ಸಾರಾಂಶ
ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮವನ್ನು ನಾವೆಲ್ಲರೂ ಪಾಲಿಸಬೇಕು. ದೇಶಕ್ಕೆ ಸಂಕಷ್ಟ ಬಂದಾಗ ದೇಶದ ಪರವಾಗಿ ನಾವೆಲ್ಲರೂ ಒಂದಾಗಿ ದೇಶಪ್ರೇಮ ಮೆರೆಯಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 231ನೇ ಜಯಂತಿ ಅಂಗವಾಗಿ ಇಲ್ಲಿಯ ಚೆನ್ನಮ್ಮ ವೃತ್ತದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಕಳೆದ ಹಲವು ವರ್ಷಗಳಿಂದ ರಾಣಿ ಚೆನ್ನಮ್ಮ ಹಾಗೂ ಅವಳ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಶಿವಾನಂದ ಮುತ್ತಣ್ಣವರ ಪ್ರಶಸ್ತಿ ನೀಡಿತ್ತ ಬಂದಿರುವ ಕಾರ್ಯ ಶ್ಲಾಘನೀಯ. ಕಿತ್ತೂರ ಸಂಸ್ಥಾನವನ್ನು ಕಾಪಾಡಲು ಸಂಗೊಳ್ಳಿ ರಾಯಣ್ಣ ರಾಣಿ ಚೆನ್ನಮ್ಮನವರ ಹೆಗಲಿಗೆ ಹೆಗಲು ಸೇರಿಸಿ ಶ್ರಮಿಸಿದರು. ರಾಯಣ್ಣನ ಹೋರಾಟದ ಕಿಚ್ಚು ಮುಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದರು.
ಇದೇ ವೇಳೆ ಪತ್ರಿಕಾ ರಂಗದಲ್ಲಿ ಕನ್ನಡಪ್ರಭದ ಉಪಸುದ್ದಿ ಸಂಪಾದಕ ಮಧುಕರ್ ಭಟ್, ಛಾಯಾಗ್ರಾಹಕ ಈರಪ್ಪ ನಾಯ್ಕರ್, ಪತ್ರಕರ್ತರಾದ ಕಲ್ಮೇಶ ಪಟ್ಟಣದವರ, ಸದ್ದಾಂ ಮುಲ್ಲಾ, ದೀಪಕ ತಲವಾಯಿ, ಮಹಾಂತೇಶ ಹೂಲಿಹಳ್ಳಿ, ಶಿವರಾಯ ಪೂಜಾರ ಸೇರಿದಂತೆ ಇತರರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾರಿಗೆ ಸಂಸ್ಥೆಯ ಪಾಂಡುರಂಗಿ ಕಿರಣಗಿ, ಪಿಎಸ್ಐ ಅನ್ನಪೂರ್ಣಾ ಸೇರಿದಂತೆ 97 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಕ್ಕೂ ಪೂರ್ವದಲ್ಲಿ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಕುಸ್ತಿ ಪೈಲ್ವಾನ ಯೋಗೇಶ ಬೆಂಗೇರಿ ಅವರು ಸಂಗ್ರಾಣಿ ಕಲ್ಲು ಎತ್ತುವ ಪ್ರದರ್ಶನ ನೀಡಿದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತ್ಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಮುಖಂಡರಾದ ಸದಾನಂದ ಡಂಗನವರ, ನಾಗರಾಜ ಗೌರಿ ವಿಜಯಕುಮಾರ ಅಪ್ಪಾಜಿ, ಜಗದೀಶ ರಿತ್ತಿ, ಸುನೀಲ ರೇವಣಕರ ಸೇರಿದಂತೆ ಇತರರು ಇದ್ದರು.