ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಾರ್ಮಿಕರ ಹಿತ ಕಾಯುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಗರಸಭಾಧ್ಯಕ್ಷ ಎಂ.ಸಿ.ಪ್ರಕಾಶ್ (ನಾಗೇಶ್) ಸಲಹೆ ನೀಡಿದರು.ದತ್ತೋಪಂತ್ ತೆಂಗಡಿ, ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ, ನಗರಸಭೆ ಮತ್ತು ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಕಾರ್ಮಿಕರ ಶಿಕ್ಷಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ನಿಗದಿತ ವೇಳೆಯನ್ನು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಾರೆ. ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಉಪಯೋಗವನ್ನು ದೊರಕಿಸಿಕೊಡುವ ಜವಾಬ್ದಾರಿ ಜನಪ್ರತಿನಿಧಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಮೇಲಿದೆ ಎಂದರು.ಅಸಂಘಟಿತ ಕಾರ್ಮಿಕರ ಯೋಜನೆಗಳ ವಿವರಗಳನ್ನು ತಿಳಿದಾಗ ನಾವು ಜವಾಬ್ದಾರಿಯುತವಾಗಿ ಕಾರ್ಮಿಕರ ಹಿತ ಕಾಯಬೇಕು. ಆ ಮೂಲಕ ನಗರ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಕಾರ್ಮಿಕರ ಶ್ರಮ ಅನಿವಾರ್ಯವಾಗಿದೆ. ಇದರ ಯೋಜನೆಗಳನ್ನು ತಾವು ಉಪಯೋಗಿಸಿಕೊಳ್ಳಬೇಕು ಎಂದರು.
ಚುನಾಯಿತ ಪ್ರತಿನಿಧಿಯಾಗಿ ಅಸಂಘಟಿತ ವಲಯ ಅಂದರೆ ಮಾರುಕಟ್ಟೆ ವ್ಯಾಪ್ತಿಯ ಕಾರ್ಮಿಕರು ಅಥವಾ ದಿನಬಳಕೆ ಕಾರ್ಮಿಕರಾಗಲೀ ಎಲ್ಲರೂ ಕಾನೂನಿನ ಮೂಲಕ ದೊರೆಯುವಂತಹ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.ಕಾರ್ಮಿಕರು ಸುಸ್ಥಿತವಾಗಿದ್ದರೆ ಸಮುದಾಯ ಸುಸ್ಥಿರವಾಗಿರುತ್ತದೆ. ಆರೋಗ್ಯವಂತ ಕಾರ್ಮಿಕ ಉತ್ತಮವಾದ ಕಾಯಕವನ್ನು ಮಾಡಬಹುದಾಗಿದೆ. ದುಶ್ಚಟಕ್ಕೆ ಬಲಿಯಾಗದೆ ಸದೃಢ ದೇಹವನ್ನು ಹೊಂದಬೇಕು ಎಂದರು.
ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಮಂಡಳಿ ಪ್ರಾದೇಶಿಕ ನಿರ್ದೇಶಕಿ ಡಾ.ಸಂಧ್ಯಾರಾಣಿ ಮಾತನಾಡಿ, ಸಫಾಯಿ ಕರ್ಮಚಾರಿಗಳ ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಪ್ರಯೋಜನ ನಗರ, ಪಟ್ಟಣ ಪಂಚಾಯ್ತಿ, ಪುರಸಭಾ ವ್ಯಾಪ್ತಿಯ ಕಾರ್ಮಿಕರಿಗೆ ದೊರಕಬೇಕಾಗಿದೆ ಎಂದರು.1958, ಸೆ.16ರಂದು ದತ್ತೋಪಂತ್ ಪ್ರಾರಂಭವಾಗುತ್ತದೆ. ಈ ದಿನದ ನಿಮಿತ್ತ ನಾವು ಕಾರ್ಮಿಕರ ಶಿಕ್ಷಣ ದಿನವನ್ನು ಹಮ್ಮಿಕೊಂಡಿದ್ದು ಇದರ ಪ್ರಯೋಜನವನ್ನು ಹಾಗೂ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಅರಿವನ್ನು ಪಡೆದು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಪರಿಸರ ಎಂಜಿನಿಯರ್ ರುದ್ರೇಗೌಡ, ಮಂಡಳಿ ಶಿಕ್ಷಣಾಧಿಕಾರಿ ಸತೀಶ್ಕುಮಾರ್, ಕರ್ನಾಟಕ ಪೌರ ಕಾರ್ಮಿಕರ ಸೇವಾ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜು, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಕಾರ್ಯದರ್ಶಿ ಕೆ.ಪಿ. ಅರುಣಕುಮಾರಿ ಇತರರು ಇದ್ದರು.