ಕುಕನೂರು: ಸಾರ್ವಜನಿಕರಿಗೆ ಒಳ್ಳೆದಾಗುವ ಕೆಲಸ ಸಮಾಜದಲ್ಲಿ ಹೆಚ್ಚು ಹೆಚ್ಚು ಮಾಡಬೇಕು ಎಂದು ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ ಹೇಳಿದರು.

ಪಟ್ಟಣದ ಶ್ರೀಯಮನೂರು ಸ್ವಾಮಿ ಉರೂಸ್‌ ನಿಮಿತ್ತ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಿಂದೂ ಮುಸ್ಲಿಂ ಶ್ರೀ ಯಮನೂರಸ್ವಾಮಿ ಸೇವಾ ಸಮಿತಿ, ವಿನಾಯಕ ಆಪ್ಟಿಕಲ್ಸ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರ, ಹುಬ್ಬಳ್ಳಿ ಜಯಪ್ರಿಯ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಜರುಗಿದ ಉಚಿತ ಕಣ್ಣಿನ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಡವರು ಲಕ್ಷಾಂತರ ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಕಣ್ಣಿನ ಚಿಕಿತ್ಸೆ ಪಡೆಯಲು ಹರ ಸಾಹಸ ಪಡುತ್ತಾರೆ.ಇಂತಹ ಉಚಿತ ಕಣ್ಣಿನ ತಪಾಸಣಾ ಶಿಬಿರ ಬಡವರ ಪಾಲಿಗೆ ವರದಾನವಾಗಿದೆ. ಇದರ ಸದುಪಯೋಗ ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಗ್ಯಾರೆಂಟಿ ಯೋಜನೆಯ ತಾಲೂಕಾಧ್ಯಕ್ಷ ಸಂಗಮೇಶ ಗುತ್ತಿ ಮಾತನಾಡಿ, ಯಮನೂರು ಸ್ವಾಮಿ ಸೇವಾ ಸಮಿತಿ ಒಳ್ಳೆಯ ಕಾರ್ಯ ಮಾಡುವಲ್ಲಿ ಇವರ ಪಾತ್ರ ಪ್ರಮುಖ.ಈ ಭಾಗದ ಬಡ ಜನರಿಗೆ ಕಣ್ಣಿನ ಬಗ್ಗೆ ಅರಿವಿಲ್ಲ. ಇಂತಹ ಕಾರ್ಯಕ್ರಮಗಳ ಕುರಿತು ಒಳ್ಳೆಯ ಕೆಲಸಕ್ಕೆ ಸಾರ್ವಜನಿಕರ ಅರಿವು ಮುಖ್ಯ ಎಂದರು.

ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಭರಮಪ್ಪ ತಳವಾರ, ರೆಹಮಾನ ಸಾಬ್ ಮಕಪ್ಪನವರ್, ಪ್ರಶಾಂತ ಆರುಬೆರಳಿನ, ಶಂಸದಾ ಬೇಗಂ ಕಟ್ಟಿಮನಿ, ರತ್ನಮ್ಮ ಗದಗ, ಮಲ್ಲಪ್ಪ ಚಳ್ಳಮರದ, ಶ್ರೀನಿವಾಸ್ ದೇಸಾಯಿ, ಈರಣ್ಣ ಹುಬ್ಬಳ್ಳಿ, ಯಲ್ಲಪ್ಪ ಕಲಾಲ್, ಸಲೀಂ ತಳಕಲ್, ನೂರುದ್ದಿನ್ ಸಾಬ್ ಗುಡಿಹಿಂದಲ್, ಸದಸ್ಯ ರಾಜೂರು ಸೇರಿದಂತೆ ಇತರರು ಇದ್ದರು. ಗಾಯಕ ಮೇಘರಾಜ ಜಿಡಗಿ ಪ್ರಾರ್ಥಿಸಿದರು, ಕಳಕಪ್ಪ ಕುಂಬಾರ ಸ್ವಾಗತಿಸಿದರು, ಸಿಇಒ ಮುನ್ನಾಸಾಬ ಗಾಂಜಿ ವಂದಿಸಿದರು.