ದೇಶದ ನಿಜವಾದ ಸಂಪತ್ತು ಯುವಜನರು, ಮಹಿಳೆಯರಾಗಿದ್ದು, ಇವರನ್ನು ಧರ್ಮದತ್ತ ಸೆಳೆಯುವ ಕೆಲಸ ಮಾಡಬೇಕಿದೆ ಎಂದು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ದೇಶದ ನಿಜವಾದ ಸಂಪತ್ತು ಯುವಜನರು, ಮಹಿಳೆಯರಾಗಿದ್ದು, ಇವರನ್ನು ಧರ್ಮದತ್ತ ಸೆಳೆಯುವ ಕೆಲಸ ಮಾಡಬೇಕಿದೆ ಎಂದು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.ರಂಭಾಪುರಿ ಪೀಠದಲ್ಲಿ ನಡೆದ ನಮ್ಮೂರ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಂದು ಧರ್ಮ ಧರ್ಮಗಳ ನಡುವೆ, ವ್ಯಕ್ತಿ ವ್ಯಕ್ತಿಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಇದು ಸಲ್ಲಬಾರದಾಗಿದೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ ಬೆಳೆಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ರಂಭಾಪುರಿ ಧರ್ಮಪೀಠವು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಈ ಬಾರಿ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ಈ ಮಹೋತ್ಸವದ ಯಶಸ್ಸು ಬಾಳೆಹೊನ್ನೂರಿನ ಜನತೆಯದ್ದಾಗಿದೆ ಎಂದರು.
ಈ ಬಾರಿ ಬಾಳೆಹೊನ್ನೂರಿನ ಸರ್ವ ಜನರನ್ನು ಒಗ್ಗೂಡಿಸಿ ಸಂಘಟಿಸುವ ಮೂಲಕ ಜಾತ್ರಾ ಮಹೋತ್ಸವದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಯಿತು. ಸರ್ವರೂ ಕೂಡ ತಮ್ಮ ಮನೆಯ ಕಾರ್ಯಕ್ರಮದಂತೆ ತೊಡಗಿಸಿಕೊಂಡು ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ ಎಂದರು.ಜಗತ್ತಿನಲ್ಲಿ ಅನ್ನದಿಂದಲೇ ಶಾಂತಿ ನೆಲೆಸಲು ಸಾಧ್ಯವಿದ್ದು, ಇಂದು ಹೋರಾಟ ನಡೆಯುತ್ತಿರುವುದೇ ಅನ್ನ ಮತ್ತು ನೀರಿಗಾಗಿ. ಈ ಹಿನ್ನೆಲೆಯಲ್ಲಿ ರಂಭಾಪುರಿ ಪೀಠವು ಅನ್ನ ದಾಸೋಕ್ಕೆ ಒತ್ತು ಕೊಡುತ್ತಿದೆ. ಸಂಪ್ರದಾಯ, ಪರಂಪರೆ ಜತೆಗೆ ಸಾಮಾಜಿಕ, ರಚನಾತ್ಮಕ ಹಾಗೂ ಗುಣಾತ್ಮಕ ಕಾರ್ಯಕ್ರಮಗಳು ನಡೆಯಬೇಕಿದೆ ಎಂಬುದು ನಮ್ಮ ಆಶಯ ಎಂದರು.
ಮುಂದಿನ ವರ್ಷದ ಜಾತ್ರಾ ಮಹೋತ್ಸವದಲ್ಲೂ ಸಹ ಹಿರಿಯರ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಧರ್ಮಪೀಠದ ಮೇಲಿನ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕಿದೆ. ಜಾತ್ರಾ ಕಾರ್ಯಕ್ರಮದಲ್ಲಿ ಸ್ಥಳೀಯರ ಮಾತುಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.ಜಾತ್ರಾ ಮಹೋತ್ಸವ ಸಮಿತಿಯ ಪ್ರಮುಖ ಎಂ.ಎಸ್.ಚನ್ನಕೇಶವ ಮಾತನಾಡಿ, ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ವಿಶೇಷ ಸಮಿತಿ ರಚನೆ ಮಾಡಿ ಯುವಕರ ಮುಂದಾಳತ್ವದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಸುಮಾರು ೩ ಕಿಮೀ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಾಲಂಕಾರ, ಬ್ಯಾನರ್, ಬಂಟಿಂಗ್ಸ್ ಅಳವಡಿಸಿ ಶೃಂಗಾರ ಮಾಡಲಾಗಿದೆ. ಮುಂದಿನ ವರ್ಷ ಪಟ್ಟಣದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ವತಿಯಿಂದ ಸಂಗ್ರಹಿಸಲಾದ ದೇಣಿಗೆ ಮೊತ್ತವನ್ನು ಜಗದ್ಗುರುಗಳಿಗೆ ನೀಡಿ ಆಶೀರ್ವಾದ ಪಡೆಯಲಾಯಿತು.ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಆರ್.ಡಿ.ಮಹೇಂದ್ರ, ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್, ಟಿ.ಎಂ.ಗುರುಮೂರ್ತಿ, ವಿದ್ಯಾ ಎ.ಶೆಟ್ಟಿ, ಶ್ರೀಕೃಷ್ಣ ಭಟ್, ಸಾಗರ್ ಪಟೇಲ್, ಸಿ.ವಿ.ಸುನೀಲ್, ಎಂ.ಎಸ್.ಪ್ರಸನ್ನ ಕುಮಾರ್, ಮಂಜುನಾಥ್ ತುಪ್ಪೂರು, ಕುಮಾರ್, ಶ್ರೀಪೀಠದ ವ್ಯವಸ್ಥಾಪಕ ಚಂದ್ರಶೇಖರ್, ಎಚ್.ಆರ್.ಆನಂದ್, ವೀರೇಶ ಕುಲಕರ್ಣಿ, ವಿಶ್ವನಾಥ ಹಿರೇಮಠ, ಶಿವಕುಮಾರ್ ಮತ್ತಿತರರು ಹಾಜರಿದ್ದರು.