ಸಾರಾಂಶ
ತಾಲೂಕಿನ 8 ನದಿಪಾತ್ರಗಳ ಗ್ರಾಮಗಳು ಮಳೆ ಬಂದರೆ ಜಲಾವೃತವಾಗುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಜೆಟ್ ಹಂತದಲ್ಲೆ ಅನುದಾನ ಮೀಸಲಿಡುವ ಕುರಿತು ಗಂಬೀರ ಚಿಂತನೆ ನಡೆಸಲಾಗುವುದು. ಈಗಾಗಲೇ ಈ ಕುರಿತು ಸರ್ವೇ ಕಾರ್ಯ ಮಾಡಿಸಲಾಗಿದ್ದು 150 ಕೋಟಿ ಅನುದಾನ ಅಗತ್ಯವಿದೆ ಎಂದು ಸಚಿವ ಕೃಷ್ಣ ಬೈರೆಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ 8 ನದಿಪಾತ್ರಗಳ ಗ್ರಾಮಗಳು ಮಳೆ ಬಂದರೆ ಜಲಾವೃತವಾಗುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಜೆಟ್ ಹಂತದಲ್ಲೆ ಅನುದಾನ ಮೀಸಲಿಡುವ ಕುರಿತು ಗಂಬೀರ ಚಿಂತನೆ ನಡೆಸಲಾಗುವುದು. ಈಗಾಗಲೇ ಈ ಕುರಿತು ಸರ್ವೇ ಕಾರ್ಯ ಮಾಡಿಸಲಾಗಿದ್ದು 150 ಕೋಟಿ ಅನುದಾನ ಅಗತ್ಯವಿದೆ ಎಂದು ಸಚಿವ ಕೃಷ್ಣ ಬೈರೆಗೌಡ ಹೇಳಿದರು.ವಿಧಾನ ಸೌಧದಲ್ಲಿ ಶಾಸಕ ಕೃಷ್ಣಮೂರ್ತಿ ಅವರ ಪ್ರಶ್ನೆಗೆ ಉತ್ತರ ನೀಡಿ ಮಾತನಾಡಿ, ಕೊಳ್ಳೇಗಾಲ ತಾಲೂಕಿನ ನದಿ ಪಾತ್ರಗಳಲ್ಲಿರುವ 8 ಗ್ರಾಮಗಳು ಮಳೆ ಬಂದರೆ ಜಲಾವೃತಗೊಂಡು ಅಲ್ಲಿನ ವಾಸಿಗಳು ಪಡುವ ಬವಣೆ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ನದಿಗೆ ತಡೆಗೋಡೆ (ರಕ್ಷಣಾ ಬೇಲಿ) ಹಾಕುವ ಈ ಯೋಜನೆಗೆ 150 ಕೋಟಿ ಅಗತ್ಯವಿದೆ. ಈ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಮನಕ್ಕೂ ಬಂದಿದ್ದು ಅನುದಾನ ಲಭ್ಯತೆ ಆಧಾರದಡಿ ಕ್ರಮಕೈಗೊಳ್ಳಲಾಗುವುದು. ಈ ಬಜೆಟ್ ಅನುದಾನದಲ್ಲೆ ಕಾಮಗಾರಿಗೆ ಅನುದಾನ ಮೀಸಲಿಡಲಾಗುವುದು. ಎಂಬ ಭರವಸೆ ನೀಡಿದರು.
ಸದನದ ಗಮನ ಸೆಳೆದ ಕೃಷ್ಣಮೂರ್ತಿ:ಸವಿವರವಾಗಿ ನದಿ ಪಾತ್ರದ 8 ಗ್ರಾಮಗಳಲ್ಲಿ ಮಳೆ ಬಂದರೆ ಅಲ್ಲಿನ ಜನ, ಜಾನುವಾರು ಪಡುವ ಭವಣೆಗಳನ್ನು ಎಳೆ ಎಳೆಯಾಗಿ ವಿವರಿಸಿದ ಕ್ಷೇತ್ರದ ಶಾಸಕರು ಅಲ್ಲಿನ ಗ್ರಾಮಸ್ಥರು ಮತ್ತು ಜಾನುವಾರುಗಳ ರಕ್ಷಣೆಗಾಗಿ ರಕ್ಷಣಾ ಗೋಡೆ ಅತ್ಯಗತ್ಯವಿದೆ. ಈ ಬಾರಿ ಮಳೆ ಬಂದು ಅವಘಡ ಸಂಭವಿಸುವ ಮುನ್ನ ಸರ್ಕಾರ ಕ್ರಮವಹಿಸಬೇಕು ಎಂದು ಸದನದ ಗಮನ ಸೆಳೆದರಲ್ಲದೆ ಈ ವರ್ಷದ ಬಜೆಟ್ ನಲ್ಲಿಯೇ ಈ ಕಾಮಗಾರಿಯನ್ನು ಸೇರಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು.