ಗ್ರಾಮದ ಅಭಿವೃದ್ಧಿ ನಮ್ಮ ಧ್ಯೇಯವಾಗಿರಲಿ

| Published : Mar 04 2025, 12:35 AM IST

ಸಾರಾಂಶ

ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವುದು ನಮ್ಮ ನಿಮ್ಮೆಲ್ಲರಿಗೆ ಸಿಕ್ಕ ಸದಾವಕಾಶವಾಗಿದ್ದು, ಗ್ರಾಮದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಬೇಕು. ಈ ದಿಶೆಯಲ್ಲಿ ನಿರಂತರ ಶ್ರಮವಹಿಸಿ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು ಎಂದು ಅಬ್ಬಿಗೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ. ಹೇಳಿದರು.

ರೋಣ: ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವುದು ನಮ್ಮ ನಿಮ್ಮೆಲ್ಲರಿಗೆ ಸಿಕ್ಕ ಸದಾವಕಾಶವಾಗಿದ್ದು, ಗ್ರಾಮದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಬೇಕು. ಈ ದಿಶೆಯಲ್ಲಿ ನಿರಂತರ ಶ್ರಮವಹಿಸಿ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು ಎಂದು ಅಬ್ಬಿಗೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ. ಹೇಳಿದರು.

ಅವರು ಸೋಮವಾರ ತಾಲೂಕಿನ ಅಬ್ಬಿಗೇರಿ ಗ್ರಾಪಂ ಸಭಾಭವನದಲ್ಲಿ ಅಂಧತ್ವಯುಳ್ಳ ಅಧಿಕಾರಿಗಳು , ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡ ವಿಶೇಷ ತರಬೇತಿ ಕಾರ್ಯಾಗಾರ ಹಾಗೂ ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಸಂಸ್ಥೆ ಪ್ರಾದೇಶಿಕ ಕೇಂದ್ರ ರಾಯಪೂರ- ಧಾರವಾಡ ವತಿಯಿಂದ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ‌ ಮಾತನಾಡಿದರು. ಗ್ರಾಪಂ ಸಿಬ್ಬಂದಿ ನಿರಂತರ ಶ್ರಮವನ್ನು ಹಾಕಿ, ಗ್ರಾಮದ ಅಭಿವೃದ್ಧಿಯ ಕನಸ್ಸು ಕಾಣಬೇಕು. ಅಂದಾಗ ಮಾತ್ರ ಒಬ್ಬ ಗ್ರಾಮ ಪಂಚಾಯತಿ ನೌಕರನು ಜನ ಸಾಮಾನ್ಯರಿಗೆ ಪಂಚಾಯತರಾಜ್‌ ಇಲಾಖೆ ಅಡಿಯಲ್ಲಿ ಬರುವ ಯೋಜನೆಗಳ ಮಾಹಪೂರವನ್ನು ಹರಿಸಬಹುದು. ಜನತೆ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸಲು ಸಾಧ್ಯವಾಗುತ್ತದೆ.ನಿತ್ಯವೂ ಗ್ರಾಮದಾದ್ಯಂತ ಸಂಚರಿಸಿ‌ ಜನರ ಎದುರಿಸುವ ಸಮಸ್ಯೆ ಮನಗಂಡು ಅವುಗಳಿಗೆ ತಕ್ಷಣವೇ ಸ್ಪಂದಿಸುವಲ್ಲಿ ಶ್ರಮಿಸಬೇಕು ಎಂದರು . ತರಬೇತಿ ಕಾರ್ಯಾಗಾರ ಬಳಿಕ ಸಿಬ್ಬಂದಿಗಳೊಂದಿಗೆ ಕ್ಷೇತ್ರ ಭೇಟಿ ಹಮ್ಮಿಕೊಳ್ಳಲಾಯಿತು. ಎಮ್.ಜಿ.ಎನ್. ಆರ್.ಇ.ಜಿ ಯೋಜನೆಯಡಿ ಕಾಮಗಾರಿಗಳ ಕಡತಗಳ ಪರಿಶೀಲನೆ ಸೇರಿದಂತೆ ಕಾಮಗಾರಿಗಳ ವೀಕ್ಷಣೆ ಮಾಡಲಾಯಿತು.

ಗ್ರಾಮದ ಸರಕಾರಿ ಪ್ರೌಢಶಾಲೆ ಕಂಪೌಂಡ್‌, ಸರಕಾರಿ ಪ್ರೌಢಶಾಲೆ ಬಾಸ್ಕೆಟ್ ಬಾಲ್ ಗ್ರೌಂಡ್‌, ಗ್ರಾಮದ 1ನೇ ವಾರ್ಡಿನ ಲಕ್ಷ್ಮೀ ಗುಡಿ ಹತ್ತಿರ ಸಿ.ಸಿ. ರಸ್ತೆ ಹಾಗೂ ಕಡತಗಳ ಬಗ್ಗೆ ತರಬೇತಿ ನೀಡಲಾಯಿತು. ಜೊತೆಗೆ ಅಬ್ಬಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯ ವೀಕ್ಷಣೆ ಹಾಗೂ ಓದುವ ಬೆಳಕು ವಿಚಾರವಾಗಿ ಮಾರ್ಗದರ್ಶನದ ಕುರಿತು ಸಮಗ್ರವಾಗಿ ಚರ್ಚೆ ನಡೆಸಿದರು ಹಾಗೂ ವಿಷಯಗಳ ಮನದಟ್ಟು ಮಾಡಲಾಯಿತು.ಅಬ್ಬಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕೂಸಿನ ಮನೆ ವೀಕ್ಷಣೆ ನಡೆಸಿದ ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮನೆ - ಮನೆಗೆ ತೆರಳಿ ಪ್ರಾಯೋಗಿಕವಾಗಿ ತೆರಿಗೆ ವಸೂಲಿ ಮಾಡುವುದರ ಕುರಿತು ಪ್ರಾತ್ಯಕ್ಷಿತೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಾ ರಾಠೋಡ, ಉಪಾಧ್ಯಕ್ಷ ಅಕ್ಕಮ್ಮ ಡೊಳ್ಳಿನ, ತರಬೇತಿ ಸಂಯೋಜಕ ಪ್ರಶಾಂತ ಎಂ.ಎನ್., ಪರಿಣಿತ ಬೋಧಕ ನೀಲಪ್ಪ ಕಜ್ಜಗರ, ಸದಸ್ಯರಾದ ಬಸಪ್ಪ ಕಮ್ಮಾರ,ಶಂಕ್ರಪ್ಪ ಇಟಗಿ,ದೇವಪ್ಪ ಜಂತ್ಲಿ, ಮಂಜುಳಾ ತಳವಾರ, ರೇಖಾ ಅವರೆಡ್ಡಿ, ವಿಜಯಲಕ್ಷ್ಮಿ ಬಸವರೆಡ್ಡೇರ, ರೇಣಮ್ಮ ಹಳ್ಳಿ, ರೇಖಾ ವೀರಾಪೂರ,ಶ್ರೀಮತಿ ಮಾಳಶೆಟ್ಟಿ, ಗ್ರಂಥಪಾಲಕ ವಿರೇಶ ಬಳಿಗೇರ, ಗ್ರಾಮ ಪಂಚಾಯತ್‌ ಸರ್ವ ಸಿಬ್ಬಂದಿ ವರ್ಗ, ಕಾಯಕ ಬಂಧುಗಳು ಸೇರಿದಂತೆ ತರಬೇತಿದಾರರು ಹಾಜರಿದ್ದರು.