ಕನ್ನಡಪ್ರಭ ವಾರ್ತೆ ಬಾದಾಮಿ
ಐತಿಹಾಸಿಕ ಚಾಲುಕ್ಯರ ನಾಡು ಬಾದಾಮಿ, ಐಹೊಳೆ ಪಟ್ಟದಕಲ್ಲು ಪ್ರವಾಸೋದ್ಯಮಕ್ಕೆ ಹೆಸರು ವಾಸಿಯಾಗಿವೆ. ಸರಕಾರ ಹೊಸ ಪ್ರವಾಸೋದ್ಯಮ ನೀತಿ ಜಾರಿ ಮಾಡಿ ಪ್ರವಾಸೋದ್ಯಮಕ್ಕೆ ಬಲ ಸಿಗುವಂತಾಗಲಿ ಎಂದು ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ಬಿ.ಶೀಲವಂತರ ಹೇಳಿದರು.ನಗರದ ಎಸ್.ವಿ.ಪಿ.ಸಂಸ್ಥೆಯ ಬಸವಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಾಲುಕ್ಯರ ಇತಿಹಾಸ ಸಾಧನೆ, ಪ್ರವಾಸಿಗರಿಗೆ ಮಾಹಿತಿ ಸಿಗುವ ಉದ್ದೇಶದಿಂದ ಬೇರೆ ಬೇರೆ ಭಾಷೆಯಲ್ಲಿ ಫಲಕ ಅಳವಡಿಸಬೇಕು. ಪ್ರವಾಸಿಗರಿಗೆ ಶಿಲೆಗಳನ್ನು ಕೆತ್ತುವ ಕಲಾವಿದರಿಂದ ಪ್ರಾತ್ಯಕ್ಷಿಕೆ ಆಯೋಜನೆ ಮಾಡಬೇಕು. ಸ್ಥಳೀಯ ಆಹಾರ ಪದ್ಧತಿ ಪ್ರವಾಸಿಗರಿಗೆ ಪರಿಚಯವಾಗಬೇಕು. ಇಳಕಲ್ ಸೀರೆ, ಗುಳೇದಗುಡ್ಡ ಖಣ ವಸ್ತ್ರ ಬಂಡಾರ ನಿರ್ಮಾಣ ಮಾಡಬೇಕಿದೆ. ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಬೇಕು. ರೊಟ್ಟಿ ಉದ್ಯಮವನ್ನು ಸಹಕಾರಿ ಸಂಘಗಳ ಮೂಲಕ ಬೆಳವಣಿಗೆಗೆ ಸಹಕರಿಸಬೇಕು. ಕನ್ನಡ ನಾಡಿನ ನೆಲ ಜಲ, ಭಾಷೆಗೆ ಒತ್ತು ಕೊಡಬೇಕು. ಆಂಗ್ಲ ವ್ಯಾಮೋಹದಿಂದ ನಮ್ಮ ಕನ್ನಡ ಭಾಷೆ ಮರೆಯಬಾರದು. ಮಾತೃಭಾಷೆ ಕಲಿತರೆ ಉಳಿದ ಭಾಷೆ ಕಲಿಯಲು ಸರಳ. ಪಾಳಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ ಪ್ರೊ.ಜಿ.ಬಿ.ಶೀಲವಂತರ ದಂಪತಿಯನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಫ್.ಹೊರಕೇರಿ, ಪದಾಧಿಕಾರಿಗಳಾದ ಮಹಾಂತೇಶ ಈಳಗೇರ, ಆರ್.ಎಂ.ಸಾರವಾಡ, ವಿ.ಎಸ್.ಶೆಟ್ಟರ, ಬಿ.ಎಸ್.ಅಬ್ಬಿಗೇರಿ, ರವಿ ಕಂಗಳ, ಎಸ್.ಎಚ್.ಪರಸನ್ನವರ, ಆರ್.ಎಂ.ದಾದಿ ಸೇರಿ ಪದಾಧಿಕಾರಿಗಳು ಇದ್ದರು.
ಬಸಮ್ಮಾ ನರಸಾಪೂರ, ಡಿ.ಬಿ. ಹಡಗಲಿ ನಿರೂಪಿಸಿದರು. ನಂತರ ನಡೆದ ಗೋಷ್ಟಿ-1ರಲ್ಲಿ ಬಾದಾಮಿ ತಾಲೂಕಿನ ಸಾಹಿತ್ಯಾವಲೋಕನ ಕುರಿತು ಸೃಜನಶೀಲ ಸಾಹಿತ್ಯ ಕುರಿತು ಪ್ರೊ.ಚಂದ್ರಶೇಖರ ಹೆಗಡೆ ಮತ್ತು ಜನಪದ ಸಾಹಿತ್ಯ ಕುರಿತು ನಾಗರಾಜ ಹೊಟ್ಟಿ, ಮಹಿಳಾ ಸಾಹಿತ್ಯ ಕುರಿತು ಶಾರದಾ ಮೇಟಿ ಉಪನ್ಯಾಸ ನೀಡಿದರು.