ಸಾರಾಂಶ
ಗದಗ: ವಿದ್ಯಾರ್ಥಿಗಳು ಎಬಿವಿಪಿ ಸದಸ್ಯತ್ವ ಪಡೆಯುವ ಮೂಲಕ ರಾಷ್ಟ್ರ ಸೇವೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.
ನಗರದ ಜಗದ್ಗುರು ತೋಂಟದಾರ್ಯ ಕಾಲೇಜಿನಲ್ಲಿ ಎಬಿವಿಪಿ ಮಹಾ ಸದಸ್ಯತ್ವ ದಿನದ ಅಂಗವಾಗಿ ನಡೆದ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ. ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ಸದಸ್ಯತ್ವ ಪಡೆದುಕೊಂಡು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಎಬಿವಿಪಿ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ ಎಂದರು.ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸದಾ ಧ್ವನಿಯಾಗಿ ಗುಣಮಟ್ಟ ಶಿಕ್ಷಣಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯ, ವಿದ್ಯಾರ್ಥಿ ವೇತನ, ಸಮರ್ಪಕ ಬಸ್ಗಳ ಸೌಲಭ್ಯ, ಹಾಸ್ಟೆಲ್ಗಳ ಮೂಲಭೂತ ಸೌಲಭ್ಯ ಹೀಗೆ ಹಲವಾರು ಸಂದರ್ಭಗಳಲ್ಲಿ ಎಬಿವಿಪಿ ಹೋರಾಟ ಮಾಡಿಕೊಂಡು ಬಂದಿದೆ. ಹೋರಾಟಗಳ ಜತೆಗೆ ವಿದ್ಯಾರ್ಥಿಗಳಿಗೆ ಹಲವಾರು ಕಾರ್ಯಕ್ರಮಗಳನ್ನು ದೇಶದ ಹಲವಾರು ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನು, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಶಿಬಿರ, ಉಚಿತ ಸಿಇಟಿ, ನೀಟ್ ತರಬೇತಿ ಶಿಬಿರ, ವಿದ್ಯಾರ್ಥಿನಿಯರಿಗೆ ಉಚಿತ ಕರಾಟೆ ತರಬೇತಿ ಹೀಗೆ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿ ಪರಿಷತ್ ಮಾಡಿಕೊಂಡು ಬಂದಿದೆ ಎಂದರು.
ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಎಬಿವಿಪಿಯಾಗಿದೆ, 2025ರಲ್ಲಿ 59 ಲಕ್ಷಕ್ಕೂ ಅಧಿಕ ಸದಸ್ಯತ್ವವನ್ನು ವಿದ್ಯಾರ್ಥಿಗಳು ದೇಶದಲ್ಲಿ ಪಡೆದುಕೊಂಡಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜತೆಗೆ ದೇಶದ ಕಾರ್ಯವನ್ನು ಮಾಡಲು ಒಳ್ಳೆಯ ಅವಕಾಶ ಅದು ಎಬಿವಿಪಿ ಸಂಘಟನೆ, ಯಾವುದೇ ವಿಶ್ವವಿದ್ಯಾಲಯಗಳು ಕಲಿಸದೇ ಇರುವ ಉತ್ತಮ ವ್ಯಕ್ತಿತ್ವದ ನಾಯಕತ್ವ ಗುಣವನ್ನು ಎಬಿವಿಪಿ ಕಲಿಸುತ್ತಿದೆ ಎಂದರು.ಪ್ರಮುಖರಾದ ಗಿರೀಶ ನರಗುಂದ, ಸಚಿನ ಕುಂದರಗಿ, ನಿಖಿತಾ ಸುತಾರ, ಭದ್ರಿನಾಥ ಅಂಗಡಿ, ಮಲ್ಲಿಕಾರ್ಜುನ, ವೀರೇಶ ಇದ್ದರು.