ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ಥಳೀಯ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ವಿಶ್ವದ ಮುಂದೆ ಅನಾವರಣಗೊಳಿಸಲು ‘ಸೆಲ್ಫೀ ಬುಕ್’ ಜಾಗತಿಕ ವೇದಿಕೆಯಾಗಲಿ ಎಂದು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಶಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೆಲ್ಫೀ ಬುಕ್‌ ಅಪ್ಲಿಕೇಷನ್‌ ಸಂಸ್ಥೆಯಿಂದ ಆಯೋಜಿಸಲಾಗಿದ್ದ ‘ಸೆಲ್ಫೀ ಬುಕ್’ ಮೊಬೈಲ್ ಅಪ್ಲಿಕೇಶನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಭೆ, ಸೃಜನಶೀಲತೆ ಮತ್ತು ಕೌಶಲ್ಯಗಳಿಗೆ ಭೌಗೋಳಿಕ ಗಡಿಗಳಿಲ್ಲ. ಗ್ರಾಮೀಣ ಭಾಗದ ವಿವಿಧ ಕ್ಷೇತ್ರಗಳ ಪ್ರತಿಭಾವಂತ ಯುವಕರು, ಯುವತಿಯರಿಗೆ ತಂತ್ರಜ್ಞಾನದ ಮೂಲಕ ವಿಶ್ವದೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು ಹೆಚ್ಚುತ್ತಿವೆ. ಅಂತಹ ಸಂದರ್ಭದಲ್ಲಿ ಸೆಲ್ಫೀ ಬುಕ್ ಮಾದರಿಯ ನವೀನ ಡಿಜಿಟಲ್ ವೇದಿಕೆಗಳು ಯುವ ಪ್ರತಿಭೆಗಳಿಗೆ ಹೊಸ ಭರವಸೆ ಮೂಡಿಸಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅವದೂತ ವಿನಯ್ ಗುರೂಜಿ, ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಹೆಚ್.ಡಿ.ತಮ್ಮಯ್ಯ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ವಿಧಾನ ಪರಿಷತ್ ಸದಸ್ಯರಾದ ನವೀನ್ ಕುಮಾರ್, ಕೆ.ಸಿ.ವಿರೂಪಾಕ್ಷ, ಲೈಫ್ ಲೈನ್ ಫೀಡ್ಸ್‌ನ ಕಿಶೋರ್ ಕುಮಾರ್ ಹೆಗ್ಡೆ, ಡಾ.ಶಾಲಿನಿ ನಲವಾಡ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಚ್ ಷಡಕ್ಷರಿ, ಕರ್ನಾಟಕ ಕಾರ್ಯನಿರತ ಪಕ್ರಕರ್ತರ ಸಂಘದ ಶಿವಾನಂದ ತಗಡೂರು ಮತ್ತಿತರರು ಉಪಸ್ಥಿತರಿದ್ದರು.