ಕನಕದಾಸರ ತತ್ವ ಸಿದ್ಧಾಂತವನ್ನು ಪಾಲಿಸೋಣ

| Published : Nov 09 2025, 03:15 AM IST

ಸಾರಾಂಶ

ಕನಕದಾಸರ ರೀತಿ, ನೀತಿ, ತತ್ವ ಸಿದ್ಧಾಂತಗಳನ್ನು ಯಾರೂ ಅಳವಡಿಸಿಕೊಳ್ಳುತ್ತಿಲ್ಲ.

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕನಕದಾಸರ 538ನೇ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಪಾಟೀಲ್ ಆಗ್ರೋ ಏಜೆನ್ಸಿ ಮಾಲಕ ಪ್ರಶಾಂತ್ ಪಾಟೀಲ್ ಪೂಜೆ ನೆರವೇರಿಸಿ ಮಾತನಾಡಿ, ಕನಕದಾಸರ ರೀತಿ, ನೀತಿ, ತತ್ವ ಸಿದ್ಧಾಂತಗಳನ್ನು ಯಾರೂ ಅಳವಡಿಸಿಕೊಳ್ಳುತ್ತಿಲ್ಲ. ಕನಕದಾಸರು ಕುಲ ಕುಲವೆಂದು ಏಕೆ ಬಡಿದಾಡುತ್ತೀರಿ ಎಂದು ಹೇಳಿದರೂ ಇವತ್ತಿನ ದಿನಮಾನಗಳಲ್ಲಿ ಜಾತಿ ದೊಡ್ಡ ಆಲದಮರವಾಗಿ ಬೆಳೆಯುತ್ತಿದೆ.

ಜಯಂತಿಗಳು ಒಂದು ಜಾತಿಗೆ ಸೀಮಿತವಾಗಿಲ್ಲ. ಜಾತಿ ಸಮಸ್ಯೆ ಹೋಗಲಾಡಿಸಿದರೆ ಮಾತ್ರ ದೇಶ ಪ್ರಗತಿಯಲ್ಲಿರಲು ಸಾಧ್ಯ. ಕನಕದಾಸರು 538 ವರ್ಷಗಳ ಹಿಂದೆ ಜಾತಿ ವಿರುದ್ಧ ಹೋರಾಡಿದ ಮಹಾನ್ ಭಕ್ತ ಕವಿ.

ದಾಸರಲ್ಲಿ ಶ್ರೇಷ್ಠವಾದ ದಾಸ ಕನಕದಾಸರು, ಇವರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಪ್ರತಿಯೊಬ್ಬರು ಕನಕದಾಸರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಒಂದೇ, ಎಲ್ಲರೂ ಒಂದಾಗಿ ಬಾಳೋಣ ಎಂದು ಹೇಳಿದರು.

ಮುಖಂಡ ಐ.ಸಲಾಂ ಸಾಹೇಬ್ ಮಾತನಾಡಿ, ಕುಲ ಕುಲವೆಂದು ಏಕೆ ಬಡಿದಾಡುವಿರಿ, ಕುಲದ ನೆಲವನ್ನು ಏನಾದರೂ ಬಲ್ಲಿರಾ ಎಂದು ಕನಕದಾಸರು 538 ವರ್ಷಗಳ ಹಿಂದೆನೇ ಹೇಳಿದ್ದಾರೆ ಎಂದರು.

ಶಾಶ್ವತವಾಗಿರುವ ಆಕಾಶ ಮತ್ತು ಭೂಮಿಗೆ ಯಾವುದೇ ಜಾತಿಯಿಲ್ಲ. ಎರಡು ದಿನಗಳಿದ್ದು ಹೋಗುವ ನಮಗೆ ಏಕೆ ಜಾತಿ ಬೇಕು, ನಾವೆಲ್ಲ ಒಂದೇ, ನಮ್ಮ ನಮ್ಮಲ್ಲಿ ಯಾವುದೇ ಜಾತಿ ಭೇದ ಬೇಡ, ಕನಕದಾಸರು ಹಾಲುಮತದಲ್ಲಿ ಜನಿಸಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಕೊಟ್ಟಿದ್ದಾರೆ. ಈ ಜಯಂತಿಯಲ್ಲಿ ಎಲ್ಲ ಸಮಾಜದವರು ಸೇರಿ ಕನಕದಾಸ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕನಕದಾಸ ಜಯಂತಿ ಪ್ರಯುಕ್ತ ಪಾಯಸ, ಅನ್ನ, ಸಾಂಬಾರ್ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಮಯದಲ್ಲಿ ಪ್ರಶಾಂತ್ ಪಾಟೀಲ್ ರವರ ಪುತ್ರ ವೈಶಾಕ್ ನು ಕನಕದಾಸರಂತೆ ವೇಷ ಭೂಷಣ ಧರಿಸಿರುವುದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಕೆಂಚಮ್ಮ, ಮುಖಂಡರಾದ ಪ್ರಶಾಂತ್ ಪಾಟೀಲ್, ಸಲಾಂ ಸಾಹೇಬ್, ಪೂಜಾರ್ ಮರಿಯಪ್ಪ, ಕೆ.ಮಹಾಂತೇಶ್, ಅಡ್ಡಿ ಚನ್ನವೀರಪ್ಪ, ಅದಾಮ್ ಸಾಹೇಬ್, ಎಸ್ಡಿಎಂಸಿ ಅಧ್ಯಕ್ಷ ಖಾಜಾ ಹುಸೇನ್ ಸಾಹೇಬ್, ಕೆ.ರಂಗಪ್ಪ,ನಾಗರಾಜ್, ಅಬ್ದುಲ್ ಸಾಹೇಬ್, ಮೂಗಪ್ಪ, ನಾಗರಾಜ್, ದಾನಪ್ಲ ಅಜ್ಜಪ್ಪ,ರಫೀಕ್ ಸಾಹೇಬ್, ಪಿಡಿಒ ಮಾರುತಿ, ಕಾರ್ಯದರ್ಶಿ ಶಿವಲೀಲಾ,ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.