ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸರ್ವ ಜನಾಂಗಕ್ಕೂ ಅವರ ಜೀವನವನ್ನು ರೂಪಿಸಿಕೊಳ್ಳಲು ಸಂಪ್ರದಾಯಿಕ ಕಸಬು ಇರುತ್ತದೆ. ಅದರ ಜೊತೆಗೆ ಹೊಸ ಆವಿಷ್ಕಾರಗಳ ಕೌಶಲಗಳನ್ನು ರೂಢಿಸಿಕೊಂಡರೆ ಜೀವನ ಮತ್ತಷ್ಟು ಉತ್ತಮವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು. ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವಕರ್ಮ ಜಯಂತಿ” ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸಮುದಾಯ ಭವನಕ್ಕೆ ಜಾಗಈ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣವನ್ನೇ ಶಕ್ತಿಯನ್ನಾಗಿಸಿಕೊಂಡು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಸಮುದಾಯದ ಅಭಿವೃದ್ಧಿಗೆ ಸೂಲಿಕುಂಟೆಯ ಬಳಿ 7 ಎಕರೆಯ ಭೂಮಿ ಮಂಜೂರು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ವಿಶ್ವಕರ್ಮ ಸಂಘದ ಅಧ್ಯಕ್ಷ ಸಿ.ಬಿ.ನವೀನ್ ಕುಮಾರ್ ಮಾತನಾಡಿ, ಬ್ರಹ್ಮ ಇಡಿ ಬ್ರಹ್ಮಾಂಡವನ್ನೇ ಸೃಷ್ಟಿಸಿದನು ಎಂಬುದನ್ನು ಹಿಂದೂ ಧರ್ಮದ ಗ್ರಂಥಗಳು ಹೇಳುತ್ತವೆ. ಅದೇ ರೀತಿ ಈ ಬ್ರಹ್ಮಾಂಡವನ್ನ ಒಂದು ರೂಪಕ್ಕೆ ಇಳಿಸಿದ್ದು ವಿಶ್ವಕರ್ಮ ಎಂದು ನಂಬಲಾಗಿದೆ ಎಂದು ತಿಳಿಸಿದರು.ಪ್ರಾಂಶುಪಾಲ ಬಿ.ವಿ ಪ್ರಕಾಶ್ ಉಪನ್ಯಾಸ ನೀಡಿದರು. ಈ ವೇಳೆಯಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಹಾಗೂ ಸಮುದಾಯದ ಹಿರಿಯ ಮುಖಂಡರಾದ ಗೋವಿಂದ ಚಾರಿ, ಶ್ರೀನಿವಾಸ ಚಾರಿ, ಚಂದ್ರ ಶೇಖರ್, ಯತೀಶ್ ರವರಿಗೆ ಸನ್ಮಾನಿಸಲಾಯಿತು.ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು, ನಗರಸಭಾ ಸದಸ್ಯರು, ಸಮುದಾಯದ ಮುಖಂಡರು ಇದ್ದರು.