ಸಾರಾಂಶ
ಹಾವೇರಿ: ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಗವಾನ್ ಬುದ್ಧ ಜಯಂತಿಯನ್ನು ಸೋಮವಾರ ನಗರದ ಗಾಂಧಿ ಭವನದಲ್ಲಿ ಆಚರಿಸಲಾಯಿತು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ಕಾರ್ಯಕ್ರಮ ಉದ್ಘಾಟಿಸಿದರು.ಸಾನ್ನಿಧ್ಯ ವಹಿಸಿದ್ದ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಗೌತಮ ಬುದ್ಧ ಪೂರ್ಣಿಮೆಯಂದು ಜ್ಞಾನೋದಯ ಪಡೆದನೆಂದು ನಂಬಲಾಗಿದೆ. ಬುದ್ಧನು ತನ್ನ ಜೀವನದ 45 ವರ್ಷಗಳನ್ನು ಧರ್ಮ, ಅಹಿಂಸೆ, ಸಾಮರಸ್ಯ, ಕರುಣೆ ಮತ್ತು ನಿರ್ವಾಣದ ಮಾರ್ಗವನ್ನು ಬೋಧಿಸುತ್ತಾ ಕಳೆದನು. ಬೌದ್ಧಧರ್ಮದ ಮೂರು ಪ್ರಮುಖ ತತ್ವಗಳಾದ ಜ್ಞಾನೋದಯ, ಕರುಣೆ ಮತ್ತು ಶಾಂತಿಯನ್ನು ಪರಿಗಣಿಸಲು ಇದು ಒಂದು ದಿನ. ಈ ಐತಿಹಾಸಿಕ ಸಂದರ್ಭವು ಶಾಂತಿ ಮತ್ತು ಸಾಮರಸ್ಯವನ್ನು ಹರಡುವ ಬುದ್ಧ ತತ್ವಗಳನ್ನು ಸ್ಮರಿಸುತ್ತದೆ ಎಂದು ಹೇಳಿದರು.
ಕೆ.ಸಿ. ಅಕ್ಷತಾ ಮಾತನಾಡಿ, ಇಂದಿನ ನಮ್ಮ ಯುವಕರಿಗೆ ಸನಾತನ ಸಂದೇಶದ ಬದಲು ಬುದ್ಧನ ಸಂದೇಶ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಕರುಣೆ, ಶಾಂತಿ ಮತ್ತು ಅಹಿಂಸೆಯ ಮೇಲೆ ಒತ್ತು ನೀಡುವುದರಿಂದ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.ಹಾವೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ ಭಗವಾನ್ ಬುದ್ಧ ಕುರಿತು ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಎಲ್. ನಾಗರಾಜ್. ನಗರಸಭೆಯ ಆಯುಕ್ತ ಗಂಗಾಧರ ಬೆಲ್ಲದ, ಗಾಂಧಿಪುರ ಸರ್ಕಾರಿ ಕಾಲೇಜಿನ ಉಪನ್ಯಾಸಕ ಪ್ರಕಾಶ ಬಾರ್ಕಿ, ಉಡಚಪ್ಪ ಮಾಳಗಿ, ಸಾಹಿತಿ ಸತೀಶ್ ಕುಲಕರ್ಣಿ, ವೀರಪ್ಪ ಗಾಳೆಮ್ಮನವರ, ಅಶೋಕ ಮರೆಣ್ಣನವರ್, ಮಾಲತೇಶ ಯಲ್ಲಾಪುರ, ಶಂಭು ಕಳಸದ, ಗೌತಮಿ ಮೌರ್ಯ, ಬುದ್ಧ ವಿಹಾರ ಅಧ್ಯಕ್ಷೆ ಲಾವಣ್ಯಾ, ಎನ್.ಬ. ಕಾಳೆ , ಸುನೀಲ್ ಬೆಟಗೇರಿ, ನಿತ್ಯಾನಂದಸ್ವಾಮಿ ಇತರರು ಇದ್ದರು.
ಗುರುನಾಥ ಛಲವಾದಿ ಸಂಗಡಿಗರಿಂದ ಬುದ್ಧ ನಮನ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾಡಿದರು. ಪೃಥ್ವಿರಾಜ್ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ನಿಂಗಪ್ಪ ಗಾಳೆಮ್ಮನವರ ವಂದಿಸಿದರು.ಬುದ್ಧ ನಡಿಗೆ
ಕಾರ್ಯಕ್ರಮಕ್ಕೂ ಮೊದಲು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಗಾಂಧಿ ಭವನದವರೆಗೆ ಬುದ್ಧ ನಡಿಗೆ ಜರುಗಿತು. ಮಾಜಿ ಶಾಸಕ ನೆಹರು ಓಲೇಕಾರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೀರಣ್ಣ ಸಂಗೂರ, ನಗರಸಭಾ ಮಾಜಿ ಸದಸ್ಯ ಬಾಬುಸಾಬ್ ಮೊಮಿನಗಾರ್, ಶಿವರಾಜ್ ಮತ್ತಿಹಳ್ಳಿ, ಮಾಲತೇಶ ಕರ್ಜಗಿ ಉಪಸ್ಥಿತರಿದ್ದರು.