ಸಾರಾಂಶ
- ಪೊಲೀಸ್, ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ಬೇಕು: ನಟ ಚೇತನ್ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ ಸಾಮಾಜಿಕ ಅಸಮಾನತೆಗೆ ಸ್ವಹಿತಾಸಕ್ತಿ, ಸ್ವಪ್ರತಿಷ್ಟೆಯೇ ಮೂಲ ಕಾರಣವಾಗಿದೆ. ಇದನ್ನು ಹೋಗಲಾಡಿಸಲು ಪುರುಷ ಪ್ರಧಾನ ವ್ಯವಸ್ಥೆ, ಬ್ರಾಹ್ಮಣ್ಯದ ವ್ಯವಸ್ಥೆ, ಬಂಡವಾಳಶಾಹಿ ವ್ಯವಸ್ಥೆಗಳ ವಿರುದ್ಧ ಎಚ್ಚೆತ್ತ ಸಮಾಜ ಪ್ರತಿರೋಧ ಒಡ್ಡಬೇಕಿದೆ ಎಂದು ನಟ ಅಹಿಂಸಾ ಚೇತನ್ ಹೇಳಿದರು.ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಮಾನತೆಗಾಗಿ ನಾವು ಶೀರ್ಷಿಕೆಯಡಿ ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಿದ ಅವರು, ರಾಜಕೀಯ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ನಾವೆಲ್ಲರೂ ಸಂಘಟಿತ ಹೋರಾಟ ರೂಪಿಸಬೇಕಿದೆ ಎನ್ನುವ ಮೂಲಕ 2028ರ ವೇಳೆಗೆ ಹೊಸ ಪಕ್ಷ ಹುಟ್ಟುಹಾಕುವ ಸುಳಿವು ನೀಡಿದರು.
ಭ್ರಷ್ಟಾಚಾರ ವಿರೋಧಿ ಧೋರಣೆ ಹೆಚ್ಚಾಗಬೇಕಿದೆ. ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕಿದೆ. ಶಿಕ್ಷಣ, ಆರೋಗ್ಯ ವ್ಯವಸ್ಥೆ ಕೇವಲ ಶ್ರೀಮಂತರಿಗಷ್ಟೇ ಸೀಮಿತವಾಗದೇ, ವ್ಯಾಪಕ ಪರಿವರ್ತನೆ ತರಬೇಕಿದೆ. ಪೊಲೀಸ್, ಜೈಲು, ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.ಹಿರಿಯ ವಕೀಲ ಬಿ.ಎಂ.ಹನುಮಂತಪ್ಪ ಮಾತನಾಡಿ, ಹೋರಾಟಗಾರರಿಗೆ ಸಿಟ್ಟು ಬರಬೇಕು, ಅದು ನೈತಿಕ ಮತ್ತು ನೈಜವಾಗಿರಬೇಕು. ಅದು ಕೊಲ್ಲುವ ಸಿಟ್ಟಾಗಬಾರದು, ಆರೆಸ್ಸೆಸ್ ನೀಡುವ ತ್ರಿಶೂಲದ ಬದಲಿಗೆ ಪುಸ್ತಕ ನೀಡುವಂತಾಗಬೇಕು. ಆಡಳಿತ ಮಾಡುವ ರಾಜಕಾರಣಿಗಳಿಗೆ ಧರ್ಮ ನಿರಪೇಕ್ಷತೆ ಇರಬೇಕು. ನಮ್ಮ ದೇಶದ ಸಂವಿಧಾನ ಸತ್ತವರ ಚರಿತ್ರೆಯಲ್ಲ. ಈ ದೇಶದ ಜನರ ಬದುಕು ಕಟ್ಟುವ ಸಂಹಿತೆ, ಹೋರಾಟ ನಿರಂತರತೆ ಆಗಿರಬೇಕು. ಮೌಢ್ಯಗಳ ವಿರುದ್ಧ ಹೋರಾಟ ನಿರಂತರವಾಗಿರಬೇಕು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, ದೇಶ ಪುರೋಹಿತಶಾಹಿ ವ್ಯವಸ್ಥೆ ಮತ್ತು ಕೋಮುವಾದಿ ಸರ್ಕಾರದ ಆಡಳಿತಕ್ಕೆ ಸಿಕ್ಕಿ ನಲುಗುತ್ತಿದೆ. ಬಹುಜನರು ಎಚ್ಚೆತ್ತು, ಪರ್ಯಾಯ ರಾಜಕೀಯ ಶಕ್ತಿ ಸ್ಥಾಪಿಸಲು ಒಗ್ಗೂಡಬೇಕಾಗಿದೆ. ನೀಲಿ, ಕೆಂಪು, ಹಸಿರು ಚಳವಳಿಗಳು ಒಗ್ಗೂಡಿ ರಾಜಕೀಯ ಸ್ಥಾಪಿತ ಹಿತಾಸಕ್ತಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದರು.ನಿವೃತ್ತ ಎಸ್ಪಿ ರವಿನಾರಾಯಣ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡ ತೇಜಸ್ವಿ ಪಟೇಲ್, ಸಿಐಟಿಯು ಆನಂದರಾಜ, ಶ್ರೀನಿವಾಸ, ಸಿಪಿಐನ ಐರಣಿ ಚಂದ್ರು, ಆವರಗೆರೆ ವಾಸು, ದಲಿತ ಚಳವಳಿಯ ಎಚ್.ಮಲ್ಲೇಶ, ಎಚ್.ಸಿ.ಮಲ್ಲಪ್ಪ, ಡಿ.ಹನುಮಂತಪ್ಪ, ಗಾಂಧಿನಗರ ನಿಂಗರಾಜ, ಚಿಕ್ಕಮಗಳೂರು ಮೋಹನ, ಕಬ್ಬಳ್ಳಿ ಮೈಲಪ್ಪ, ಸಿ.ಬಸವರಾಜ, ಕತ್ತಲಗೆರೆ ತಿಪ್ಪಣ್ಣ, ಆವರಗೆರೆ ಬಾನಪ್ಪ, ಆವರಗೆರೆ ತಿಪ್ಪೇಶ, ಪೀಪಲ್ಸ್ ಲಾಯರ್ಸ್ ಗಿಲ್ಡ್ ಅನೀಸ್ ಪಾಷ, ಅಬ್ದುಲ್ ಘನಿತಾಹೀರ್, ರೈತ ಸಂಘದ ಬಲ್ಲೂರು ರವಿಕುಮಾರ, ಮಹಾದೇವಿ ಮಾತನಾಡಿದರು. ಹೋರಾಟಗಾರರಾದ ಬಿ.ಎಂ.ನಿರಂಜನ, ಜಿಗಳಿ ಹಾಲೇಶ, ಚಿದಾನಂದಪ್ಪ, ಕುಂದುವಾಡ ಮಂಜುನಾಥ, ಎಲ್.ಜಯಣ್ಣ, ವಕೀಲರಾದ ಭೈರೇಶ್, ಅಂಜಿನಪ್ಪ ನೀಲಗುಂದ, ಛಲವಾದಿ ಮಹಾಸಭಾದ ಅಧ್ಯಕ್ಷ, ನಿವೃತ್ತ ಎಸ್ಪಿ ಎನ್.ರುದ್ರಮುನಿ, ಎಲ್.ನಿರಂಜನಮೂರ್ತಿ, ಕಬ್ಬಳ್ಳಿ ಪರಸಪ್ಪ, ಗೋಶಾಲೆ ಸತೀಶ, ರಾಘವೇಂದ್ರ ಕಡೇಮನಿ ಇತರರು ಇದ್ದರು.
- - --30ಕೆಡಿವಿಜಿ5.ಜೆಪಿಜಿ:
ದಾವಣಗೆರೆ ಹಳೇ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಟ ಚೇತನ್ ಅಹಿಂಸಾ ಸಮಾನತೆಗಾಗಿ ನಾವು ಶೀರ್ಷಿಕೆಯಡಿ ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.