ಸಾರಾಂಶ
ಸಿದ್ದಾಪುರ: ಪಕ್ಷ ರಹಿತವಾಗಿ, ಜಾತಿ ರಹಿತವಾಗಿ ಸಂಘಟನೆ ಮಾಡಿಕೊಂಡು ಸಿದ್ದಾಪುರ ಉತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರ ಸಹಕಾರದಿಂದ ಯಶಸ್ವಿ ಕಾರ್ಯಕ್ರಮ ಜರುಗುವಂತಾಗಲಿ ಎಂದು ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹೇಳಿದರು.
ಪಟ್ಟಣದಲ್ಲಿ ಸಿದ್ದಾಪುರ ಉತ್ಸವ ಸಮಿತಿಯ ಕಾರ್ಯಾಲಯ ಉದ್ಘಾಟಿಸಿ, ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ಉತ್ಸವವನ್ನು ಅರ್ಥಪೂರ್ಣವಾಗಿ ನಡೆಸುವ ನಿಟ್ಟಿನಲ್ಲಿ ಅವರವರ ಅನುಭವವನ್ನು, ಸಲಹೆಯನ್ನು ಮುಕ್ತವಾಗಿ ಹಂಚಿಕೊಂಡು ವ್ಯವಸ್ಥಿತವಾಗಿ ನಡೆಸುವಂತಾಗಲಿ. ಸಿದ್ದಾಪುರ ಅಂದರೆ ಹೆಚ್ಚುಗಾರಿಕೆ ಇರುವ ಪ್ರದೇಶ ಎಂಬ ಭಾವನೆ ಬರುವಂತೆ ಕಾರ್ಯಕ್ರಮ ನಡೆಯಲಿ. ತಮ್ಮ ಸಂಪೂರ್ಣ ಸಹಕಾರವನ್ನು ಈ ಕಾರ್ಯಕ್ರಮಕ್ಕೆ ನೀಡುತ್ತೇನೆ ಎಂದರು.ಉತ್ಸವ ಸಮಿತಿಯ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸಿದ್ದಾಪುರ ಉತ್ಸವವನ್ನು ಅದ್ಧೂರಿಯಾಗಿ ನಡೆಸಿಕೊಂಡು ಬಂದಿದ್ದು, ಫೆ ೮ ಹಾಗೂ ೯ರಂದು ಈ ವರ್ಷದ ಉತ್ಸವ ನಡೆಯಲಿದೆ.
ರಾಜ್ಯಮಟ್ಟದ ಕಲಾವಿದರಿಗಲ್ಲದೆ, ಸ್ಥಳೀಯ ಕಲಾವಿದರಿಗೂ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ. ಅನೇಕ ರೀತಿಯ ಸ್ಪರ್ಧಾ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತಿದೆ.ಪ್ರಥಮ ದಿನದ ಕಾರ್ಯಕ್ರಮದ ಸಾನ್ನಿಧ್ಯವನ್ನು ಧರ್ಮಸ್ಥಳ ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ವಹಿಸಲಿದ್ದು, ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದಾರೆ. ಹರತಾಳು ಹಾಲಪ್ಪ, ಡಾ. ಕೆ. ಶ್ರೀಧರ ವೈದ್ಯ, ಡಾ. ಶಶಿಭೂಷಣ ಹೆಗಡೆ, ಶ್ರೀನಿವಾಸ ಹೆಬ್ಬಾರ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಉತ್ಸವ ಸಮಿತಿಯ ಗೌರವಾಧ್ಯಕ್ಷ ಉಪೇಂದ್ರ ಪೈ ಉಪಸ್ಥಿತರಿರುತ್ತಾರೆ. ಉತ್ಸವ ಜರುಗುವ ಎರಡೂ ದಿನಗಳ ಕಾಲ ಸಂಜೆ ೬ರಿಂದ ೭.೩೦ರ ವರೆಗೆ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಗೆ, ನಂತರ ಹೊರಭಾಗಗಳಿಂದ ಬರುವ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಉತ್ಸವದ ವ್ಯವಸ್ಥೆಗಾಗಿ ಹತ್ತಾರು ಸಮಿತಿಗಳನ್ನು ರಚಿಸಿದ್ದು ಎಲ್ಲರೂ ತೊಡಗಿಕೊಳ್ಳುತ್ತಾರೆ ಎಂದರು.
ಉತ್ಸವ ಸಮಿತಿಯ ಪದಾಧಿಕಾರಿಗಳಾದ ಸತೀಶ ಹೆಗಡೆ, ಮಂಜುನಾಥ ನಾಯ್ಕ, ವಿಜಯ ಪ್ರಭು, ಅನಿಲ ದೇವನಳ್ಳಿ, ನಾಗರಾಜ ನಾಯ್ಕ, ರವಿ ನಾಯ್ಕ ಜಾತಿಕಟ್ಟಾ, ಹಾಲಪ್ಪ ಗೌಡರ್, ಜನಾರ್ದನ ನಾಯ್ಕ, ರವಿ ನಾಯ್ಕ ಹೊಸೂರು, ವಿನಯ ಹೊನ್ನೇಗುಂಡಿ ಸೇರಿದಂತೆ ಹೆಚ್ಚಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಹರೀಶ ಗೌಡರ್ ಸ್ವಾಗತಿಸಿದರು. ಎಸ್.ಕೆ. ಮೇಸ್ತ ವಂದಿಸಿದರು.