ತನ್ನ ೫ ಮೊಬೈಲ್‌ಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ವಿಡಿಯೋ ಮಾಡಿರುವ ಶಿಕ್ಷಕ ಮುನಿಯಪ್ಪನ ಕೃತ್ಯ ಶಿಕ್ಷಕ ವೃತ್ತಿಗೆ ಕಳಂಕ ತಂದಿದ್ದು, ಈ ಕೀಚಕನಿಗೆ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ಮುಂದೆ ಯಾರೂ ಇಂತಹ ಕೃತ್ಯ ನಡೆಯದಂತೆ ಎಚ್ಚರಿಕೆಯ ಗಂಟೆಯಾಗಬೇಕು.

ಕನ್ನಡಪ್ರಭ ವಾರ್ತೆ ಮಾಲೂರು

ವಸತಿ ಶಾಲೆಯ ಹೆಣ್ಣು ಮಕ್ಕಳ ಪೋಟೋ ತೆಗೆಯುತ್ತಿದ್ದ ಚಿತ್ರಕಲಾ ಶಿಕ್ಷಕ ಮುನಿಯಪ್ಪನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನೆಡೆಸಿ ತಹಸೀಲ್ದಾರ್‌ ಗೆ ಮನವಿ ಪತ್ರ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನ ಹಳ್ಳಿ ನಾಗರಾಜ್‌, ತಾಲೂಕಿನ ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕನಾಗಿದ್ದ ಬಂಗಾರಪೇಟೆಯ ಮುನಿಯಪ್ಪ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ಹೆಣ್ಣು ಮಕ್ಕಳ ನಗ್ನ ಚಿತ್ರ ಸಂಗ್ರಹಿಸಿದ ಘಟನೆ ತೀವ್ರ ಕಳವಳಕಾರಿ ಎಂದರು.

ಆರೋಪಿ ಮನವಿ ತಿರಸ್ಕೃತ

ಈಗಾಗಲೇ ಮಾಸ್ತಿ ಪೊಲೀಸರು ಫೋಕ್ಸೋ ಕಾಯ್ದೆಯಡಿ ಶಿಕ್ಷಕ ಮುನಿಯಪ್ಪನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಆದರೆ ಶಿಕ್ಷಕ ವೃತ್ತಿಗೆ ಕುಂದು ತಂದಿರುವ ಆರೋಪಿ ಪ್ರಕರಣವನ್ನು ಕೈ ಬಿಡುವಂತೆ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಅಲ್ಲದೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ ಎಂದರು.

ತನ್ನ ೫ ಮೊಬೈಲ್‌ಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ವಿಡಿಯೋ ಮಾಡಿರುವ ಶಿಕ್ಷಕ ಮುನಿಯಪ್ಪನ ಕೃತ್ಯ ಶಿಕ್ಷಕ ವೃತ್ತಿಗೆ ಕಳಂಕ ತಂದಿದ್ದು, ಈ ಕೀಚಕನಿಗೆ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ಮುಂದೆ ಯಾರೂ ಇಂತಹ ಕೃತ್ಯ ನಡೆಯದಂತೆ ಎಚ್ಚರಿಕೆಯ ಗಂಟೆಯಾಗಲಿ ಎಂದು ಅಗ್ರಹಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಎಂ.ರಾಜು, ತಾಲೂಕು ಅಧ್ಯಕ್ಷ ಹೆಚ್.ವೈ.ನಾರಾಯಣಸ್ವಾಮಿ ,ಆಟೋ ಶ್ರೀನಿವಾಸ್‌,ಮಾದನಹಟ್ಟಿ ರವಿ,ಆಂಜಿ,ಕೆ.ಎಂ.ಜಗದೀಶ್‌ ,ಮಂಜುನಾಥ್‌ ಗೌಡ,ಆಟೋ ಮಂಜು,ಮಂಗಾಪುರಸ್ವಾಮಿ, ಚೆನ್ನಕೃಷ್ಣ, ಮಂಜು ತೇಲಿ, ನಾಗಯ್ಯ, ಅಜಾದ್‌, ದಸ್ತಗಿರಿ, ಶ್ರೀನಾಥ್‌, ಭವನಹಳ್ಳಿಮಂಜು, ವೆಂಕಟೇಶ್‌ ಇನ್ನಿತರರು ಇದ್ದರು.