ಎಂ.ಎನ್. ಚಂದ್ರಮೋಹನ್ ಕುಶಾಲನಗರ

ದಕ್ಷಿಣ ಭಾರತದ ಜೀವನಾಡಿ ಎನಿಸಿರುವ ಜೀವನದಿ ಕಾವೇರಿ ಮೂಲದಲ್ಲಿಯೇ ಕಲುಷಿತಗೊಳ್ಳುತ್ತಿದ್ದು, ಜೀವನದಿಯ ಸಂರಕ್ಷಣೆಗಾಗಿ ರಾಜ್ಯ ಸರ್ಕಾರವಾಗಲಿ, ಕೇಂದ್ರವಾಗಲಿ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಕಾವೇರಿ ನದಿ ಸಂರಕ್ಷಣೆ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಬೇಕಿದೆ.

ಕಳೆದ ಎರಡು ದಶಕಗಳಿಂದ ಕಾವೇರಿ ಹಲವು ಕಾರಣಗಳಿಂದ ಬಹುತೇಕ ಕಲುಷಿತ ಗೊಳುತ್ತಿದ್ದು ಇನ್ನೊಂದೆಡೆ ಬೇಸಿಗೆ ಅವಧಿಯಲ್ಲಿ ನದಿ ತನ್ನ ಹರಿವನ್ನು ಸಂಪೂರ್ಣ ಸ್ಥಗಿತಗೊಳಿಸುತ್ತಿರುವ ಆತಂಕಕಾರಿ ಬೆಳವಣಿಗೆ ಗೋಚರಿಸುತ್ತಿದೆ. ಈ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರ ಮೂಲಕ ಸ್ಥಳೀಯ ಆಡಳಿತ ಜಿಲ್ಲಾಡಳಿತ ರಾಜ್ಯ ಕೇಂದ್ರ ಸರ್ಕಾರಗಳಿಗೆ ವಾಸ್ತವ ಅಂಶಗಳೊಂದಿಗೆ ಮನವಿಗಳನ್ನು ನೀಡಿ ನದಿ ಸಂರಕ್ಷಣೆ ಬಗ್ಗೆ ಕ್ರಿಯಾಯೋಜನೆ ರೂಪಿಸುವಂತೆ ಕೋರಿದ್ದು ಇನ್ನೂ ಯಾವುದೇ ರೀತಿಯ ಯೋಜನೆ ರೂಪುಗೊಂಡಿಲ್ಲ. ರಾಜ್ಯ ನೆರೆ ತಮಿಳ್ನಾಡು ರಾಜ್ಯಗಳು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನೀರಿನ ಸೆಲೆಯಾಗಿರುವ ಕಾವೇರಿ ನದಿ ಮೂಲದಲ್ಲಿ ವಿವಿಧ ಕಾರಣಗಳಿಂದ ಸೊರಗುತಿದೆ. ನದಿ ತಟದ ನಾಗರಿಕರು ನೇರವಾಗಿ ನದಿ ನೀರು ಬಳಕೆ ಮಾಡಲು ಯೋಗ್ಯವಾಗಿಲ್ಲ. ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತ ವರದಿಗಳು ಹೊರಬಿದ್ದಿವೆ.

ನದಿ ಸಂರಕ್ಷಣೆ ಸಂಬಂಧ ಸಂಬಂಧಿಸಿದ ಇಲಾಖೆಗಳು ಕೂಡ ದಿವ್ಯನಿರ್ಲಕ್ಷ್ಯ ತಾಳುತ್ತಿವೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದೆ. ನದಿ ತಟಗಳು ಕಾವೇರಿಯ ಎರಡೂ ಕಡೆಗಳಲ್ಲಿ ಅಕ್ರಮವಾಗಿ ಒತ್ತುವರಿಯಾಗುವುದರೊಂದಿಗೆ ಹಲವೆಡೆ ನಿಯಮಬಾಹಿರವಾಗಿ ಅಕ್ರಮವಾಗಿ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿವೆ. ಅವೈಜ್ಞಾನಿಕವಾಗಿ ನಿಯಮ ಬಾಹಿರವಾಗಿ ಪ್ರವಾಸೋದ್ಯಮಕ್ಕೆ ಬಳಸಲಾಗುತ್ತಿದೆ.ಕೋಟ್ಯಂತರ ಜನ ಜಾನುವಾರುಗಳಿಗೆ ಜೀವನದಿಯಾಗಿರುವ ಕಾವೇರಿ ಇತ್ತೀಚಿನ ದಿನಗಳಲ್ಲಿ ತನ್ನ ಒಡಲಲ್ಲಿ ಬಹುತೇಕ ಕಲುಷಿತೆಯನ್ನು ಹೊತ್ತು ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಅರಣ್ಯನಾಶ ಮತ್ತು ಹವಾಮಾನ ವೈಪರಿತ್ಯ, ಏರುಪೇರು ಜೊತೆಗೆ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಹೆಸರಿನಲ್ಲಿ ಕಾವೇರಿಯ ಉಪನದಿಗಳು ಬಹುತೇಕ ಮಾಯವಾಗುತ್ತಿವೆ ಪ್ರಮುಖ ನದಿ ಕಾವೇರಿ ಕೂಡ ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುವ ಬೆಳವಣಿಗೆ ನಡೆಯುತ್ತಿದೆ.