ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಫ್ರಮಾಣ ಪತ್ರ ವಿತರಣೆ
ಕನ್ನಡಪ್ರಭ ವಾರ್ತೆ ಮುಂಡಗೋಡಮಹಿಳೆಯರು ಪಡೆದ ಜ್ಞಾನವನ್ನು ಒಂದು ತರಬೇತಿಗೆ ಮಾತ್ರ ಸೀಮಿತಗೊಳಿಸದೆ ಸ್ವ ಉದ್ಯೋಗ ಪ್ರಾರಂಭಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ನಂದಿಕಟ್ಟಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೀತಲ್ ಹೇಳಿದರು.
ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ವಿಸ್ತರಣಾ ಶಾಖೆ ಮುಂಡಗೋಡ ಹಾಗೂ ಟಾಟಾ ಹಿಟಾಚಿ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಧಾರವಾಡ ಸಂಯುಕ್ತ ಆಶ್ರಯದಲ್ಲಿ ಒಂದು ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಿಬಿಡಿ ಆರ್ಸೆಟಿ ಒಂದು ಉತ್ತಮ ತರಬೇತಿ ಸಂಸ್ಥೆಯಾಗಿದ್ದು, ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮಹಿಳೆಯರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಕೆನರಾ ಬ್ಯಾಂಕ ದೇಶಪಾಂಡೆ ಆರ್ ಸೆಟಿ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಮಾತನಾಡಿ, ಪಡೆದ ತರಬೇತಿ ಸ್ವ ಉದ್ಯೋಗಕ್ಕಾಗಿ ಬಳಸಿಕೊಳ್ಳಿ, ಆದಾಯ ತರುವ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಹೊಲಿಗೆ ತರಬೇತಿ ನಿಂತ ನೀರಾಗಬಾರದು. ಹರಿಯುವ ನೀರಾಗಬೇಕು ಎಂದರು. ಅದೇ ರೀತಿ ತರಬೇತಿ ಪಡೆದ ತಮ್ಮೆಲ್ಲರ ಬಾಳು ಯಶಸ್ಸಿನತ ಸಾಗಲಿ ಎಂದು ಹಾರೈಸಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ನಿರ್ದೇಶಕ ಕಿರಣಕುಮಾರ ಬಗಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತರಬೇತಿಗಳು ಜೀವನದ ದಿಕ್ಕನ್ನೆ ಬದಲಾಯಿಸುತ್ತವೆ. ಸಿಬಿಡಿಆರ್ ಸೆಟಿ ಯ ತರಬೇತಿಗಳಿಗೆ ಕರ್ನಾಟಕದ ಮೂಲೆ ಮೂಲೆಯಿಂದ ಬಂದು ತರಬೇತಿ ಪಡೆದು ಅದೆಷ್ಟೋ ಜನ ನಿರುದ್ಯೋಗಿಗಳು ತರಬೇತಿ ನಂತರ ಸ್ವ ಉದ್ಯೋಗವನ್ನು ಕಂಡುಕೊಂಡು ಅನೇಕ ಜನರಿಗೆ ಉದ್ಯೋಗ ನೀಡಿದ್ದಾರೆ. ಮಹಿಳೆಯರು ಇಂಥ ತರಬೇತಿಯ ಪ್ರಯೋಜನ ಪಡೆದುಕೊಳ್ಳಿ ಎಂದರು.
ಪೀಲ್ಡ್ ಆಫೀಸರ್ ವಿಜಯಾ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಆಶಾ ಕಾರ್ಯಕರ್ತೆಯರಾದ ಪಾರ್ವತಿ, ಸವಿತಾ, ಗಂಗಮ್ಮ ಮುಂತಾದವರಿದ್ದರು. ಅಂಕಿತಾ ಕಮ್ಮಾರ ಸಂಗಡಿಗರ ಪ್ರಾರ್ಥಿಸಿದರು. ವಿದ್ಯಾವತಿ ಚವ್ಹಾಣ ನಿರೂಪಿಸಿದರು. ಅಕ್ಷತಾ ಕೊಟಗೊಣಸಿ ಸ್ವಾಗತಿಸಿದರು. ಶಿಲ್ಪಾ ಮೋರೆ ವಂದಿಸಿದರು.