ಸಾರಾಂಶ
ಚಿತ್ರಕಲಾ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಕನ್ನಡಪ್ರಭ ವಾರ್ತೆ ಕುಷ್ಟಗಿ
ಅಂಬೇಡ್ಕರ್ ಅವರು ಎಲ್ಲರೂ ಒಂದಾಗಬೇಕು ಎಂದು ಸಂವಿಧಾನ ರಚನೆ ಮಾಡಿದ್ದಾರೆ. ಸರ್ಕಾರ ಸಂವಿಧಾನದ ಚಿಂತನೆಗಳನ್ನು ಎಲ್ಲರಿಗೂ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹಿರಿಯ ಕಲಾವಿದ ಬಿ.ಎಲ್. ಚವ್ಹಾಣ ಅಭಿಪ್ರಾಯಪಟ್ಟರು.ತಾಲೂಕಿನ ತಾವರಗೇರಾ ಪಟ್ಟಣದ ಮಾನವ ಬಂಧುತ್ವ ವೇದಿಕೆ ಬುದ್ಧ ಮಂಟಪದ ಸಭಾಂಗಣದಲ್ಲಿ 10ನೇ ಮೇ ಸಾಹಿತ್ಯ ಮೇಳದ ಅಂಗವಾಗಿ ಲಡಾಯಿ ಪ್ರಕಾಶನ ಗದಗ, ಚಿತ್ತಾರ ಕಲಾ ಬಳಗ ಧಾರವಾಡ, ಕವಿ ಪ್ರಕಾಶನ ಕವಲಕ್ಕಿ, ಮೇ ಸಾಹಿತ್ಯ ಮೇಳ ಬಳಗ ಕೊಪ್ಪಳ ವತಿಯಿಂದ ನಡೆದ ಚಿತ್ರಕಲಾ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಲಿತ ಕಲೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಸಾಹಿತ್ಯದ ಮೂಲಕ ಬರವಣಿಗೆಯೊಂದಿಗೆ ಜನರಿಗೆ ವಿಷಯ ಮುಟ್ಟಿಸಬಹದು. ಸಮಾಜದ ಅಂಕು-ಡೊಂಕುಗಳ ತಿದ್ದುವಿಕೆಗಾಗಿ ಚಿತ್ರಕಲೆಯು ಪ್ರಮುಖವಾಗಿದೆ. ಇದನ್ನು ಜಾಗತಿಕ ಭಾಷೆ ಎಂದು ಕರೆಯುತ್ತಾರೆ. ಚಿತ್ರಕಲೆಯನ್ನು ಅನಕ್ಷರಸ್ಥರು ಕೂಡ ಅರ್ಥ ಮಾಡಿಕೊಳ್ಳಬಹುದು. ಪ್ರತಿಯೊಂದು ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರ ನೇಮಕ ಮಾಡಬೇಕು. ಈ ಕ್ರಮಕ್ಕೆ ಸರಕಾರ ಮುಂದಾಗಬೇಕು ಎಂದರು.ಪ್ರಾಸ್ತಾವಿಕವಾಗಿ ಲಡಾಯಿ ಪ್ರಕಾಶನದ ಮುಖ್ಯಸ್ಥ ಬಸವರಾಜ ಸೂಳೆಬಾವಿ ಮಾತನಾಡಿ, ಮೇ ಸಾಹಿತ್ಯ ಮೇಳ ಜನಪರ ಹಾಗೂ ಜನಧ್ವನಿಯಾಗಿ ಕೆಲಸ ಮಾಡುತ್ತಿದೆ. ಎಲ್ಲ ಧರ್ಮ ಹಾಗೂ ಎಲ್ಲ ಜನರು ಒಂದೇ ಎಂದು ಹೇಳುವುದು ಸಂವಿಧಾನ ಮಾತ್ರ. ಇಂತಹ ಬೃಹತ್ ಸಂವಿಧಾನವನ್ನು ಅಂಬೇಡ್ಕರ್ ಅವರು ತಂದು ಕೊಟ್ಟಿದ್ದಾರೆ. ಅಂತಹ ಸಂವಿಧಾನವನ್ನು ಇಂದು ರಾಜಕಾರಣಿಗಳು ತೆಗೆದು ಹಾಕುವ ಹುನ್ನಾರ ನಡೆಸಿದ್ದಾರೆ. ಸಂವಿಧಾನ ಬದಲು ಮಾಡಿ ಮನುಸ್ಮೃತಿ ತರುವ ಕೆಲಸ ನಡೆಯುತ್ತಿದೆ. ಸದ್ಯ ಮನುಷ್ಯರ ನಡುವೆ ಪ್ರೀತಿ ಹಂಚ್ಚುವ ಕೆಲಸ ಮಾಡಬೇಕು. ರಾಜಕಾರಣಿಗಳು ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದು ನಿಲ್ಲಿಸಬೇಕು ಹಾಗೂ ಸಂವಿಧಾನಬದ್ಧವಾಗಿ ಇರಬೇಕು ಎಂದರು.ಬಿಇಒ ಸುರೇಂದ್ರ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ, ಧರ್ಮ, ರಾಜಕಾರಣದ ಕುರಿತು ಚಿಂತನೆ ನಡೆಸುವ ಮೂಲಕ ಅತ್ಯದ್ಭುತ ಕಲಾ ಚಿತ್ರಗಳು ಮೂಡಲಿ. ಸಂವಿಧಾನ ಪೀಠಿಕೆ ನಾವು ಅರ್ಥೈಸಿಕೊಂಡರೆ ಯಾವುದೇ ಧರ್ಮ ಗ್ರಂಥಗಳನ್ನು ಓದಬೇಕಾಗಿಲ್ಲ. ಎಲ್ಲರಲ್ಲಿ ಭಾತೃತ್ವ ಭಾವನೆ ಮೂಡಿಸುವುದಕ್ಕಾಗಿ ಸಂವಿಧಾನ ರಚನೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟದೂರು, ಟಿ ರತ್ನಾಕರ, ಶಿಬಿರದ ನಿರ್ದೇಶಕರಾದ ಬಿ ಮಾರುತಿ, ಪಿಎಸ್ಐ ಸುಜಾತಾ ನಾಯಕ, ಎ.ಎಂ. ಮಧುರಿ, ಸುಖರಾಜ ತಾಳಕೇರಿ, ಎಂ.ಎಂ. ಮದರಿ, ಎಂ.ಕೆ. ಸಾಹೇಬ, ರವಿ ಪಾಟೀಲ್, ಆದೇಶ ನಾಯಕ, ಶರಣಪ್ಪ ತುಮರಿಕೊಪ್ಪ, ರಾಮಣ್ಣ ಬೆರ್ಗಿ, ಮಂಜುನಾಥ ನಾಯಕ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 20 ಚಿತ್ರ ಕಲಾವಿದರು ಇದ್ದರು. ಇದಕ್ಕೂ ಮುನ್ನ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.