ಸಾರಾಂಶ
ಇಂದು ದೇಶದ ದೊಡ್ಡ ದೊಡ್ಡ ನಗರಗಳು ಕಾಂಕ್ರಿಟ್ ಕಾಡುಗಳಾಗಿ ಬೆಳೆಯುತ್ತಿವೆಯೇ ಹೊರತು ಆರೋಗ್ಯಕರ ನಗರಗಳಾಗಿ ನಿರ್ಮಾಣವಾಗುತ್ತಿಲ್ಲ
ಕನ್ನಡಪ್ರಭ ವಾರ್ತೆ ವಿಜಯಪುರ
ಮನೆಗೊಂದು ಮರ ನೆಟ್ಟರೆ ನೀಗುವುದು ಬರ ಎನ್ನುವುದನ್ನು ಅರಿತು ಎಲ್ಲರೂ ಮರ ಬೆಳೆಸಿದರೆ ಪರಿಸರ ಸಂರಕ್ಷಣೆ ಜೊತೆಗೆ ಶುದ್ಧವಾದ ಆಮ್ಲಜನಕ ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಪ್ರಾಂಶುಪಾಲ ಶ್ರೀಕಾಂತ ಕೆ.ಎಸ್ ಹೇಳಿದರು.ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಸಿ ನೆಟ್ಟು ಮಾತನಾಡಿದ ಅವರು, ಇಂದು ದೇಶದ ದೊಡ್ಡ ದೊಡ್ಡ ನಗರಗಳು ಕಾಂಕ್ರಿಟ್ ಕಾಡುಗಳಾಗಿ ಬೆಳೆಯುತ್ತಿವೆಯೇ ಹೊರತು ಆರೋಗ್ಯಕರ ನಗರಗಳಾಗಿ ನಿರ್ಮಾಣವಾಗುತ್ತಿಲ್ಲ. ದೆಹಲಿಯಂತಹ ರಾಷ್ಟ್ರ ರಾಜಧಾನಿಯೂ ಇಂದು ಕಲುಷಿತ ವಾತಾವರಣದ ಗೂಡಾಗಿದೆ. ಹೀಗಾಗಿ ಅಲ್ಲಿನ ಜನಗಳು ಕಷ್ಟ ಪಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಎಚ್ಚರಿಕೆ ಹೆಜ್ಜೆಯಿಡಬೇಕಾದ ಅನಿವಾರ್ಯತೆ ನಮಗೆಲ್ಲ ಎದುರಾಗಿದೆ ಎಂದರು.
ನಮ್ಮ ಸುತ್ತ ಮುತ್ತಲು ಬಳಕೆಯಾಗದೇ ಉಳಿದಿರುವ ಸ್ಥಳಗಳಲ್ಲಿ ಗಿಡಗಳನ್ನು ಬೆಳೆಸುವ ಕಾಯಕ ಮಾಡಬೇಕು. ವಾತಾವರಣದಲ್ಲಿ ಅತಿಯಾಗಿ ದೊರೆಯುತ್ತಿರುವ ಕಾರ್ಬನ್ ಡೈ ಆಕ್ಸೆಡ್ ಪ್ರಮಾಣವನ್ನು ತಗ್ಗಿಸಿ ಶುದ್ಧ ಆಮ್ಲಜನಕ ಸಿಗುವಂತೆ ಹೆಚ್ಚು ಹೆಚ್ಚು ಹಸಿರುಮಯ ವಾತವರಣ ನಿರ್ಮಾಣ ಮಾಡಬೇಕು. ಅದರ ಜೊತೆಯಲ್ಲಿ ಪರಿಸರವನ್ನು ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರದ ಜೊತೆಯಲ್ಲಿ ಪಶುಗಳ ಜೀವವನ್ನು ಉಳಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು. ಅದರಲ್ಲೂ ವಿದ್ಯಾರ್ಥಿಗಳು ಇದರ ಮಹತ್ವವನ್ನು ತಾವೂ ಅರಿತುಕೊಂಡು ಇನ್ನೊಬ್ಬರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.