ಆರೋಗ್ಯ ಇಲಾಖೆಯಿಂದ ನೀಡುವ ಸಲಹೆಗಳನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಿದಲ್ಲಿ ಈ ಮಳೆಗಾಲದಲ್ಲಿಯೇ ಕಾಯಿಲೆಗಳಿಂದ ಮುಕ್ತವಾಗಿ ಬದುಕಬಹುದು.
ರೋಣ: ಮಲೇರಿಯಾ ರೋಗ ನಿರ್ಮೂಲನೆಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಿದಲ್ಲಿ ರೋಗವನ್ನು ಕೊನೆಗೊಳಿಸಬಹುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಬಿ.ಎಸ್. ಭಜಂತ್ರಿ ತಿಳಿಸಿದರು.
ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಜರುಗಿದ ತಾಲೂಕು ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಉದ್ಘಾಟಿಸಿ ಮಾತನಾಡಿ, ಮಳೆಗಾಲ ಆರಂಭವಾಗಿರುವುದರಿಂದ ಎಲ್ಲೆಂದರಲ್ಲಿ ನೀರು ನಿಂತು, ಆ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಹಾಕಿ ಸಂತಾನವೃದ್ಧಿ ಮಾಡಿಕೊಳ್ಳುತ್ತವೆ. ಇಂತಹ ಸೊಳ್ಳೆ ಕಚ್ಚಿದಲ್ಲಿ ಮಲೇರಿಯಾ, ಡೆಂಘೀ ಚಿಕ್ಯೂನ್ ಗುನ್ಯಾದಂಥ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಮುಕ್ತ ಪರಿಸರ ನಿರ್ಮಿಸಿಕೊಂಡು ಕೀಟಜನ್ಯ ರೋಗಗಳಿಂದ ವಿಮುಕ್ತಿ ಪಡೆಯೋಣ ಎಂದರು.ಜಿಲ್ಲಾ ಕೀಟಶಾಸ್ತ್ರಜ್ಞರಾದ ಅನ್ನಪೂರ್ಣ ಶೆಟ್ಟರ್ ಮಾತನಾಡಿ, ಸೊಳ್ಳೆ ಮುಕ್ತ ಪರಿಸರ ಮಾಡಲು ವೈಯಕ್ತಿಕ ರಕ್ಷಣಾ ಕ್ರಮಗಳು, ಜೈವಿಕ ನಿಯಂತ್ರಣ ವಿಧಾನಗಳು, ರಾಸಾಯನಿಕ ನಿಯಂತ್ರಣ ವಿಧಾನಗಳು, ಆರೋಗ್ಯ ಇಲಾಖೆಯಲ್ಲಿ ಲಭ್ಯವಿದ್ದು, ಆರೋಗ್ಯ ಇಲಾಖೆಯಿಂದ ನೀಡುವ ಸಲಹೆಗಳನ್ನು ಪಾಲಿಸಿದಲ್ಲಿ ಮಲೇರಿಯಾ ರೋಗವನ್ನು ಅಂತ್ಯಗೊಳಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅನ್ನದಾನೇಶ್ವರ ವಿಜಯ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಆರ್.ವಿ. ಬಸವರೆಡ್ಡರ ಮಾತನಾಡಿ, ಆರೋಗ್ಯ ಇಲಾಖೆಯಿಂದ ನೀಡುವ ಸಲಹೆಗಳನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಿದಲ್ಲಿ ಈ ಮಳೆಗಾಲದಲ್ಲಿಯೇ ಕಾಯಿಲೆಗಳಿಂದ ಮುಕ್ತವಾಗಿ ಬದುಕಬಹುದು ಎಂದರು.ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಪ್ರಕಾಶ ಕಮತೆ, ಡಾ. ಮಹೇಶ ಹೊಸಕೇರಿ ಡಾ. ನಾಗರಾಜ ಸತ್ತಿಗೇರಿ, ಶಿಕ್ಷಣ ಇಲಾಖೆ ಈಶ್ವರ ಕುರಿ, ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ, ಪ್ರವೀಣ ರೋಣದ, ಬಿ.ಆರ್. ಪಾಟೀಲ, ಲಕ್ಷ್ಮೀ ಹೊಸಮನಿ, ವಿಜಯ ಹಿರೇಮಠ, ಮುಖ್ಯೋಪಾಧ್ಯಾಯ ಎಂ.ವಿ. ವೀರಾಪೂರ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ವಿ. ಜೋಶಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಸಾವಿತ್ರಿ ವಡೆಯರ್ ನಿರೂಪಿಸಿದರು.