ಸಾರಾಂಶ
ಬರ ಹಿನ್ನೆಲೆಯಲ್ಲಿ ಸಾಲ ಸೌಲಭ್ಯ ಕಲ್ಪಿಸಿ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿಕೆ । ಆರ್ಜಿ ಹಳ್ಳಿಯಲ್ಲಿ 70ನೇ ಸಹಕಾರ ಸಪ್ತಾಹ
ಕನ್ನಡಪ್ರಭ ವಾರ್ತೆ ದಾವಣಗೆರೆರೈತರ ಅಲ್ಪಾವಧಿ ಕೃಷಿ ಚಟುವಟಿಕೆಗೆ ತೊಡಗಿಸಿಕೊಳ್ಳಲು ಆದಾಯ ಮೂಲವನ್ನು ಒದಗಿಸುವ ಸಹಕಾರ ಕ್ಷೇತ್ರವು ಇಂದು ಎಲ್ಲಾ ಆರ್ಥಿಕ ವಲಯದಲ್ಲೂ ತನ್ನ ಛಾಪು ಮೂಡಿಸಿದ್ದು, ರೈತರು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿದರೆ ಮಾತ್ರ ಸಹಕಾರ ಕ್ಷೇತ್ರ ಉಳಿಯಲು, ಬೆಳೆಯಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ ನಿ. ಬೆಂಗಳೂರು, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್, ಶಿಮುಲ್, ರಾಮಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘ, ದಾವಣಗೆರೆ ತಾ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳು, ತಾಲೂಕಿನ ನೀರು ಬಳಕೆದಾರರ ಸಹಕಾರ ಸಂಘಗಳು, ಇಫ್ಕೋ ಲಿ., ಕ್ರಿಬ್ಕೋ ಲಿ., ಟಿಎಪಿಸಿಎಂಎಸ್ ಲಿ., ತಾಲೂಕು ಪೀಕಾರ್ಡ್ ಬ್ಯಾಂಕ್ ಲಿಮಿಟೆಡ್, ಇತರೆ ಎಲ್ಲಾ ಸಹಕಾರ ಸಂಘಗಳಿಂದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ 3ನೇ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿ ಪರಸ್ಪರ ಸಹಕಾರ ಮನೋಭಾವವು ಪ್ರತಿಯೊಬ್ಬರಲ್ಲೂ ಇದ್ದಾಗ ಮಾತ್ರ ಸಹಕಾರ ಸಂಘಗಳು ಮತ್ತಷ್ಟು ರೈತರ ತಲುಪಲು ಸಾಧ್ಯ. ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಈ ಪರಿಸ್ಥಿತಿಯಲ್ಲಿ ಸಹಕಾರ ಸಂಘಗಳು ತಮ್ಮ ಸದಸ್ಯರ ನೆರವಿಗೆ ಧಾವಿಸಬೇಕು. ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೇಂದ್ರ ಬರ ಅಧ್ಯಯನ ತಂಡ, ಸಿಎಂ ಜೊತೆಗೆ ಚರ್ಚಿಸಿ, ಮಾಯಕೊಂಡ ಕ್ಷೇತ್ರವನ್ನು ಬರ ಪೀಡಿತಪಟ್ಟಿಗೆ ಸೇರಿಸಿದೆ. ರೈತರು ಬೆಳೆ ವಿಮೆ, ಸರ್ಕಾರದ ಬರ ಪರಿಹಾರ ಪಡೆಯಬಹುದು ಎಂದರು.ಆರ್ಥಿಕ ಸಬಲತೆಗೂ ಆಸರೆ:
ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಸಹಕಾರ ಸಪ್ತಾಹ ಅಂಗವಾಗಿ ಕಳೆದ ವರ್ಷದ ಸಹಕಾರ ಚಳವಳಿಯ ಸಾಧನೆ ಮತ್ತು ವೈಫಲ್ಯ ಗಳನ್ನು ವಿಮರ್ಶಿಸಿ, ಮುಂದಿನ ವರ್ಷಕ್ಕೆ ಗುರಿ ಇರಿಸಿಕೊಳ್ಳುವ ಸಂಪ್ರದಾಯವನ್ನು ಬೆಳೆಸಿಕೊಂಡು ಬರಲಾಗಿದೆ. ದೇಶಕ್ಕೆ ಸಹಕಾರ ಕ್ಷೇತ್ರವು ನಿರಂತರ ತನ್ನದೇ ಕೊಡುಗೆ ನೀಡುತ್ತಾ ಬಂದಿದ್ದು, ಜನರು, ರೈತಾಪಿ ವರ್ಗದ ಆರ್ಥಿಕ ಸಬಲತೆಗೂ ಆಸರೆಯಾಗಿದೆ ಎಂದು ಶ್ಲಾಘಿಸಿದರು.ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಜಗದೀಶಪ್ಪ ಬಣಕಾರ್ ಮಾತನಾಡಿ, ಸರ್ಕಾರವು ಹೈನುಗಾರಿಕೆ ಕ್ಷೇತ್ರಕ್ಕೆ ಅನೇಕ ರೀತಿಯ ಸಹಾಯಧನ ನೀಡುತ್ತಿದೆ. ಪ್ರತಿ ಲೀಟರ್ ಹಾಲಿಗೆ 5 ರು. ಪ್ರೋತ್ಸಾಹಧನ ನೀಡುತ್ತಿದೆ. ಕೃಷಿಯೊಂದಿಗೆ ಹೈನುಗಾರಿಕೆಗೂ ರೈತಾಪಿ ಕುಟುಂಬಗಳು, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಗಮನಹರಿಸಲು ಇದರಿಂದ ಸಹಕಾರಿಯಾಗಿದೆ. ಎಷ್ಟೋ ಕುಟುಂಬಗಳಿಗೆ ಹೈನುಗಾರಿಕೆಯೇ ಜೀವನಾಧಾರವೂ ಆಗಿದೆ ಎಂದು ತಿಳಿಸಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ಹಾಲು ಒಕ್ಕೂಟದ ನಿರ್ದೇಶಕರಾದ ಕೆ.ಎನ್.ಸೋಮಶೇಖರಪ್ಪ, ಬಿ.ಜಿ.ಬಸವರಾಜಪ್ಪ, ಸಹಕಾರ ಒಕ್ಕೂಟದ ಟಿ.ರಾಜಣ್ಣ, ಎಸ್.ಬಿ.ಶಿವಕುಮಾರ, ಡಿ.ಎಂ.ಮುರಿಗೇಂದ್ರಯ್ಯ, ಕೆ.ಜಿ.ಸುರೇಶ, ಎನ್.ಎಂ.ಹಾಲಸ್ವಾಮಿ, ಡಿಸಿಸಿ ಬ್ಯಾಂಕ್ನ ಬಿ.ಶೇಖರಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್. ಮಂಜುಳಾ, ಸಹಕಾರ ಅಭಿವೃದ್ಧಿ ಅಧಿಕಾರಿ ಜಿ.ಎಸ್.ಸುರೇಂದ್ರ, ಅತ್ತಿಗೆರೆ ಪ್ರಾಕೃಪಸ ಸಂಘದ ಎಚ್.ಕೆ.ದೇವರಾಜ, ಡಿಸಿಸಿ ಬ್ಯಾಂಕ್ ನ ಎನ್.ಗುರುರಾಜ, ರಾಮಗೊಂಡನಹಳ್ಳಿ ಎಸ್.ಶರಣಪ್ಪ, ಸುನಿಲ್, ಒಕ್ಕೂಟದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಗಳಗೌಡ ದಾನಪ್ಪಗೌಡ್ರು ಇತರರಿದ್ದರು. ಶಾಲಾ ಮಕ್ಕಳಿಂದ ಭಕ್ತಿಗೀತೆ, ರೈತಗೀತೆ ಹಾಡಲಾಯಿತು. ಸಹಕಾರ ಕ್ಷೇತ್ರದಡಿ ತಯಾರಾಗುವ ಗುಡಿ ಕೈಗಾರಿಕೆ ವಸ್ತು, ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ದೊರಕಲು ಮಾಹಿತಿ ತಂತ್ರಜ್ಞಾನದ ಸಕಾರಾತ್ಮಕ ಬಳಕೆ ಅನಿವಾರ್ಯ. ಸೇವೆಯಲ್ಲಿ ಕೌಶಲ್ಯ ಅಳವಡಿಸಿಕೊಂಡರೆ ಸಾಮಾನ್ಯ ಕೃಷಿಕನೂ ಜಾಗತಿಕ ಮಾರುಕಟ್ಟೆಯಲ್ಲಿ ಹೆಸರು ಮಾಡಬಹುದು. ಹಳೆ ಸಂಪ್ರದಾಯಕ್ಕೆ ಜೋತು ಬೀಳದೆ ಹೊಸ ಆವಿಷ್ಕಾರಗಳಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಿದೆ.ಶ್ರೀನಿವಾಸ, ಅಧ್ಯಕ್ಷ, ರಾಮಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘಎಲ್ಲಾ ಸಹಕಾರ ಸಂಘಗಳು ಡಿಜಿಟಲೀಕರಣ ಹೊಂದಬೇಕು. ಆಗ ಮಾತ್ರ ಸದಸ್ಯರಿಗೆ ಯಾವುದೇ ತೊಂದರೆ ಇಲ್ಲದೇ, ಸೌಲಭ್ಯ ಒದಗಿಸಲು ಸಾಧ್ಯ. ಸಹಕಾರ ಸಂಘಗಳ ಆಡಳಿತ ಮಂಡಳಿಯು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದರೆ, ಸಹಕಾರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಲಿದೆ. 70ನೇ ಸಹಕಾರ ಸಪ್ತಾಹ ಕಾರ್ಯಕ್ರಮಗಳು ಗ್ರಾಮದ ಕಟ್ಟಕಡೆ ವ್ಯಕ್ತಿಗೂ ತಲುಪುತ್ತಿರುವುದು ಮಾದರಿ ಕಾರ್ಯ.ಎಚ್.ಕೆ.ಬಸಪ್ಪ, ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಉಪಾಧ್ಯಕ್ಷ
..................