ಯೋಗ ಸಾಧಕರಿಗೆ ಪ್ರೋತ್ಸಾಹ ದೊರೆಯಲಿ: .ಎ. ಗಾಳೆಪ್ಪ

| Published : Jan 29 2024, 01:32 AM IST

ಸಾರಾಂಶ

ಯೋಗಾಸನ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಿದೆ. ಇದು ಭಾರತೀಯರ ಪ್ರಾಚೀನ ಕಲೆಯಾಗಿದೆ. ಇದನ್ನು ಉಳಿಸಿ ಬೆಳೆಸಬೇಕಿದೆ.

ಹೊಸಪೇಟೆ: ಹಂಪಿಯ ಯೋಗ ಸಾಧಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ರಂಜು ಆರ್ಟ್ಸ್‌ ಯೋಗ ಟ್ರಸ್ಟ್‌ ಸೇವೆ ಅನನ್ಯವಾಗಿದೆ. ಈ ಭಾಗದ ಯೋಗಪಟುಗಳಿಗೆ ಈ ಯೋಗ ಟ್ರಸ್ಟ್‌ ದಾರಿದೀಪವಾಗಿದೆ ಎಂದು ಸಮಾಜ ಸೇವಕ ಹಾಗೂ ರೈತ ಮುಖಂಡ ಸಿ.ಎ. ಗಾಳೆಪ್ಪ ತಿಳಿಸಿದರು.

ಹಂಪಿಯ ಶಿವರಾಮ ಅವಧೂತರ ಆಶ್ರಮದಲ್ಲಿ ರಂಜು ಆರ್ಟ್ಸ್‌ ಯೋಗ ಟ್ರಸ್ಟ್‌ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಹಂಪಿ ಯೋಗಾಸನ ಚಾಂಪಿಯನ್‌ಶಿಪ್‌ ಕಪ್‌- 2024 ಯೋಗಾಸನ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಯೋಗಾಸನ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಿದೆ. ಇದು ಭಾರತೀಯರ ಪ್ರಾಚೀನ ಕಲೆಯಾಗಿದೆ. ಇದನ್ನು ಉಳಿಸಿ ಬೆಳೆಸಬೇಕಿದೆ. ರಂಜು ಆರ್ಟ್ಸ್‌ ಯೋಗ ಟ್ರಸ್ಟ್‌ನವರು ಇದಕ್ಕೆ ಸ್ಪರ್ಧಾತ್ಮಕತೆಯ ಸ್ಪರ್ಶ ನೀಡಿದ್ದಾರೆ. ಇದರಿಂದ ಮಕ್ಕಳಲ್ಲೂ ಯೋಗಾಸನ ಕಲಿಯುವ ಆಸಕ್ತಿ ಬೆಳೆಯಲಿದೆ. ಇವರ ಕಾರ್ಯಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.

ಹಂಪಿ ಗ್ರಾಪಂ ಪಿಡಿಒ ಗಂಗಾಧರ್‌ ಮಾತನಾಡಿ, ಯೋಗಾಸನದಿಂದ ರೋಗ ಮುಕ್ತರಾಗುತ್ತೇವೆ. ನಮ್ಮೆಲ್ಲರ ಬದುಕಿನಲ್ಲಿ ಲವಲವಿಕೆ ಬರಲಿದೆ. ಹಾಗಾಗಿ ಪ್ರತಿಯೊಬ್ಬರೂ ಯೋಗ ಕಲಿಯಬೇಕು. ಯೋಗದಿಂದ ನಾವು ಸದೃಢ ಭಾರತವನ್ನು ಕಟ್ಟಬಹುದು. ಮಕ್ಕಳಿಗೆ ಯೋಗ ಕಲಿಸುವ ಕಾರ್ಯ ಮಾಡುತ್ತಿರುವ ರಂಜು ಆರ್ಟ್ಸ್‌ ಯೋಗ ಟ್ರಸ್ಟ್‌ನ ಕಾರ್ಯ ನಿಜಕ್ಕೂ ಅವಿಸ್ಮರಣೀಯ ಎಂದರು.

ಹಂಪಿ ಗ್ರಾಪಂ ಅಧ್ಯಕ್ಷೆ ರಜನಿಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜ ಸೇವಕ ಹಾಗೂ ರೈತ ಮುಖಂಡ ಸಿ.ಎ. ಗಾಳೆಪ್ಪ ಅವರಿಗೆ ನೇಗಿಲಯೋಗಿ ಪ್ರಶಸ್ತಿ ಮತ್ತು ಪತಂಜಲಿ ಸಮಿತಿಯ ಕಿರಣ್‌ ಅವರಿಗೆ ಯೋಗಾಚಾರ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಿಡಿಪಿಒ ಕಚೇರಿ ಅಧೀಕ್ಷಕಿ ಚನ್ನಮ್ಮ, ಉಪನ್ಯಾಸಕಿ ಜ್ಯೋತಿ, ಪತ್ರಕರ್ತ ಕೃಷ್ಣ ಎನ್. ಲಮಾಣಿ, ರಂಜು ಆರ್ಟ್ಸ್‌ ಯೋಗ ಟ್ರಸ್ಟ್‌ನ ಫಕೃದ್ದೀನ್‌, ರಂಜಾನ್‌ಬೀ, ತೀರ್ಪುಗಾರರಾದ ಭಾನುಪ್ರಸಾದ್‌, ಶ್ಯಾಮಲಾ, ಮುಖಂಡರಾದ ಪ್ರಶಾಂತ್‌, ವಿ. ವಿರೂಪಾಕ್ಷಿ ನಿರ್ವಹಿಸಿದರು.