ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಪ್ರತಿಯೊಬ್ಬರ ಜೀವನದಲ್ಲಿ ಬೆಳಕು ಮೂಡಲಿ ಎಂದು ನಾವೆಲ್ಲರೂ ಬಯಸಬೇಕು, ಎಲ್ಲಿ ಕತ್ತಲು ಇರುತ್ತದೆಯೋ ಅಲ್ಲಿ ಬೆಳಕನ್ನು ನಾವೆಲ್ಲ ಚೆಲ್ಲಬೇಕು ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಸ್ವಾಮೀಜಿಗಳು ಹೇಳಿದರು.ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ನಡೆದ ಶ್ರೀ ಓಂಕಾರೇಶ್ವರ ಸ್ವಾಮಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ನೇತೃತ್ವ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು. ಶ್ರೀಮನ್ನಾರಾಯಣ ತನ್ನ ನಂಬಿದ ಭಕ್ತರ ಬಾಳು ಅಂಧಕಾರದಲ್ಲಿ, ಭಯದಲ್ಲಿ ಮುಳುಗಿದಾಗ, ತಾನೇ ಸ್ವಯಂ ವಾಮನ ರೂಪದಲ್ಲಿ ಬಂದು ಬಲಿ ಚಕ್ರವರ್ತಿಯನ್ನು ಬಲಿ ಪಡೆದು ಜಗತ್ತಿಗೆ ಬೆಳಕನ್ನು ನೀಡುವ ಕೆಲಸವನ್ನು ಮಾಡಿದ. ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ನಮಗೆ ಅವಶ್ಯಕತೆ ಇದೆ. ಮನುಷ್ಯನ ಒಳಿತನ್ನು ಮನುಷ್ಯನ ಅಭ್ಯುದಯವನ್ನು ಬಯಸಿ ಮಾಡುವಂತಹ ಎಲ್ಲಾ ಕಾರ್ಯಗಳು ಕೂಡ ಭಗವಂತನಿಗೆ ಸಮರ್ಪಣೆ ಆಗುತ್ತವೆ.ಹಾಗಾಗಿ ನಾವೆಲ್ಲರೂ ಕೂಡ ಇಡೀ ಜಗತ್ತಿನ ಮನುಕುಲದ ಒಳಿತಿಗಾಗಿ ಪ್ರಾರ್ಥನೆ ಮಾಡೋಣ. ಸಂಕಲ್ಪ ಮಾಡೋಣ, ಭಗವಂತನ ಕರುಣೆ ಎಲ್ಲರ ಮೇಲೆ ಇರಲಿ. ಎಲ್ಲರ ನೋವುಗಳು, ದುಃಖ ದುಮ್ಮಾನಗಳು ಎಲ್ಲವೂ ಕೂಡ ಅಳಿದು, ನಾವೆಲ್ಲ ಒಂದೇ ಎನ್ನುವ ಭಾವನೆಯಿಂದ ಬದುಕೋಣ. ಆ ಭಗವಂತ ಎಲ್ಲರ ಬದುಕಿನ ಮೇಲೆ ಕರುಣೆಯನ್ನು ತೋರಲಿ, ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸೋಣ ಎಂದರು. ಈ ಸಂದರ್ಭದಲ್ಲಿ ಪಟ್ಟನಾಯಕನಹಳ್ಳಿ, ಕಾಮಗೊಂಡನಹಳ್ಳಿ, ನೇರಲಹಳ್ಳಿ, ಕ್ಯಾದಿಗುಂಟೆ, ಹೊಸಹಳ್ಳಿ, ನಾದೂರು ಸೇರಿದಂತೆ ಹಲವಾರು ಗ್ರಾಮಗಳ ಮಹಿಳೆಯರು ದೀಪೋತ್ಸವದಲ್ಲಿ ಪಾಲ್ಗೊಂಡು ಶ್ರೀ ಓಂಕಾರೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ಸ್ವಾಮಿ, ಮುಖಂಡರಾದ ತಮ್ಮಣ್ಣ, ನಿರಂಜನ್ ಸೇರಿದಂತೆ ಹಲವರು ಭಾಗವಹಿಸಿದ್ದರು.