ಹೊಸ ತಲೆಮಾರಿನವರು ಶಾಂತಿ, ಸೌಹಾರ್ದಕ್ಕೆ ಗಮನ ಹರಿಸಲಿ

| Published : Aug 29 2025, 01:00 AM IST

ಹೊಸ ತಲೆಮಾರಿನವರು ಶಾಂತಿ, ಸೌಹಾರ್ದಕ್ಕೆ ಗಮನ ಹರಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ಆರ್ಥಿಕ ಶಕ್ತಿಯು ಭಟ್ಕಳದ ಸಮೃದ್ಧಿ ಮತ್ತು ಪ್ರಗತಿಯ ಮೂಲಾಧಾರವಾಗಿದೆ.

ಭಟ್ಕಳ: ಪಟ್ಟಣದ ಖಾಜಿಯಾ ಬಂಗ್ಲೆಯಲ್ಲಿ ರಾಬಿತಾ ಸೊಸೈಟಿಯಿಂದ ಏರ್ಪಡಿಸಲಾದ “ರಾಬಿತಾ ಸೌಹಾರ್ದ ಸಂಗಮ-2025 ಕಾರ್ಯಕ್ರಮವನ್ನು ರಾಬಿತಾ ಸೊಸೈಟಿ ಪ್ರಧಾನ ಕಾರ್ಯದರ್ಶಿ ಅತೀಕುರ್ರೆಹಮಾನ ಮುನೀರಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಗಲ್ಫ್‌ ರಾಷ್ಟ್ರಗಳಲ್ಲಿ ನೆಲೆಸಿರುವ 5000ಕ್ಕೂ ಹೆಚ್ಚು ನವಾಯತ್ ಸಮುದಾಯದ ಅನಿವಾಸಿ ಭಾರತೀಯರಿಂದ ಪ್ರತಿವರ್ಷ 1000 ಕೋಟಿಗೂ ಅಧಿಕ ವಿದೇಶಿ ವಿನಿಮಯವನ್ನು ತಮ್ಮ ತಾಯ್ನಾಡಿಗೆ ಕಳುಹಿಸುತ್ತಿದ್ದಾರೆ. ಇದೇ ಆರ್ಥಿಕ ಶಕ್ತಿಯು ಭಟ್ಕಳದ ಸಮೃದ್ಧಿ ಮತ್ತು ಪ್ರಗತಿಯ ಮೂಲಾಧಾರವಾಗಿದೆ. 1991ರಲ್ಲಿ ಆರಂಭ ಗೊಂಡ ರಾಬಿತಾ ಸೊಸೈಟಿ ಆರಂಭದಿಂದಲೂ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಬಲಪಡಿಸಲು ಶ್ರಮಿಸುತ್ತಿದೆ. ಈ ಉದ್ದೇಶದಿಂದ ಪ್ರತಿವರ್ಷ ಸೌಹಾರ್ದ ಸಮಾವೇಶವನ್ನು ಆಯೋಜಿಸಲಾಗುತ್ತದೆ. ಆದರೆ, ಕೋವಿಡ್ ಮತ್ತು ಇತರ ಕಾರಣಗಳಿಂದ ಎಂಟು ವರ್ಷಗಳ ಕಾಲ ಈ ಕಾರ್ಯಕ್ರಮಕ್ಕೆ ನಡೆಸಲು ಆಗಿರಲಿಲ್ಲ. ಈಗ ಮತ್ತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೊಸ ತಲೆಮಾರಿನವರು ಶಾಂತಿ, ಸೌಹಾರ್ದ ಮತ್ತು ಒಗ್ಗಟ್ಟಿನ ಉತ್ತೇಜನಕ್ಕೆ ಕೊಡುಗೆ ನೀಡಬೇಕು ಎಂದರು.

ಅಂಜುಮನ್ ಹಾಮಿ ಇ ಮುಸ್ಲಿಮೀನ್‌ನ ಅಧ್ಯಕ್ಷ, ಎನ್‌ಆರ್‌ಐ ಉದ್ಯಮಿ ಮುಹಮ್ಮದ್ ಯೂನುಸ್ ಕಾಜಿಯಾ ಮತ್ತು ಮಜ್ಲಿಸ್ ಇಸ್ಲಾಹ್ ವ ತಂಜೀಮ್‌ನ ಅಧ್ಯಕ್ಷ ಇನಾಯತುಲ್ಲಾ ಶಾಬಂದರಿ ಅವರು ಸಾರ್ವಜನಿಕ ಸಮಸ್ಯೆಗಳನ್ನು ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳ ಮುಂದಿಟ್ಟರು.

ಮುಖ್ಯ ಅತಿಥಿಯಾದ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ, ನವಾಯತ್ ಸಮುದಾಯದವರು ಪ್ರತಿಭಾವಂತರಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ಉತ್ಕೃಷ್ಠ ಸಾಧನೆ ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ ಕಡಿಮೆ ಇದೆ. ಯುವಕರು ಸರ್ಕಾರಿ ಕ್ಷೇತ್ರದಲ್ಲೂ ಮುಂದೆ ಬಂದು ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಭಟ್ಕಳ ಉಪವಿಭಾಗಾಧಿಕಾರಿ ಕಾವ್ಯ ರಾಣಿ, ಡಿಎಪ್ಓ ಯೋಗೇಶ, ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ಲಿಂಗ ರೆಡ್ಡಿ , ಉದ್ಯಮಿ ರಾಜೇಶ ನಾಯಕ, ಬೀನಾ ವೈದ್ಯ, ಡಾ. ಸವಿತಾ ಕಾಮತ್, ಡಾ.ಸುರೇಶ ನಾಯಕ ಮಾತನಾಡಿದರು. ರಾಬಿತಾ ಸೊಸೈಟಿಯ ಅಧ್ಯಕ್ಷ ಉಮರ್ ಫಾರೂಕ್ ಮುಸ್ಬಾಹ್ ಅಧ್ಯಕ್ಷತೆ ವಹಿಸಿದ್ದರು. ಎಂ ಆರ್ ಮಾನ್ವಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕ ಕಮರ್ ಸಾದಾ ವಂದಿಸಿದರು.