(ಆಪರೇಷನ್ ರೈಸ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ಶಿರಸಿ

ಯುವಜನತೆಯನ್ನು ದುಶ್ಚಟದಿಂದ ದೂರವಿಟ್ಟು, ಸದೃಢ ಹಾಗೂ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್, ಉಪವಿಭಾಗದ ಶಿರಸಿ ವತಿಯಿಂದ ನಗರದ ಎಂಇಎಸ್ ಕಾಮರ್ಸ್ ಕಾಲೇಜಿನ ಆಡಿಟೋರಿಯಂ ಸಭಾಭವನದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಮತ್ತು ನಿರ್ಮೂಲನಾ ಅಭಿಯಾನದಡಿ (ಆಪರೇಷನ್ ರೈಸ್) ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರದ ಭವಿಷ್ಯ ಇಂದಿನ ಯುವಜನತೆಯ ಕೈಯಲ್ಲಿದೆ. ಮಾದಕ ದ್ರವ್ಯಗಳ ದಾಸರಾಗುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದಲ್ಲದೆ, ಕುಟುಂಬ ಹಾಗೂ ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಡ್ರಗ್ಸ್ ಹಾವಳಿ ತಡೆಯಲು ಕೇವಲ ಕಾನೂನು ಕ್ರಮವಷ್ಟೇ ಸಾಲದು; ಶಾಲೆ, ಕಾಲೇಜು ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು.


ಮಕ್ಕಳು ಹಾದಿ ತಪ್ಪದಂತೆ ನೋಡಿಕೊಳ್ಳುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ದೊಡ್ಡದಿದೆ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ಗಮನಹರಿಸಿ, ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಈ ವೇಳೆ ಡಿವೈಎಸ್ಪಿ ಗೀತಾ ಪಾಟೀಲ, ಅಬಕಾರಿ ಡಿವೈಎಸ್ಪಿ ದಿವ್ಯಾ ಕೆ. ಶೆಟ್ಟಿ, ತಾಲೂಕು ಆರೋಗ್ಯ ಅಧಿಕಾರಿ ಮಧುಕರ್ ಪಾಟೀಲ್, ತಾಪಂ ಇಒ ಚನ್ನಬಸಪ್ಪ ಹಾವಣಗಿ, ಅಭಯ್ ಕುಮಾರ್ ಗಸ್ತಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಬಿಇಒ ಮಂಜಪ್ಪ ನಾಯ್ಕ, ಪಿಎಸ್ಐಗಳಾದ ಬಸವರಾಜ ಕನಶೆಟ್ಟಿ, ನರಸಿಂಹಲು, ಎಂ.ಜಿ. ಕುಂಬಾರ, ನಾರಾಯಣ ರಾಥೋಡ, ಸಂತೋಷ್ ಕುಮಾರ್ ಸೇರಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಸಿಪಿಐ ಸಂಪತ್ ಸ್ವಾಗತಿಸಿದರು. ನಾರಾಯಣ ಎಂ.ಎಸ್. ನಿರೂಪಿಸಿ, ಪಿಐ ರಮೇಶ ಹೂಗಾರ ವಂದಿಸಿದರು.