- ಲೋಪಸೇವಾ ಆಯೋಗವೆಂಬ ಹಣೆಪಟ್ಟಿ ಕಳಚಿಕೊಳ್ಳಲು ಸಲಹೆ- - - ಚನ್ನಗಿರಿ: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವಿವಿಧ ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿದೆ. ಇಂತಹ ಪರೀಕ್ಷೆಗಳೇ ಲೋಪದೋಷಗಳಿಂದ ಕೂಡಿರುವುದು ಅತ್ಯಂತ ಬೇಸರದ ಸಂಗತಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಲ್.ಜಿ.ಮಧುಕುಮಾರ್ ವಿಷಾದಿಸಿದ್ದಾರೆ.

ಸರ್ಕಾರಿ ನೌಕರಿ ಪಡೆದುಕೊಳ್ಳಲೇಬೇಕು ಎಂದು ಲಕ್ಷಾಂತರ ಯುವಜನರು ಹಲವಾರು ವರ್ಷಗಳಿಂದ ಕಠಿಣ ವಿದ್ಯಾಭ್ಯಾಸ ಮಾಡುತ್ತ, ರಾಜ್ಯ, ಅನ್ಯ ರಾಜ್ಯಗಳಲ್ಲೋ ತರಬೇತಿ ಪಡೆದುಕೊಂಡು ಪರೀಕ್ಷೆಗಳನ್ನು ಎದುರಿಸುತ್ತಾರೆ. ಇಂಥ ಸಮಯದಲ್ಲಿ ವಿವಿಧ ಹುದ್ದೆಗಳ ಉದ್ಯೋಗ ಆಕಾಂಕ್ಷಿಗಳನ್ನು ಗೊಂದಲದಿಂದ ಕೂಡಿರುವ ಪ್ರಶ್ನೆಗಳು ಮತ್ತು ಭಾಷಾಂತರದ ದೋಷಗಳಿಂದಾಗಿ ವಿಚಲಿತರನ್ನಾಗಿಸಿದೆ ಎಂದು ತಿಳಿಸಿದ್ದಾರೆ.

ಉದ್ಯೋಗದ ಕನಸಿನನಲ್ಲಿ ನಿರುದ್ಯೋಗಿಗಳು ಬರೆಯುವ ಪರೀಕ್ಷೆಗಳು ಪಾರದರ್ಶಕ ಹಾಗೂ ವಿಶ್ವಾಸಾರ್ಹವಾಗಿ ಇರಬೇಕು. ಅದನ್ನು ಬಿಟ್ಟು ವಿವಿಧ ಆಯಾಮಗಳ ಮೂಲಕ ಪರೀಕ್ಷೆಗಳನ್ನು ನಡೆಸಿ ನೇಮಕಾತಿ ಮಾಡುವ ಅಧಿಕಾರ ಹೊಂದಿರುವ ಲೋಕಸೇವಾ ಆಯೋಗದ ಕಾರ್ಯವೈಖರಿಗಳು ಉದ್ಯೋಗ ಆಕಾಂಕ್ಷಿಗಳ ಮತ್ತು ಸಾರ್ವಜನಿಕವಾಗಿ ಟೀಕೆಗಳಿಗೆ ಗುರಿಯಾಗುತ್ತಿವೆ. ಇದು ಅತ್ಯಂತ ವಿಷಾದದ ಸಂಗತಿ ಎಂದಿದ್ದಾರೆ.

ಈಗಲಾದರೂ ಕರ್ನಾಟಕ ಲೋಕಸೇವಾ ಆಯೋಗವು ತನ್ನ ತಪ್ಪುಗಳನ್ನು ಸರಿಮಾಡಿಕೊಳ್ಳುವುದರ ಜೊತೆಗೆ ಲೋಪಸೇವಾ ಆಯೋಗ ಎಂಬ ಹಣೆಪಟ್ಟಿಯನ್ನು ಶೀಘ್ರ ಕಳಚಿಕೊಳ್ಳಬೇಕು. ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.

- - - -17ಕೆಸಿಎನ್‌ಜಿ3.ಜೆಪಿಜಿ: ಎಲ್.ಜಿ.ಮಧುಕುಮಾರ್