ಯೋಗ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಲಿ

| Published : May 25 2025, 01:41 AM IST

ಸಾರಾಂಶ

ರೋಗಗಳನ್ನು ದೂರವಾಗಿಸಲು ಯೋಗವನ್ನು ಪ್ರತಿಯೊಬ್ಬರು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕಾಗಿದೆ

ಕನ್ನಡಪ್ರಭ ವಾರ್ತೆ ಮೂಡಲಗಿ

ನಮ್ಮ ದಿನನಿತ್ಯದ ಅವಧಿಯಲ್ಲಿ ಯೋಗಕ್ಕಾಗಿ ಒಂದು ಗಂಟೆ ಮೀಸಲಿಟ್ಟರೆ ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೇ ಮಾನಸಿಕ ಆರೋಗ್ಯವನ್ನು ಸುಧಾರಿಸಿ ರೋಗಗಳನ್ನು ದೂರವಾಗಿಸಲು ಯೋಗವನ್ನು ಪ್ರತಿಯೊಬ್ಬರು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೇಂದ್ರ ಆಯುಷ್ಯ ಸಚಿವಾಲಯ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ನವದೆಹಲಿ, ಕಲ್ಲೋಳಿಯ ಸಾಮಾಜಿಕ ಆರ್ಥಿಕ ಮತ್ತು ಕಲ್ಯಾಣ ಸಂಸ್ಥೆ, ಮೂಡಲಗಿ ಶಿಕ್ಷಣ ಸಂಸ್ಥೆ ಮೂಡಲಗಿ ಹಾಗೂ ತಾಲೂಕಾಡಳಿತ ಮೂಡಲಗಿ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ-2025 ರ ಅಂಗವಾಗಿ ಯೋಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಒತ್ತಡದ ಜೀವನದಲ್ಲಿ ಆಹಾರ ಕಲಬೆರಕೆ, ವಾಯುಮಾಲಿನ್ಯ, ಪಾಶ್ಚಿಮಾತ್ಯದ ಅನುಕರಣೆ, ವ್ಯಾಮಾಮದ ಕೊರತೆಯಿಂದ ದೇಹವು ನಿತ್ಯ ದಣಿಯುತ್ತಿದೆ. ಇದರಿಂದ ಮುಕ್ತರಾಗಬೇಕಾದರೆ ಯೋಗದ ಅವಶ್ಯಕತೆ ಇದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಬರುವ ಜೂನ್‌ 21ರವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಇಡೀ ತಾಲೂಕಿನಾದ್ಯಂತ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಯೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಜೂನ್ 21 ರಂದು ಮೂಡಲಗಿಯಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ತಾಲೂಕಿನ ಪ್ರತಿ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿಜಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ಭಾರತವು ಸೇರಿದಂತೆ ವಿಶ್ವದಾದ್ಯಂತ 150 ಕೋಟಿಗೂ ಅಧಿಕ ಜನರಿಗೆ ಎಲ್ಲ ಹಂತಗಳಲ್ಲಿ ಯೋಗವನ್ನು ತಲುಪುವಂತೆ ಮಾಡಿದೆ. ಪ್ರತಿ ವರ್ಷವು ಒಂದೊಂದು ಧ್ಯೇಯವಾಕ್ಯದೊಂದಿಗೆ ಯೋಗಾಚರಣೆ ನಡೆದಿದೆ. ಈ ವರ್ಷವು ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎನ್ನುವ ವಾಕ್ಯದೊಂದಿಗೆ ಜೂನ್-21 ರಂದು ಯೋಗ ದಿವಸವನ್ನು ಆಚರಿಸಲಾಗುತ್ತದೆ. ಇದು ಯೋಗದ ಮೂಲಕ ಜಾಗತಿಕ ಆರೋಗ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕಟೇಶ ಸೋನವಾಲಕರ ಅವರು ಮಾತನಾಡಿ,ನಮ್ಮ ಮೂಡಲಗಿ ಶಿಕ್ಷಣ ಸಂಸ್ಥೆಯಿಂದ ಪ್ರತಿ ವರ್ಷ ಯೋಗ ದಿನವನ್ನು ಆಚರಿಸುತ್ತೇವೆ ಇನ್ನೂ ಬರುವ ಜೂನ್-21 ರ ಯೋಗ ದಿವಸವನ್ನು ಇಡಿ ತಾಲೂಕಿನ ಜನರು ಸೇರಿ ಆಚರಿಸೋಣ ಎಂದರು. ಅಂತಾರಾಷ್ಟ್ರೀಯ ಯೋಗ ಪಟು,ಚಿನ್ನದ ಪದಕ ಪಡೆದ ಕುಮಾರಿ ನಿರ್ಮಲಾ ಕೊಡ್ಲಿಕರ ಯೋಗ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಸಂಸದ ಈರಣ್ಣ ಕಡಾಡಿ ಅವರು ಯೋಗ ಪಟು ಸಾಧನೆಯನ್ನು ಶ್ಲಾಘಿಸಿ ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್‌ ಶಿವಾನಂದ ಬಬಲಿ, ತಾಪಂ ಇಒ ಎಫ್.ಜಿ.ಚಿನ್ನನವರ, ಬಿ ಇ ಒ ಆಜೀತ ಮನ್ನಿಕೇರಿ, ತಾಲೂಕು ಆರೋಗ್ಯಧಿಕಾರಿ ಎಂ.ಎಚ್. ಕೊಪ್ಪದ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ನಿರ್ದೇಶಕರಾದ ಸುಭಾಸ ಸೋನವಾಲಕರ, ವಿಜಯಕುಮಾರ ಸೋನವಾಲಕರ, ಪ್ರಮುಖರಾದ ಪ್ರಕಾಶ ಮಾದರ, ಕುಮಾರ ಗಿರಡ್ಡಿ, ಈರಪ್ಪ ಢವಳೇಶ್ವರ, ಈಶ್ವರ ಮುರಗೋಡ, ಮಹಾನಿಂಗ ಒಂಟಗೂಡೆ, ಡಾ. ಬಿ.ಎಂ. ಪಾಲಭಾಂವಿ, ಎಸ್. ಎಲ್ ಚಿತ್ರಗಾರ, ಸೇವಾ ಸಂಸ್ಥೆ ಅಧ್ಯಕ್ಷ ಪರಪ್ಪ ಗಿರೆಣ್ಣವರ ಸೇರಿದಂತೆ ಮಂಜುನಾಥ ಹಾಗೂ ಕರುನಾಡು ತರಬೇತಿ ಕೇಂದ್ರದ ವಿದ್ಯಾರ್ಥಿಗಳು, ಯೋಗಾಸಕ್ತರು ಭಾಗವಹಿಸಿದ್ದರು. ದೈಹಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಕೆ.ಕಂಕಣವಾಡಿ ಸ್ವಾಗತಿಸಿ, ನಾಗನೂರಿನ ಆಯುಷ್ಯ ವೈದ್ಯ ಡಾ.ಭೂಷಣ ಉಪಾಧ್ಯಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಲ್.ಪಿ.ಹಿಡಕಲ್ ನಿರೂಪಿಸಿ, ಪ್ರಾಚಾರ್ಯ ಜಿ ವ್ಹಿ ನಾಗರಾಜ ವಂದಿಸಿದರು.