ಸಾರಾಂಶ
ಬ್ಯಾಡಗಿ: ಬೋಧನೆಯನ್ನು ಅರ್ಥೈಸಿಕೊಂಡ ವ್ಯಕ್ತಿಯನ್ನು ಪ್ರಪಂಚಕ್ಕೆ ಕೊಡಬೇಕೆಂಬ ಹಂಬಲವನ್ನು ಪ್ರತಿಯೊಬ್ಬ ಶಿಕ್ಷಕರು ಹೊಂದಿರುತ್ತಾರೆ. ವಿದ್ಯಾರ್ಥಿಗಳೊಂದಿಗಿನ ಇಂತಹ ಸಕಾರಾತ್ಮಕ ಸಂಬಂಧಗಳು ಮಕ್ಕಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಸ್. ಮಂಜುನಾಥಾಚಾರಿ ಅಭಿಪ್ರಾಯಪಟ್ಟರು.ಶಿಡೇನೂರಿನ ಗಡಿಗೋಳ ಬಸಪ್ಪ ದ್ಯಾಮಪ್ಪ ಪ್ರೌಢಶಾಲೆಯ 1999- 2000ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಸಾಮರ್ಥ್ಯ ಸಮಾಜಕ್ಕೆ ಪರಿಚಯಿಸುವುದರೊಂದಿಗೆ ಪ್ರಪಂಚದ ಹಂಬಲವನ್ನು ನೀಗಿಸುವ ಶಕ್ತಿ ಶಿಕ್ಷಕರಲ್ಲಿದೆ. ಹೀಗಾಗಿ ನ್ಯಾಯೋಚಿತ, ಪ್ರಾಮಾಣಿಕ, ವಿಶ್ವಾಸಾರ್ಹ, ಮುಕ್ತ ಬೆಂಬಲ ನೀಡುವಂತಹ ಶಿಕ್ಷಕರು ಪ್ರಸ್ತುತ ದಿನಗಳಲ್ಲಿ ದೇಶಕ್ಕೆ ಅವಶ್ಯವಿದೆ ಎಂದರು.ನಿವೃತ್ತ ಶಿಕ್ಷಕ ಎಸ್.ಡಿ. ಮೂಲಿಮನಿ ಮಾತನಾಡಿ, ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ವಿದ್ಯಾದಾನ ಮಾಡಿ ತನ್ಮೂಲಕ ಬದುಕಿನಲ್ಲಿ ಬದಲಾವಣೆ ತಂದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ಶಿಕ್ಷಕರ ಹೆಸರು ಚಿರಕಾಲವೂ ಹಸಿರಾಗಿರುತ್ತದೆಯೋ ಅಂಥವರನ್ನು ಅತ್ಯುತ್ತಮ ಶಿಕ್ಷಕರೆಂದು ಪರಿಭಾವಿಸಬಹುದು ಎಂದರು.ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಜಿ. ಕೂಡಲ, ಎಂ.ಎಂ. ಸಿರಿಗೆರೆ, ಕೆ. ಮಲ್ಲಿಕಾಜುನ, ಚನ್ನಬಸಪ್ಪ ಲಮಾಣಿ, ಟಿ.ಪಿ. ಕಬ್ಬೂರ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಶಿಕ್ಷಕರಾದ ಡಿ.ಜಿ. ಕಲ್ಲಿಂಗಪ್ಪ, ಎಂ. ಹೊನ್ನಪ್ಪ, ಎ.ಬಿ. ಬಾಳಿಕಾಯಿ, ಶಶಿಧರ ನಾಡಿಗೇರ, ರುದ್ರಪ್ಪ ಗಡಿಗೋಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ವೇದಿಕೆಯಲ್ಲಿ ಪರಮೇಶಗೌಡ ತೆವರಿ, ಈರಣ್ಣ ಮಲ್ಲಾಡದ, ಎಂ.ಎಫ್. ಕರಿಯಣ್ಣನವರ(ಮಾಸಣಗಿ) ಸೇರಿದಂತೆ ಶಿಡೇನೂರ ಗ್ರಾಮದ ಗುರು- ಹಿರಿಯರು, ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಂಕರ ಬಣಕಾರ ಕಾರ್ಯಕ್ರಮ ನಿರ್ವಹಿಸಿದರು.ರಾಷ್ಟ್ರೀಯ ಲೋಕ ಅದಾಲತ್: 1443 ಪ್ರಕರಗಳು ಇತ್ಯರ್ಥ
ರಾಣಿಬೆನ್ನೂರು: ನಗರದ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಬಾಕಿಯಿರುವ 1880 ಪ್ರಕರಣಗಳಲ್ಲಿ 1443 ಪ್ರಕರಣಗಳು ಇತ್ಯರ್ಥಗೊಂಡಿವೆ.ಇತ್ಯರ್ಥಗೊಂಡ ಪ್ರಕರಣಗಳ ಪೈಕಿ ಮೋಟಾರು ವಾಹನಗಳ ಕಾಯ್ದೆಗೆ ಸಂಬಂಧಿಸಿದ 142 ಪ್ರಕರಣಗಳು, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಮೋಟಾರು ವಾಹನ ಕಾಯ್ದೆಯಡಿ ದಾಖಲಾದ ಒಂದು ಪ್ರಕರಣದಲ್ಲಿ ವಿಮಾದಾರರಿಗೆ ಪರಿಹಾರ ರೂಪದಲ್ಲಿ ವಿಮಾ ಕಂಪನಿಯಿಂದ ₹1.68 ಕೋಟಿ ಮೊತ್ತವನ್ನು ರಾಜೀ ಸಂಧಾನದ ಮೂಲಕ ಕೊಡಿಸಲಾಗಿದೆ. 3ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದಲ್ಲಿ ಒಂದು ಕೌಟುಂಬಿಕ ಕಲಹ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಬಿ. ಸಿದ್ಧರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.