ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವವು ದೊರೆಯಲಿ: ಶಿವಸುಂದರ

| Published : May 27 2024, 01:13 AM IST

ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವವು ದೊರೆಯಲಿ: ಶಿವಸುಂದರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯ ಪ್ರಜಾಪ್ರಭುತ್ವದಿಂದ ಸರ್ವಜನಾಂಗದ ಸಮಾನತೆ ಮತ್ತು ಅಭಿವೃದ್ಧಿ ಅಸಾಧ್ಯ. ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ದೊರೆಯುವಂತೆ ಆಗಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜಕೀಯ ಪ್ರಜಾಪ್ರಭುತ್ವದಿಂದ ಸರ್ವಜನಾಂಗದ ಸಮಾನತೆ ಮತ್ತು ಅಭಿವೃದ್ಧಿ ಅಸಾಧ್ಯ. ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ದೊರೆಯುವಂತೆ ಆಗಬೇಕು ಎಂದು ಚಿಂತಕ ಶಿವಸುಂದರ ಹೇಳಿದರು.

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಜರುಗುತ್ತಿರುವ ಮೇ ಸಾಹಿತ್ಯ ಮೇಳದ ನಾವು ಮತ್ತು ನಾಳೆ ಗೋಷ್ಠಿಯಲ್ಲಿ ಚುನಾವಣೋತ್ತರ ಸರ್ಕಾರ ಎದುರಿಸುವ ಬಗೆ-ಐಕ್ಯತೆ ಅಗತ್ಯ ಕುರಿತು ಮಾತನಾಡಿದರು.

ರಾಜಕೀಯವಾಗಿ ಸಮಾನವಾಗಿದ್ದರೂ ಆರ್ಥಿಕ, ಸಾಮಾಜಿಕವಾಗಿ ಅಸಮಾನರಾಗಿಯೇ ಮುಂದುವರಿಯುತ್ತೇವೆ. ಅಂಬೇಡ್ಕರ್ ಹಾಗೂ ಕಾರ್ಲ್‌ಮಾರ್ಕ್ಸ್ ಕೊಟ್ಟ ವಿವೇಕ ಮರೆತಿದ್ದೇವೆ. ಒಂದು ವೇಳೆ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಅದು ಇತರೆ ಪಕ್ಷಗಳ ನೆರವು ಪಡೆದು ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಸರ್ವ ಪ್ರಯತ್ನಗಳನ್ನು ಮಾಡುತ್ತದೆ. ಉತ್ತರ ಭಾರತದಲ್ಲಿ ರಾಮನ ಹೆಸರಿನಲ್ಲಿ ರಥಯಾತ್ರೆ ಕೈಗೊಂಡು ದಲಿತ, ಆದಿವಾಸಿ, ಹಿಂದುಳಿದ ವರ್ಗಗಳ ಮತಗಳನ್ನು ತನ್ನ ಬುಟ್ಟಿಗೆ ಸೇರಿಸಿಕೊಂಡ ಬಿಜೆಪಿ ಬಹುಸಂಖ್ಯಾತರನ್ನು ಮತ ಧರ್ಮಗಳ ಉನ್ಮಾದಕ್ಕೊಳಪಡಿಸಿ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಂಡು ಅಧಿಕಾರಕ್ಕೇರಿದ್ದು ಈಗ ಇತಿಹಾಸ. ಬಹುರಾಷ್ಟ್ರೀಯ ಕಂಪನಿಗಳು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸತತ ಪ್ರಯತ್ನ ಮಾಡುತ್ತಿವೆ. ಆಕಸ್ಮಿಕವಾಗಿ ಎನ್‌ಡಿಎಗೆ ಬಹುಮತ ಸಾಧ್ಯವಾಗದಿದ್ದರೆ ಅದು ಸುಲಭವಾಗಿ ಅಧಿಕಾರ ಹಸ್ತಾಂತರ ಮಾಡಲು ಸಾಧ್ಯವೇ ಎಂಬ ಸಂದೇಹಗಳಿವೆ. ಪವಾಡ ಸಂಭವಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವ ಅವಕಾಶ ತಡೆಯಲು ಅವರು ಈಗಲೇ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಆನಂತರ ನೆರೆದ ಸಭಿಕರೊಂದಿಗೆ ಸಂವಾದ ನಡೆಯಿತು.

ಡಾ. ಕೆ.ಬಿ. ಬ್ಯಾಳಿ, ಗುಂಜಳ್ಳಿ ನರಸಿಂಹ, ಬಿ.ಎಂ. ಹನುಮಂತಪ್ಪ, ಭಾರತಿ ಮೂಲಿಮನಿ, ಸಂಜಯದಾಸ್ ಕೌಜಗೇರಿ ಉಪಸ್ಥಿತರಿದ್ದರು. ಮುತ್ತು ಬಿಳೆಯಲಿ ಸಂಯೋಜಿಸಿದರು.