ಸಾರಾಂಶ
ರಬಕವಿ-ಬನಹಟ್ಟಿ: ಸಹಕಾರಿ ಸಂಘಗಳು ಯಾರೊಬ್ಬರ ಸ್ವತ್ತಲ್ಲ. ಸಹಕಾರಿ ಸಂಘಗಳು ಷೇರುದಾರರ, ಜನರ ಮಧ್ಯ ಅಭಿವೃದ್ಧಿ ಹೊಂದಬೇಕು ಎಂದು ಬಾಣಕಾರ ಟೆಕ್ಸಟೈಲ್ಸ್ ಮಾಲೀಕ ಮಲ್ಲಿಕಾರ್ಜುನ ಬಾಣಕಾರ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಹಕಾರಿ ಸಂಘಗಳು ಯಾರೊಬ್ಬರ ಸ್ವತ್ತಲ್ಲ. ಸಹಕಾರಿ ಸಂಘಗಳು ಷೇರುದಾರರ, ಜನರ ಮಧ್ಯ ಅಭಿವೃದ್ಧಿ ಹೊಂದಬೇಕು ಎಂದು ಬಾಣಕಾರ ಟೆಕ್ಸಟೈಲ್ಸ್ ಮಾಲೀಕ ಮಲ್ಲಿಕಾರ್ಜುನ ಬಾಣಕಾರ ಹೇಳಿದರು.ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ನೇಕಾರ ಸಂಘದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಶಾಸಕ ದಿ.ಪಿ.ಎಂ ಬಾಂಗಿಯವರ ಕನಸಿನ ಕೂಸು ಈಗ ತಾಲೂಕಿನಲ್ಲಿ ಅತ್ಯಂತ ಸಿರಿವಂತಿಕೆಯ ಸಹಕಾರಿ ಸಂಘವಾಗಿದೆ. ಕಳೆದ ೮ ದಶಕಗಳಿಂದ ನಿರಂತರ ನೇಕಾರರ ಸೇವೆಯಲ್ಲಿ ಮುನ್ನಡೆಯುತ್ತಿದೆ ಎಂದರು.
ರಾಜು ಭದ್ರನ್ನವರ ಮಾತನಾಡಿ, ಸಂಘದಲ್ಲಿನ ವೈರತ್ವ ಬಿಟ್ಟು, ನೇಕಾರರಿಗೆ ನ್ಯಾಯಯುತವಾಗಿ ದೊರಕಬೇಕಾದ ೧% ಮತ್ತು ೩% ರಂತೆ ಬಡ್ಡಿ ಆಕರಣೆಯ ಸಾಲ ಸುಲಭವಾಗಿ ದೊರಕಿಸಬೇಕಿದೆ. ಈ ಮೂಲಕ ಜವಳಿ ಕ್ಷೇತ್ರ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಈ ಕುರಿತು ಜವಳಿ ಸಚಿವರಿಗೆ ಹಾಗು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಸಾಮೂಹಿಕವಾಗಿ ಎಲ್ಲ ನೇಕಾರ ಸಂಘಟನೆಗಳ ಮೂಲಕ ಒತ್ತಾಯಿಸುವುದು ಅನಿವಾರ್ಯವಾಗಿದೆ ಎಂದರು.ಚನ್ನವೀರಪ್ಪ ಹಾದಿಮನಿ, ಶಂಕರ ಸೊರಗಾಂವಿ, ಶಂಕರಯ್ಯ ಕಾಡದೇವರ, ಅಶ್ವಿನಿ ಅಂಬಲಿ, ಮಂಡಿ, ಅನ್ನಪ್ಪ ಬಾಣಕಾರ, ಕುಮಾರ ಕದಂ, ರಮೇಶ ಮಂಡಿ, ಬೀಳಗಿ ಸೇರಿದಂತೆ ಅನೇಕರು ಇದ್ದರು.