ಸಹಕಾರ ಸಂಘಗಳು ಸದೃಢವಾದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದು ಶ್ರೀ ಭಗೀರಥ ಸಹಕಾರ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಹಕಾರ ಸಂಘಗಳು ಸದೃಢವಾದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದು ಶ್ರೀ ಭಗೀರಥ ಸಹಕಾರ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ನಡೆದ ಸಂಘದ 4ನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳು ಗಟ್ಟಿಗೊಂಡಾಗ ಆರ್ಥಿಕ ಸೌಲಭ್ಯವೂ ಕೂಡ ಹೆಚ್ಚು ಮಾಡಲು ಸಾಧ್ಯವಾಗುತ್ತದೆ ಎಂದರು.

ಪ್ರತಿಯೊಬ್ಬರೂ ಸಹಕಾರ ಸಂಘದ ಅಡಿಯಲ್ಲಿಯೇ ಬಂದರೆ ಎಲ್ಲಾ ರೀತಿಯಲ್ಲಿಯೂ ಅನುಕೂಲವಾಗುತ್ತದೆ ಎಂದ ಅವರು, ಸಹಕಾರ ಸಂಘಗಳನ್ನು ಬಲ ಪಡಿಸುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಮುಂದಾಗಬೇಕು. ಇದರಿಂದ ಸಮಾಜವೂ ಕೂಡ ಸಂಘಟನೆಯಾಗುತ್ತದೆ ಎಂದು ಹೇಳಿದರು.

ಸಹಕಾರ ಸಂಘಗಳ ಮೂಲಕ ಅನೇಕ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ನಮ್ಮ ಆರ್ಥಿಕ ವ್ಯವಹಾರಗಳು ಕೂಡ ಸಹಕಾರಿ ಕ್ಷೇತ್ರದಿಂದ ಅಭಿವೃದ್ಧಿಯಾಗುತ್ತದೆ. ಆರೋಗ್ಯ ಸಮಸ್ಯೆ ಬಂದಾಗ ಸಹಕಾರ ಕ್ಷೇತ್ರದ ಮುಖಾಂತರ ಆರ್ಥಿಕ ಸಹಾಯವನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಶ್ರೀ ಭಗೀರಥ ಸಹಕಾರ ಸಂಘ ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ತನ್ನ ಆರ್ಥಿಕ ಸಂಪನ್ಮೂಲವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ. ಆ ಮೂಲಕ ಸಮಾಜದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವಿನ ಹಸ್ತವನ್ನು ಚಾಚುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ ಎಂದ ಅವರು, ಸಹಕಾರಿ ಕ್ಷೇತ್ರದ ಅಡಿಯಲ್ಲಿಯೇ ನಾವೆಲ್ಲರೂ ಬರುವುದರಿಂದ ಹೆಚ್ಚಿನ ಅನುಕೂಲವಿದೆ ಎಂದರು.

ಸಭೆಯಲ್ಲಿ ಅನೇಕ ವಿಷಯಗಳ ಬಗ್ಗೆ ರಚನಾತ್ಮಕ ಹಾಗೂ ಆರೋಗ್ಯಕರ ಚರ್ಚೆಯನ್ನು ನಡೆಸಲಾಯಿತು. ಲೆಕ್ಕಪತ್ರಗಳ ವರದಿ ಮತ್ತು ಪರಿಶೀಲನೆ ಸಹ ಮಾಡಲಾಯಿತು. ಸಂಘದ ನಿರ್ದೇಶಕ ಯು.ಕೆ.ವೆಂಕಟೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಗನಕಟ್ಟೆ ರಮೇಶ್ ವಂದಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ವಸಂತ್ ಹೋಬಳಿದಾರ್, ನಿರ್ದೇಶಕರುಗಳಾದ ಎಲ್.ಮಂಜುನಾಥ್, ಎಂ.ಜಿ.ಕೆ.ಹನುಮಂತಪ್ಪ, ಶಾಂತಮ್ಮ, ರವಿ ಎಚ್. ಚಿದಾನಂದ ಜಿ. ಎಸ್.ಪಿ.ಸುಧಾಕರ್, ಎಲ್.ಚಂದ್ರಶೇಖರ್, ವೈ.ಬಿ.ಲೋಕೇಶ್, ಯು.ಕೆ.ರಮೇಶ್, ಅರ್ಚನಾ ಮತ್ತಿತರರು ಇದ್ದರು.