ಮಾದಕ ದ್ರವ್ಯದಿಂದ ಯುವಜನತೆ ದೂರವಿರಲಿ: ವರಸದ್ಯೋಜಾತ ಸ್ವಾಮೀಜಿ

| Published : Jun 27 2025, 12:48 AM IST

ಸಾರಾಂಶ

ಯುವಜನತೆ ಮಾದಕ ದ್ರವ್ಯ, ವಸ್ತುಗಳಿಂದ ದೂರವಿದ್ದು, ಉತ್ತಮ ಪ್ರಜೆಗಳಾಗಬೇಕು.

ಅಂತಾರಾಷ್ಟ್ರೀಯ ಮಾದಕ ದ್ರವ್ಯ ಅಕ್ರಮ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಶ್ರೀಗಳು

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಯುವಜನತೆ ಮಾದಕ ದ್ರವ್ಯ, ವಸ್ತುಗಳಿಂದ ದೂರವಿದ್ದು, ಉತ್ತಮ ಪ್ರಜೆಗಳಾಗಬೇಕು ಎಂದು ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಹೇಳಿದರು.

ಪಟ್ಟಣದ ತರಳ ಬಾಳು ಕಲ್ಯಾಣ ಮಂಟಪದಲ್ಲಿ ಪೊಲೀಸ್‌ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಅಕ್ರಮ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಮಾದಕ ದ್ರವ್ಯ ಸೇವನೆಯಿಂದ ಮನಸ್ಸು ಹಾಗೂ ಮೆದುಳಿನ ಮೇಲೆ ದುಷ್ಪರಿಣಾಮ ಬೀಳುತ್ತದೆ ಹಾಗೂ ಆರೋಗ್ಯ ಹಾಳಾಗುವುದರ ಜತೆಗೆ ಕೌಟುಂಬಿಕ ಸಮಸ್ಯೆ ತಲೆದೋರುತ್ತವೆ ಎಂದು ಹೇಳಿದರು.

ಮಾದಕ ವಸ್ತುಗಳಿಗೆ ದಾಸರಾದರೆ ಆರ್ಥಿಕವಾಗಿ ಕುಗ್ಗುತ್ತಾರೆ, ತಾತ್ಕಾಲಿಕ ನೆಮ್ಮದಿಗಾಗಿ ದುಶ್ಟಟಕ್ಕೆ ಬಲಿಯಾಗಬಾರದು. ಅದರಲ್ಲೂ ಯುವಜನತೆ ದಾರಿ ತಪ್ಪದೆ ಸದೃಢ ಮನಸ್ಸು, ದೇಹ ಹೊಂದಿ ಉತ್ತಮ ಜೀವನ ನಡೆಸಿ ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ಅಪರಾಧ ಪ್ರಕರಣಗಳಿಗೆ ಮಾದಕ ದ್ರವ್ಯಗಳು ಬುನಾದಿಯಾಗಿವೆ, ಸಮಾಜದಲ್ಲಿ ಕೆಟ್ಟ ಹೆಸರು ತರುತ್ತವೆ. ಮೊಬೈಲ್‌ ಒಳ್ಳೆಯದಕ್ಕಿಂತ ಜಾಸ್ತಿ ಕೆಟ್ಟದ್ದಕ್ಕೆ ಉಪಯೋಗವಾಗುತ್ತಿದೆ ಎಂದ ಅವರು, ಜೀವನ ಬದಲಾವಣೆಗೆ ಇಂತಹ ಕಾರ್ಯಕ್ರಮ ಅಗತ್ಯ ಎಂದು ಹೇಳಿದರು.

ಡಿವೈಎಸ್ಪಿ ಡಾ. ವೆಂಕಟಪ್ಪ ನಾಯಕ ಮಾತನಾಡಿ, ಯುವಜನತೆಗೆ ಸರಿಯಾದ ಸಂಸ್ಕೃತಿ, ತಿಳಿವಳಿಕೆ ಇಲ್ಲ. ತಂದೆ- ತಾಯಿ ಮಾತು ಕೇಳುತ್ತಿಲ್ಲ, ಆದ್ದರಿಂದ ದುಶ್ಟಟಕ್ಕೆ ದಾಸರಾಗುತ್ತಿದ್ದಾರೆ. ಕೂಲಿ ಮಾಡಿ ಪೋಷಕರು ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳಿಸುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಂಡು ಯುವಕರು ಮಾದಕ ದ್ರವ್ಯಗಳಿಂದ ದೂರವಿರಿ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪೃಥ್ವಿ, ಸಿಪಿಐ ಮಹಾಂತೇಶ ಸಜ್ಜನ ಮಾತನಾಡಿದರು. ಜನನಿ ನ್ಯಾಚರೋಪತಿ ಮತ್ತು ಯೋಗ ಕಾಲೇಜಿನ ಉಪನ್ಯಾಸಕಿ ಡಾ. ಕವನ ಉಪನ್ಯಾಸ ನೀಡಿದರು. ಹಡಗಲಿ ತಾಲೂಕಿನ ಅಂಗೂರು ಗ್ರಾಮದ ಕೆ.ಸಿ. ಪರಶುರಾಮ ಹಾಗೂ ಸಂಗಡಿಗರು ಜನ ಜಾಗೃತಿ ಗೀತೆಗಳು ಮತ್ತು ಕಿರು ನಾಟಕ ಪ್ರದರ್ಶಿಸಿದರು.

ಪಿಎಸ್‌ಐ ಶಂಭುಲಿಂಗ ಸಿ.ಹಿರೇಮಠ, ಶಿಕ್ಷಣ ಮಹಾವಿದ್ಯಾಲಯದ ಡೀನ್‌ ಟಿ.ಎಂ. ರಾಜಶೇಖರ, ತೆಗ್ಗಿನಮಠ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಜರಿದ್ದರು.