ಎಸ್ಸಿ-ಎಸ್ಟಿ ಜನರ ಬದುಕಿನ ಉನ್ನತಿಗಾಗಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎಸ್ಸಿ-ಎಸ್ಟಿ ಜನರ ಬದುಕಿನ ಉನ್ನತಿಗಾಗಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪರಿಶಿಷ್ಟರಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ತನ್ನ ಬದ್ಧತೆ ಪ್ರದರ್ಶಿಸಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ಹೆಚ್ಚಳ ಮಾಡಿದ್ದು, ಈ ಸಂಬಂಧ ಕೆಲವರು ತಕಾರರು ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ತೀರ್ಪು ಹೊರಬೀಳಬೇಕಾಗಿದೆ ಎಂದರು.

ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಎಸ್ಸಿ-2, ಎಸ್‌ಟಿ-4 ರಷ್ಟು ಮೀಸಲಾತಿ ಪ್ರಮಾಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬಿಜೆಪಿ ಮುಖಂಡರು, ಸಂಸದರು, ಶಾಸಕರು ಎಲ್ಲರೂ ಸೇರಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಸತ್ ಅಂಗೀಕಾರ ಮುದ್ರೆ ನೀಡಿ, ಕಾಯ್ದೆ ಮಾಡುವಂತೆ ಒತ್ತಡ ತರಬೇಕಿದೆ ಎಂದರು.

ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣ ಶೇ.50 ಮೀರದಂತೆ ತೀರ್ಪು ನೀಡಿದೆ. ಜೊತೆಗೆ ರಾಜ್ಯಗಳಲ್ಲಿನ ಪರಿಸ್ಥಿತಿ ಅವಲೋಕಿಸಿ ಹೆಚ್ಚಳ ಮಾಡುವುದು ಅನಿವಾರ್ಯ ಇದ್ದಲ್ಲಿ ಮಾಡಬಹುದೆಂದು ತಿಳಿಸಿದೆ. ಈಗಾಗಲೇ ಬಹಳಷ್ಟು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಿದ್ದು, ಎಲ್ಲರೂ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದಾರೆ ಎಂದರು.

ಸ್ವತಂತ್ರ್ಯ ಪೂರ್ವದಲ್ಲಿ ನಿಗದಿ ಆಗಿದ್ದ ಮೀಸಲಾತಿ ಪ್ರಮಾಣ ಈಗಲೂ ಚಾಲ್ತಿಯಲ್ಲಿದೆ. ಈಗ ಜನಸಂಖ್ಯೆ ದುಪ್ಪಟ್ಟು ಆಗಿದೆ. ಜೊತೆಗೆ ಎಸ್ಸಿ ಪಟ್ಟಿಗೆ ಅನೇಕ ಜಾತಿಗಳು ಸೇರ್ಪಡೆಗೊಂಡಿವೆ. ಅನಿವಾರ್ಯವಾಗಿ ಮೀಸಲಾತಿ ಹೆಚ್ಚಳ ಮಾಡಲೇಬೇಕಾಗಿದೆ ಎಂದರು.

ಒಳಮೀಸಲಾತಿ ವಿಷಯದಲ್ಲಿ ಯಾವುದೇ ರೀತಿ ಗೊಂದಲ ಇಲ್ಲ. ರಾಜ್ಯದಲ್ಲಿ ಈಗಾಗಲೇ ಅನುಷ್ಠಾನದಲ್ಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅದರ ಫಲವನ್ನು ಎಸ್ಸಿಯಲ್ಲಿರುವ ಎಲ್ಲ ವರ್ಗದವರು ಪಡೆದಿದ್ದಾರೆ. ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಸಲು ಕೋರ್ಟ್ ಕೂಡ ಅನುಮತಿ ನೀಡಿದೆ. ಎರಡುವರೆ ವರ್ಷದಿಂದಲೂ ಒಳಮೀಸಲಾತಿ ಕಾರಣಕ್ಕೆ ಉದ್ಯೋಗ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಎಲ್ಲ ವರ್ಗದ ವಿದ್ಯಾವಂತ ನಿರುದ್ಯೋಗಿಗಳು ಹಣ ಕೊಟ್ಟು ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯುತ್ತಿದ್ದಾರೆ. ಅವರೆಲ್ಲರಿಗೂ ನ್ಯಾಯ ದೊರಕಿಸಿಕೊಡಲು ಸರ್ಕಾರ ತಕ್ಷಣವೇ ಎಲ್ಲ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕೋರ್ಟ್ ತೀರ್ಪು ಬರುವವರೆಗೂ ಕಾಯಬಾರದು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಂಡಿದ್ದು, ಅದಕ್ಕೆ ಕಾನೂನು ರೂಪ ನೀಡಲು ವಿಧಾನಸಭೆಯ ಕೆಳ-ಮೇಲ್ಮನೆಯಲ್ಲಿ ಸರ್ವ ಸಮ್ಮತ ಒಪ್ಪಿಗೆ ಪಡೆದು ಕಳುಹಿಸಿಕೊಟ್ಟಿದ್ದ ವರದಿಯನ್ನು ರಾಜ್ಯಪಾಲರು ಕೆಲ ಅಂಶಗಳ ಸ್ಪಷ್ಟನೆ ಕೇಳಿ ವಾಪಸ್ಸು ಕಳುಹಿಸಿದ್ದಾರೆ. ಈ ವಿಷಯದಿಂದ ಮಾದಿಗ ಸಮುದಾಯದಲ್ಲಿನ ಕೆಲವರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯಪಾಲರು ಒಪ್ಪಲಿ-ಒಪ್ಪದಿರಲಿ ಒಳಮೀಸಲಾತಿ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೇವಲ ಕಾನೂನು ರೂಪ ನೀಡಲು ಮಾತ್ರ ಸಮಸ್ಯೆ ಆಗಲಿದೆ. ಆದ್ದರಿಂದ ಭೀತಿ ಬೇಕಿಲ್ಲ ಎಂದರು. ಮಾದಿಗ ಸಮುದಾಯದ ರವಿವರ್ಮ, ರವಿಚಂದ್ರ, ಅನಿಲ್ ಕೋಟಿ ಇದ್ದರು.