, ಡಾ.ಕೆ.ಅಶೋಕ, ಶೇಖಪ್ಪ ಮೇಟಿ ಸೇರಿ ಇತರರು ಸಾವಿರಾರು ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿದರು .ಈ ವೇಳೆ ಧಾರವಾಡ ವಿವಿಯ ವಿಶ್ರಾಂತ ಕುಲಪತಿ ಡಾ.ಎಚ್.ಬಿ.ವಾಲಿಕಾರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಸುರೇಶ ಹಳೆಮನಿ, ಬಸವರಾಜ ಬಿಜ್ಜುರ, ಆಡಳಿತಾಧಿಕಾರಿ ಬಿ.ಜಿ.ಬಿರಾದಾರ, ಪ್ರಾಂಶುಪಾಲ ಆರ್.ಎಸ್.ಜಡಗಿ, ಪ್ರಾಚಾರ್ಯ ಎಂ.ಎಂ.ಧನೂರ, ಅಕ್ಷರ ದಾಸೋಹದ ಸಾಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಪ್ರೌಢ ಶಾಲೆ ಮುಖ್ಯ ಶಿಕ್ಷಕ ಪ್ರಶಾಂತ ಬಿರಾದಾರ, ರಂಗಸ್ವಾಮಿ.ಎಸ್, ಕಿರಣ ಮದರಿ, ವಿರೇಶ ಹುಲಿಕೇರಿ, ರವಿ ಛಲವಾದಿ, ಬಸವರಾಜ ಗುದಲಮನಿ, ರವಿ ಜಗಲಿ ಸೇರಿ ಹಲವರು ಇದ್ದರು.------
ಕೋಟ್ನಮ್ಮ ಭಾಗದ ಯುವಕ ಯುವತಿಯರು ಕೌಶಲ್ಯ ತರಬೇತಿ ಪಡೆಯಲು ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಗೆ ಹೋಗಬೇಕಾದ ಸ್ಥಿತಿ ಇತ್ತು. ಆದರೆ ಇದು ಕೆಲವರಿಗೆ ಸಾಧ್ಯವಾಗುತ್ತಿರಲಿಲ್ಲಿ. ಇದರಿಂದ ಬಡವರು ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಕಷ್ಟಸಾಧ್ಯವಿತ್ತು. ಇದನ್ನು ಮನಗಂಡು ವಿಶ್ರಾಂತ ಕುಲಪತಿ ಡಾ.ಎಚ್.ಬಿ.ವಾಲಿಕಾರ ಮಾರ್ಗದರ್ಶನದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾರಂಭದಲ್ಲಿಯೇ ಕೌಶಲ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದು ಅಭೂತಪೂರ್ವ ಯಶಸ್ಸು ಕಂಡಿದ್ದು ತೃಪ್ತಿ ತಂದಿದೆ.
ಮಲ್ಲಿಕಾರ್ಜುನ ಮದರಿ, ಅಹಿಲ್ಯಾದೇವಿ ಹೋಳ್ಕರ ಗ್ರಾಮಿಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ