ಸಾರಾಂಶ
- ಹಡಪದ ಅಪ್ಪಣ್ಣ ಜಯಂತಿಯಲ್ಲಿ ಭಾವಚಿತ್ರಕ್ಕೆ ಶಾಂತನಗೌಡ ಪುಪ್ಪಾರ್ಚನೆ - - -
ಕನ್ನಡಪ್ರಭ ವಾರ್ತೆ ಹೊನ್ನಾಳಿಭಾರತೀಯ ಇತಿಹಾಸದಲ್ಲಿ ಬಂದು ಹೋದ ಎಲ್ಲ ಮಹಾನೀಯರು ನೂರಾರು ವರ್ಷಗಳದರೂ ಇಂದಿಗೂ ಅವರ ತತ್ವ-ಸಿದ್ಧಾಂತಗಳು ಪ್ರಸ್ತುತವಾಗಿವೆ. ಇದಕ್ಕೆ ಕಾರಣ ಅವರ ನಿಸ್ವಾರ್ಥ ಸಮಾಜಮುಖಿ ಚಿಂತನೆಗಳು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಪ್ಪಾರ್ಚನೆ, ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಹಡಪದ ಸಣ್ಣ ಸಮಾಜವಾಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕಾಯಕ ಸೇವೆಯಿಂದ ಗುರುತಿಸಿಕೊಂಡಿದ್ದೆ. ಈ ಸಮಾಜದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುವ ಅವಶ್ಯಕತೆ ಇದೆ. ಈ ಸಮಾಜದ ಪರವಾಗಿ ಎಂದಿಗೂ ಬೆಂಬಲವಾಗಿರುವ ಭರವಸೆ ನೀಡಿದರು.
ಸಮಾಜದ ಅಧ್ಯಕ್ಷ ಕೂಲಂಬಿ ತಿಪ್ಪೇಶಪ್ಪ ಅಧ್ಯಕ್ಷತೆ ವಹಿಸಿ, ಪ್ರತಿದಿನ ಕ್ಷೌರಿಕ ವೃತ್ತಿ ಮಾಡಿಕೊಂಡು ಜೀವನ ಸಾಗಿಸುವ ಅತ್ಯಂತ ಸಣ್ಣ ಸಮಾಜ ನಮ್ಮದು, ಹೀಗಿರುವಾಗ ಕೆಲವರು ನಮ್ಮ ಸಮಾಜವನ್ನು ಹಿಂದೂ ವೀರಶೈವ ಹಡಪದ, ಲಿಂಗಾಯತ ಹಡಪದ ಎಂದು ದಾಖಲಾತಿಗಳಲ್ಲಿ ಸೇರಿಸಿ ದೊಡ್ಡ ತಪ್ಪು ಮಾಡಿದ್ದಾರೆ. ಈ ತಪ್ಪುಗಳಿಂದ ನಮ್ಮ ಸಮಾಜ ಮುಂದುವರೆದ ''''''''3 ಬಿ''''''''ಗೆ ಸೇರ್ಪಡೆಯಾಗಿದೆ. ಇದರಿಂದ ನಮ್ಮ ಸಮಾಜಕ್ಕೆ ಸಲ್ಲಬೇಕಾದ ಯಾವ ಸವಲತ್ತುಗಳು ಸಲ್ಲುತ್ತಿಲ್ಲ. ಆದ್ದರಿಂದ ನಮ್ಮ ಸಮಾಜದ ಮಕ್ಕಳ ಜಾತಿ ಕಾಲಂಗೆ "ಹಡಪದ ಇಲ್ಲವೇ ಕ್ಷೌರಿಕ " ಎಂದೇ ನಮೂದು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಉಪನ್ಯಾಸಕ ಬಸವರಾಜ್ ಮಾತನಾಡಿ, ಕ್ರಾಂತಿಯೋಗಿ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಹಡಪದ ಅಪ್ಪಣ್ಣ ಅವರಿಗೆ ವಿಶೇಷ ಸ್ಥಾನಮಾನ ಕೊಟ್ಟಿದ್ದರು. ಶಿವಶರಣರಿಗೆ ಅಪ್ಪಣ್ಣ ಅವರು ತಮ್ಮ ಕ್ಷೌರಿಕ ವೃತ್ತಿ ಮಾಡಿಕೊಂಡು ಬಸವಣ್ಣನವರ ಆಶಯದಂತೆ ನಡೆದುಕೊಳ್ಳುತ್ತಿದ್ದರು. ಬಸವಣ್ಣನವರು ಅಪ್ಪಣ್ಣ ಅವರನ್ನು ಅಪ್ಪ ಎಂದು ಕರೆಯುತ್ತಿದ್ದರೆ, ಅಪ್ಪಣ್ಣ ಅವರು ಬಸವಣ್ಣನವರನ್ನು ಅಣ್ಣ ಎಂದು ಕರೆಯುತ್ತಿದ್ದರು. ಹೀಗಾಗಿ ಹಡಪದ ಅಪ್ಪಣ್ಣ ಎಂದು ಪ್ರಸಿದ್ಧಿಯಾದರು ಎಂದು ವಿವರಿಸಿದರು.
ಗ್ರೇಡ್-2 ತಹಸೀಲ್ದಾರ್ ಸುರೇಶ್, ಬಿ.ಆರ್.ಸಿ. ಅರುಣ್ಕುಮಾರ್ ಹಡಪದ ಅಪ್ಪಣ್ಣ ಅವರ ಕುರಿತು ಮಾತನಾಡಿದರು. ಹಡಪದ ಅಪ್ಪಣ್ಣ ಸಮಾಜದ ವೈ.ಜಿ. ಪರಮೇಶ್, ವಿರೂಪಾಕ್ಷಪ್ಪ, ಮಂಜು, ಸುರೇಶ್ ಹರಳಹಳ್ಳಿ, ರಾಜ್ಯ ಸಮಿತಿ ಸದಸ್ಯ ವೀರೇಶಪ್ಪ, ಮಾಲತೇಶ್, ಹನುಮಂತಪ್ಪ, ಬಸವರಾಜ, ಮೌಳಿಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
- - - -21ಎಚ್.ಎಲ್.ಐ3:ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.