ಸಾರಾಂಶ
ಹಿರಿಯರಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದ್ದು, ಅದನ್ನು ಕಸಿಯಬಾರದು. ಹಿರಿಯರು ಮನೆಗೆ ಗೌರವ ಹಾಗೂ ಶೋಭೆ. ಅವರಿದ್ದರೆ ನಗು, ಕಳಕಳಿ ತುಂಬಿರುತ್ತದೆ. ಪ್ರಸ್ತುತ ಅನೇಕ ಮನೆಗಳಲ್ಲಿ ದಂಪತಿ ದುಡಿಮೆಗೆ ತೆರಳುತ್ತಿದ್ದು, ಮಕ್ಕಳ ಬಗ್ಗೆ ಗಮನ ಹರಿಸುವವರು ಇಲ್ಲವಾಗಿದ್ದಾರೆ. ಮಕ್ಕಳು ಅಜ್ಜ- ಅಜ್ಜಿಯೊಂದಿಗೆ ಬೆಳೆದರೆ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದುಕೊಳ್ಳುತ್ತಾರೆ
ಕನ್ನಡಪ್ರಭ ವಾರ್ತೆ ಮೈಸೂರು
ವೃದ್ಧಾಶ್ರಮದ ಕಲ್ಪನೆ ಸಮಾಜದಲ್ಲಿ ಕಡಿಮೆಯಾಗಬೇಕು. ಮನೆಯಲ್ಲಿರುವ ಹಿರಿಯರನ್ನು ದೂರ ಮಾಡುವ ಸಂಸ್ಕೃತಿ ಮರೆಯಾಗಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ನಗರದ ಜೆಎಸ್ಎಸ್ ಆಸ್ಪತ್ರೆಯ ಆವರಣದ ರಾಜೇಂದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಹಿರಿಯರಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದ್ದು, ಅದನ್ನು ಕಸಿಯಬಾರದು. ಹಿರಿಯರು ಮನೆಗೆ ಗೌರವ ಹಾಗೂ ಶೋಭೆ. ಅವರಿದ್ದರೆ ನಗು, ಕಳಕಳಿ ತುಂಬಿರುತ್ತದೆ. ಪ್ರಸ್ತುತ ಅನೇಕ ಮನೆಗಳಲ್ಲಿ ದಂಪತಿ ದುಡಿಮೆಗೆ ತೆರಳುತ್ತಿದ್ದು, ಮಕ್ಕಳ ಬಗ್ಗೆ ಗಮನ ಹರಿಸುವವರು ಇಲ್ಲವಾಗಿದ್ದಾರೆ. ಮಕ್ಕಳು ಅಜ್ಜ- ಅಜ್ಜಿಯೊಂದಿಗೆ ಬೆಳೆದರೆ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಅವರು ಹೇಳಿದರು.60 ವರ್ಷ ಕಳೆದ ಕೂಡಲೇ ತಂದೆ- ತಾಯಿ ಮಕ್ಕಳಿಗೆ ಹೊರೆಯಾಗುತ್ತಿರುವುದು ವಿಷಾದನೀಯ. ಇದರಿಂದ ಕೂಡು ಕುಟುಂಬದ ವಿಚಾರ ಮರೆಯಾಗುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಡಾ. ಪ್ರತಿಭಾ ಪೆರೆರಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಷಾ, ಶ್ರೀಧರ್ ದೀಕ್ಷಿತ್, ರಾಘವೇಂದ್ರ ಮೊದಲಾದವರು ಇದ್ದರು.