ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಶಿಕ್ಷಣ ಕ್ಷೇತ್ರವು ಆಧುನಿಕ ಆವಿಷ್ಕಾರಗಳೊಂದಿಗೆ ನಿರಂತರವಾಗಿ ಅಭಿವೃದ್ಧಿಯಾಗಬೇಕು ಎಂದು ಎನ್ಸಿಟಿಇ ದಕ್ಷಿಣ ಪ್ರಾಂತ ನಿರ್ದೇಶಕಿ ಪ್ರೊ.ಮೀನಾ ಚಂದಾವರಕರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಶಿಕ್ಷಣ ಕ್ಷೇತ್ರವು ಆಧುನಿಕ ಆವಿಷ್ಕಾರಗಳೊಂದಿಗೆ ನಿರಂತರವಾಗಿ ಅಭಿವೃದ್ಧಿಯಾಗಬೇಕು ಎಂದು ಎನ್ಸಿಟಿಇ ದಕ್ಷಿಣ ಪ್ರಾಂತ ನಿರ್ದೇಶಕಿ ಪ್ರೊ.ಮೀನಾ ಚಂದಾವರಕರ ಹೇಳಿದರು.ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ಎನ್ಸಿಟಿಇ ನಿಯಮಗಳು ಮತ್ತು ಮಾನದಂಡಗಳ ಹಿನ್ನೆಲೆಯಲ್ಲಿ ಬಹುಶಿಸ್ತಿನ ಉನ್ನತ ಶಿಕ್ಷಣದ ಪರಿಕಲ್ಪನೆ ಎಂಬ ವಿಷಯದ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಎನ್ಇಪಿ 2020 ಆಧಾರಿತ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಅಳವಡಿಕೆಗೆ ಸನ್ನದ್ಧವಾಗಬೇಕಿದೆ. ಇಂದಿನ ಪರಿಸ್ಥಿತಿಯಲ್ಲಿ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದ್ದು, ಅದರ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳ ಸಬಲೀಕರಣ, ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣ ಹಾಗೂ ಉತ್ತಮ ಶಾಲಾ ಶಿಕ್ಷಣವು ಅತ್ಯಂತ ಬೇಡಿಕೆಯ ವಿಷಯಗಳಾಗಿವೆ ಎಂದರು.
ಕಲಬುರಗಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗದ ಡೀನ್ ಪ್ರೊ.ಜಿ.ಆರ್.ಅಂಗಡಿ ಮಾತನಾಡಿ, ಭವಿಷ್ಯದ ಶಿಕ್ಷಣ ಸಂಸ್ಥೆಗಳ ರೂಪರೇಷೆ ಕುರಿತು ಎನ್ಸಿಟಿಇನಿಂದ ಹೊರಬಂದಿರುವ ಹೊಸ ನಿಯಮಗಳು ಮತ್ತು ಅವುಗಳ ಅನ್ವಯಿಕೆ ಕುರಿತು ಮಾಹಿತಿ ನೀಡಿದರು.ಮಹಿಳಾ ವಿವಿ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ.ಟಿ ಮಾತನಾಡಿ, ವಿಶ್ವವಿದ್ಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡುವ ಶಿಕ್ಷಣ ಸಂಬಂಧಿತ ನಿಯಮಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಅಳವಡಿಸಿಕೊಳ್ಳುವುದು ಅತ್ಯಂತ ತುರ್ತು ಮತ್ತು ಅವಶ್ಯಕವಾಗಿದೆ ಎಂದರು.
ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯ ಚಟುವಟಿಕೆ ಸವಾಲುಗಳ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚೆ ಗೋಷ್ಠಿಗಳು ನಡೆದವು. ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ವಿವಿಧ ಮಹಿಳಾ ಶಿಕ್ಷಣ ಮಹಾವಿದ್ಯಾಲಯಗಳ ಪ್ರಾಚಾರ್ಯರು ಮತ್ತು ಹಿರಿಯ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಬಿಎಡ್ ಪ್ರಶಿಕ್ಷಣಾರ್ಥಿಗಳು ಮಹಿಳಾ ಗೀತೆ ಹಾಡಿದರು. ಶಿಕ್ಷಣ ನಿಕಾಯದ ಡೀನ್ ಡಾ.ಸಕ್ಬಾಲ್ ಹೂವಣ್ಣ ಸ್ವಾಗತಿಸಿದರು. ಪ್ರೊ.ಬಸವರಾಜ ಲಕ್ಕಣ್ಣನವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ವಿಷ್ಣು ಶಿಂದೆ ನಿರೂಪಿಸಿದರು. ಪ್ರೊ.ಅಶೋಕಕುಮಾರ ಸುರಪುರ ವಂದಿಸಿದರು.