ಜಿಲ್ಲೆಯ ವಿಭಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ನಿರ್ಧಾರ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯ ವಿಭಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ನಿರ್ಧಾರ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಜಿಲ್ಲಾ ಬಾಲಭವನದ ಒಳಾಂಗಣ ಬಾಕ್ಸ್ ಕ್ರಿಕೆಟ್ ಮೈದಾನ ಉದ್ಘಾಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕೆಂದು ಈಗಾಗಲೇ ಹಲವು ಬಾರಿ ಜಿಲ್ಲೆಯ ಮುಖಂಡರೆಲ್ಲರೂ ಸೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಆದರೆ, ಈ ಕುರಿತು ಸರ್ಕಾರ, ಸಿಎಂ ಸಿದ್ದರಾಮಯ್ಯನವರೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ಅನುದಾನ ಕಾಯಬೇಕಿಲ್ಲ, ಆಯಾ ಇಲಾಖೆಗಳಲ್ಲಿ ಲಭ್ಯವಿರುವ ಅನುದಾನ ಬಳಸಿ ಅಭಿವೃದ್ಧಿ ವೇಗ ಹೆಚ್ಚಿಸಬಹುದು. ಟ್ರಾಫಿಕ್ ಸಮಸ್ಯೆ ಉದ್ಭವಿಸದಂತೆ ಬರುವ ದಿನಗಳಲ್ಲಿ ಅಶೋಕ ವೃತ್ತ, ಚನ್ನಮ್ಮ ವೃತ್ತ, ಕೊಲ್ಲಾಪುರ ವೃತ್ತವನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಭರವಸೆ ನೀಡಿದರು.ನವಿಲುತೀರ್ಥ ಜಲಾಶಯದಿಂದ ಅವಳಿ ನಗರಗಳಿಗೆ ನೀರು ಪೂರೈಸುವ ವಿಚಾರದಲ್ಲಿ ಪ್ರತಿಕ್ರಿಯಿಸಿ, ಕುಡಿಯುವ ನೀರಿನ ಬೇಡಿಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ, ಹಿಪ್ಪರಗಿ ಜಲಾಶಯದಲ್ಲಿ ಸದ್ಯಕ್ಕೆ ಅಗತ್ಯವಿರುವಷ್ಟು ನೀರು ಸಂಗ್ರಹವಿದೆ. ಸದ್ಯಕ್ಕೆ ಮಹಾರಾಷ್ಟ್ರದಿಂದ ನೀರು ಕೇಳುವ ಪರಿಸ್ಥಿತಿ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದಲ್ಲಿ ಪಕ್ಷಾತೀತವಾಗಿ ನೀರು ತರಲು ಶ್ರಮಿಸುವುದಾಗಿ ತಿಳಿಸಿದರು.ಮಹಾನಗರ ಪಾಲಿಕೆಯ ಮಹಾಪೌರ ಚುನಾವಣೆಯ ಬಗ್ಗೆ ಮಾತನಾಡಿ, ಕಾಂಗ್ರೆಸ್ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಸಂಖ್ಯಾಬಲ ಯಾರ ಪರವಿದೆಯೋ ಅವರು ಅಧಿಕಾರ ನಡೆಸಲಿ ಎಂದರು.1997ರಲ್ಲಿ 2 ಎಕರೆಯಲ್ಲಿ ನಿರ್ಮಿಸಿದ ಬಾಲ ಭವನ ಪಾಳು ಬಿದ್ದಿರುವುದು ಕಂಡು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಸರ್ಕಾರಿ ಶಾಲೆ ಮಕ್ಕಳಿಗಾಗಿ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಪಡಿಸಲು ಮುಂದಾಗಿ ₹35 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಬಾಕ್ಸ್ ಕ್ರಿಕೆಟ್ ಮೈದಾನ ನಿರ್ಮಿಸಲಾಗಿದೆ. ಇದಕ್ಕೆ ಬಾಲ ಭವನದ ₹20 ಲಕ್ಷ ಮತ್ತು ಶಾಸಕರ ಅನುದಾನದ ₹15 ಲಕ್ಷ ಬಳಸಲಾಗಿದೆ. ಸರ್ಕಾರಿ ಶಾಲೆ ಮಕ್ಕಳಿಗಾಗಿ ರಾಜ್ಯದಲ್ಲಿ ಬೇರೆ ಎಲ್ಲೂ ಇಂಥ ವಿಶೇಷ ಮೈದಾನ ನಿರ್ಮಿಸಿಲ್ಲ ಎಂದು ರಾಹುಲ್ ಶಿಂಧೆ ಮಾಹಿತಿ ನೀಡಿದರು.ಇಲ್ಲಿ ಕನಿಷ್ಠ 25 ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡುವ ಉದ್ದೇಶವಿದ್ದು, ಐವರು ಅಂಗವಿಕಲರಿಗೆ ಅವಕಾಶವಿದೆ. ಮುಂದಿನ ದಿನಗಳಲ್ಲಿ 10 ಖಾಸಗಿ ಶಾಲೆ ಮಕ್ಕಳಿಗೂ ಅವಕಾಶ ನೀಡಲಾಗುವುದು. ಅವರು ನಿಗದಿತ ಶುಲ್ಕ ಭರಿಸಬೇಕು. ಉಚಿತ ಊಟ ಹಾಗೂ ಹಾಸ್ಟೇಲ್ ವ್ಯವಸ್ಥೆಯಿದೆ. ಆನಂದ ಅಕಾಡೆಮಿ ಎಂಬ ಕ್ರಿಕೆಟ್ ಸಂಸ್ಥೆಯ ಜತೆಗೆ ಒಡಂಬಡಿಕೆ ಆಗಿದೆ. ರಣಜಿ ಅನುಭವಿ ಆಟಗಾರರು ತರಬೇತಿ ನೀಡುವರು.ಗ್ರಾಮೀಣ ಮಕ್ಕಳು ರಾಷ್ಟ್ರಮಟ್ಟದಲ್ಲಿ ಮಿಂಚಲಿ: ಸಚಿವ ಸತೀಶ
ಬೆಳಗಾವಿ: ಕ್ರಿಕೆಟ್ನಲ್ಲಿ ಈಗ ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತಿವೆ. ಅದಕ್ಕೆ ತಕ್ಕಂತೆ ಮಕ್ಕಳಿಗೆ ತರಬೇತಿ ಕೊಡಿಸುವುದು ಅಗತ್ಯ. ಇದರಿಂದ ಗ್ರಾಮೀಣ ಮಕ್ಕಳೂ ರಾಷ್ಟ್ರಮಟ್ಟದಲ್ಲಿ ಮಿಂಚಬಲ್ಲರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜವಾಹರ ಬಾಲಭವನ ಸೊಸೈಟಿ, ಜಿಲ್ಲಾ ಬಾಲ ಭವನ ಸಮಿತಿ ಆಶ್ರಯದಲ್ಲಿ ಬಾಕ್ಸ್ ಕ್ರಿಕೆಟ್ ಮೈದಾನ ಉದ್ಘಾಟಿಸಿ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಬಾಲ ಭವನದಿಂದ ಬೆಳಗಾವಿಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲವಾಗುವಂತೆ ಬಾಕ್ಸ್ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲಾಗಿದೆ ಎಂದರು.ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಆಸಕ್ತಿ ವಹಿಸಿ ಈ ಯೋಜನೆ ರೂಪಿಸಿದ್ದಾರೆ. ಬಾಲಭವನದಿಂದ, ಜಿಲ್ಲಾ ಪಂಚಾಯತಿಯಿಂದ ಹಾಗೂ ಶಾಸಕ ಆಸೀಫ್ ಸೇಠ್ ಅವರ ಶಾಸಕರ ಅನುದಾನದಿಂದ ಹಣ ಭರಿಸಲಾಗಿದೆ ಎಂದರು.ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳಕರ, ಬಡಾಲ ಅಂಕಲಗಿ ಕೌರಿಗುಡ್ಡದಲ್ಲಿ ಕೇಂದ್ರ ಸರ್ಕಾರದಿಂದ ಸೌರ ಘಟಕ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲಾಗಿದೆ. ಸರ್ಕಾರಿ ಜಾಗದಲ್ಲಿ ಸರ್ಕಾರಿ ಯೋಜನೆ ರೂಪುಗೊಳ್ಳುತ್ತಿದೆ. ಇದರಲ್ಲಿ ರಾಜಕೀಯ ಏನು ಬಂತು? ಅನುಮತಿ ಇಲ್ಲದೇ ಮರ ಕಡಿದಿದ್ದರೇ ಅಂಥವರ ವಿರುದ್ಧ ಕ್ರಮಕ್ಕೆ ಎಫ್ಐಆರ್ ಮಾಡಲಾಗಿದೆ ಎಂದರು.ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೊ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಕಳವಳಕಾರಿ. ಈ ಅನಿಷ್ಠ ಪದ್ಧತಿಗಳನ್ನು ಬೇರು ಮಟ್ಟದಿಂದ ಕಿತ್ತುಹಾಕಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಎಲ್ಲ ಇಲಾಖೆಗಳ, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.ಶಾಸಕ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ್, ಮಹಿಳಾ ಅಭಿವೃದ್ಧಿ ಅಧಿಕಾರಿ ಕಾಂಚನ ಅಮಟೆ, ಸಿಡಿಪಿಒಗಳಾದ ರಾಮಮೂರ್ತಿ ಕೆ.ವಿ, ಸುಮಿತ್ರಾ, ಆನಂದ ಅಕಾಡೆಮಿಯ ಆನಂದ ಕರಡಿ ಹಲವರು ಇದ್ದರು.ಸಚಿವೆ ಲಕ್ಷ್ಮೀ ಬೌಲಿಗೆ ಸಚಿವ ಸತೀಶ ಬೋಲ್ಡ್!
ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರು ಶುಕ್ರವಾರ ಕ್ರಿಕೆಟ್ ಆಡಿ ಖುಷಿಪಟ್ಟರು. ಇಲ್ಲಿನ ಶ್ರೀನಗರದಲ್ಲಿ ನಿರ್ಮಿಸಿದ ಬಾಲಭವನದಲ್ಲಿ ಬಾಕ್ಸ್ ಕ್ರಿಕೆಟ್ ಮೈದಾನವನ್ನು ಸಚಿವ ಸತೀಶ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಈ ವೇಳೆ ಸಚಿವೆ ಲಕ್ಷ್ಮೀ ಬೌಲಿಂಗ್ ಮಾಡಿದರು. ನಾಲ್ಕು ಬೌಲ್ಗಳನ್ನು ಟಚ್ ಮಾಡಿದ ಸಚಿವ ಸತೀಶ 5ನೇ ಬೌಲಿಗೆ ಬೋಲ್ಡ್ ಆದರು. ಆಗ ಸುತ್ತ ಸೇರಿದವರೆಲ್ಲ ಚಪ್ಪಾಳೆ ತಟ್ಟಿ ಸಚಿವೆಯನ್ನು ಅಭಿನಂದಿಸಿದರು.ಆಟದಲ್ಲಿ ಶಾಸಕ ಆಸಿಫ್ ಸೇಠ್ ವಿಕೆಟ್ ಕೀಪಿಂಗ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿ ಎಲ್ಲರೂ ಫೀಲ್ಡಿಂಗ್ ನಿರ್ವಹಿಸಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಶಾಸಕ ಆಸಿಫ್ ಸೇಠ್ ಅವರು ಶುಕ್ರವಾರ ಕ್ರಿಕೆಟ್ ಆಡುವ ಮೂಲಕ ಈ ಮೈದಾನ ಉದ್ಘಾಟಿಸಿದರು.ಮುಂಬರುವ ಗ್ರಾಪಂ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಬೇಕೆಂದು ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
-ಸತೀಶ್ ಜಾರಕಿಹೊಳಿ, ಸಚಿವರು.