ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ನಗರದಲ್ಲಿ ಮಾ.೧೮ ಮತ್ತು ೧೯ರಂದು ನಡೆಯಲಿರುವ ೧೩ನೇ ಕಸಾಪ ಜಿಲ್ಲಾ ಸಾಹಿತ್ಯ ಸಮ್ಮೇಳನವು ಹರಿಹರ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಮುನ್ನುಡಿ ಬರೆಯುವಂತಾಗಬೇಕೆಂದು ಮಾಜಿ ದೂಡಾ ಸದಸ್ಯ ಎಚ್.ನಿಜಗುಣ ಅಭಿಪ್ರಾಯಪಟ್ಟರು.೧೩ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ವಿ.ಪಾಟೀಲ್ರನ್ನು ಅವರ ನಿವಾಸದಲ್ಲಿ ಗೆಳೆಯರ ಬಳಗದಿಂದ ಸನ್ಮಾನಿಸಿ ಮಾತನಾಡಿ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಸಿ.ವಿ.ಪಾಟೀಲ್ರನ್ನು ಆಯ್ಕೆ ಮಾಡಿರುವುದು ಹರಿಹರ ಸೇರಿ ಜಿಲ್ಲೆಯ ಸಾಹಿತ್ಯ ಆಸಕ್ತರಿಗೆ ಹರ್ಷ ತಂದಿದೆ ಎಂದರು.
ಕನ್ನಡ ಭಾಷಾ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಶೈಲಿಯಲ್ಲಿ ಕೊಡುಗೆ ನೀಡಿದ್ದಾರೆ. ಈ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ಭಾಷಣವು ಹರಿಹರ ನಗರದ ಅಭಿವೃದ್ಧಿ ಪೂರಕ ಹಾಗೂ ಐತಿಹಾಸಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ನೆಲೆಗಳ ಮೇಲೆ ಬೆಳಕು ಚೆಲ್ಲುವಂತಾಗಬೇಕೆಂದು ಕೋರಿದರು.ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ಕೂಟ್ರಪ್ಪ ಮಾತನಾಡಿ, ಸಿ.ವಿ ಪಾಟೀಲರು ತಮ್ಮ ಪ್ರಾಧ್ಯಾಪಕ ವೃತ್ತಿಯೂಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ನೀಡಿರುವ ಸೇವೆಗೆ ಹರಿಹರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರು ಆಗಿರುವುದು ತಾಲೂಕಿನ ಸಾಹಿತ್ಯ ವಲಯಕ್ಕೆ ಸಂದ ಗೌರವ ಎಂದರು.
ಹಿರಿಯ ಪತ್ರಕರ್ತ ಶೇಖರಗೌಡ ಪಾಟೀಲ್ ಮಾತನಾಡಿ, ನಗರದಲ್ಲಿ ನಡೆಯುವ ಕಸಾಪ ಜಿಲ್ಲಾ ಸಮ್ಮೇಳನ ಹರಿಹರ ತಾಲೂಕಿನ ಗತವೈಭವ ಮತ್ತೆ ಮರುಕಳಿಸುಂತಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.ನಿವೃತ್ತ ಪ್ರಾಧ್ಯಾಪಕ ಪೊ.ಸಿ.ವಿ. ಪಾಟೀಲ್ ಸನ್ಮಾನಿತರಾಗಿ ಮಾತನಾಡಿ, ಸ್ಥಾನಮಾನಗಳ ಯಾರು ಬೆನ್ನತ್ತಿ ಹೋಗಬಾರದು ಅವುಗಳು ತಾನಾಗಿ ಬರಬೇಕು ಎನ್ನುವ ಧ್ಯೇಯ ಇಟ್ಟುಕೊಂಡು ನನ್ನ ಸೇವೆ ಮಾಡಿದ್ದೇನೆ. ಜಿಲ್ಲಾ ಕಸಾಪ ಕಾರ್ಯಾಕಾರಿ ಸಮಿತಿ ನನ್ನ ಕರ್ಮ ಭೂಮಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಅವರ ನಂಬಿಕೆ ಮತ್ತು ಜಿಲ್ಲೆಯ ಸಾಹಿತ್ಯಾಸಕ್ತರ ಅಭಿಲಾಷೆಯಂತೆ ನಡೆದುಕೊಳ್ಳುತ್ತೇನೆ ಎಂದರು.
ಈ ವೇಳೆ ಗೆಳೆಯರ ಬಳಗದ ಸಿ.ಎನ್. ಮಂಜುನಾಥ, ಎನ್.ಇ. ಸುರೇಶ್ ಸ್ವಾಮಿ, ಪತ್ರಕರ್ತ ಎಚ್.ಸಿ.ಕೀರ್ತಿಕುಮಾರ್, ಬುಳ್ಳಾಪುರದ ಅನಂದಗೌಡ ಪಾಟೀಲ್, ಶ್ರೀನಿವಾಸ್ರೆಡ್ಡಿ ಸೇರಿ ಇತರರಿದ್ದರು.