ಸಾರಾಂಶ
ಕಿನ್ನಾಳ ಗ್ರಾಮದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಚಾಲನೆ । ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕರೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ನಾವುಗಳು ಈ ದಿನದಂದು ಅಂತರಂಗ ಮತ್ತು ಬಹಿರಂಗ ಶುದ್ಧತೆಗೆ ಸಂಕಲ್ಪ ಮಾಡೋಣವೆಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ. ಕರೆ ನೀಡಿದರು.ತಾಲೂಕಿನ ಕಿನ್ನಾಳ ಗ್ರಾಮದ ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿನ್ನಾಳ ಗ್ರಾಮ ಪಂಚಾಯಿತಿಯಿಂದ ಏರ್ಪಡಿಸಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಮನೆಯ ಜೊತೆಗೆ ನಮ್ಮ ಅಕ್ಕಪಕ್ಕದ ವಾತಾವರಣದ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಸ್ವಚ್ಛತೆ ಎನ್ನುವುದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೇ ವಾಸ್ತವಿಕವಾಗಿರಬೇಕು. ಅಂದಾಗ ಮಾತ್ರ ಗ್ರಾಮದಲ್ಲಿ ಸ್ವಚ್ಛತೆಯ ವಾತಾವರಣ ಕಂಡು ಬರುತ್ತದೆ. ಸ್ವಚ್ಛತೆ ಕಲ್ಪನೆ ನಮ್ಮಿಂದಲೇ ಪ್ರಾರಂಭವಾಗಬೇಕು. ಅಂದಾಗ ಮಾತ್ರ ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಗಳಲ್ಲಿ ಗಾಂಧೀಜಿಯವರು ಕೂಡಾ ಒಬ್ಬರಾಗಿದ್ದು, ಅಂತಹ ಮಹಾತ್ಮರ ದಿನದಂದು ಸ್ವಚ್ಛತೆಯ ಪ್ರಜ್ಞೆ ಮೂಡಿಸುತ್ತಿರುವುದು ನಿಜಕ್ಕೂ ಒಂದು ಮಹತ್ಕಾರ್ಯವಾಗಿದೆ. ನಾವುಗಳು ಮಾತನಾಡುವುದಕ್ಕಿಂತ ನಮ್ಮ ಕೆಲಸ ಮಾತನಾಡಬೇಕು. ಅಂದಾಗ ಮಾತ್ರ ಅದಕ್ಕೆ ಒಂದು ಅರ್ಥ ಕಲ್ಪಿಸಿದಂತಾಗುತ್ತದೆ ಎಂದರು. ಪ್ರತಿಯೊಬ್ಬ ಭಾರತೀಯ ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ ಮುಂದೆ ಇಟ್ಟಲ್ಲಿ ದೇಶದ ಸ್ವಚ್ಛತೆಯ ಚಿತ್ರಣವೇ ಬದಲಾಗುವುದರಲ್ಲಿ ಸಂದೇಹವಿಲ್ಲವೆಂದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವೇದಿಕೆಯಲ್ಲಿದ್ದವರಿಗೆ ಬಟ್ಟೆ ಚೀಲ ವಿತರಿಸಲಾಯಿತು. ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಶಿಕ್ಷಕ ಮಾರುತಿ ಬೋಧಿಸಿದರು. ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಡಿ.ಕೆ., ಕೌಟಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಸರಸ್ವತಿ ದೇವಿ, ಸಿವಿಲ್ ಹಿರಿಯ ನ್ಯಾಯಾಧೀಶ ಮಹಾಂತೇಶ್ ಸಂಗಪ್ಪ ದರ್ಗದ್, ಹಿರಿಯ ಸಿವಿಲ್ ನ್ಯಾಯಾಧೀಶ ಮಾಲಕೇರಿ ರಾಮಪ್ಪ ಒಡೆಯರ್, ನ್ಯಾಯಾಧೀಶರಾದ ಭಾಗ್ಯಲಕ್ಷ್ಮಿ, ಆದಿತ್ಯ ಕುಮಾರ್ ಎಚ್., ಪಂಚಾಯಿತಿ ಅಧ್ಯಕ್ಷೆ ಕರಿಯಮ್ಮ ಉಪ್ಪಾರ, ಉಪಾಧ್ಯಕ್ಷ ದುರ್ಗಪ್ಪ ಡಂಬರ, ಇಒ ದುಂಡಪ್ಪ ತುರಾದಿ, ತಹಸೀಲ್ದಾರ್ ವಿಠಲ್ ಚೌಗಲಾ, ಪಿಡಿಒ ಪರಮೇಶ್ವರಯ್ಯ ಮೊದಲಾದವರು ಇದ್ದರು.