ಸಾರಾಂಶ
ಹಾನಗಲ್ಲ ತಾಲೂಕಿನ ವರ್ದಿ ಗ್ರಾಮದಲ್ಲಿ ಹಜರತ್ ಹುಸ್ನುಲ್ ಫುಕ್ರಾ ಗುರುಗಳ ಉರೂಸ್ ನಡೆಯಿತು.
ಹಾನಗಲ್ಲ: ಜಾತ್ರೆ, ಉರೂಸ್ಗಳು ಜನರಲ್ಲಿ ಜಾಗೃತಿ ಮೂಡಿಸಿ, ಭಾವೈಕ್ಯತೆ ಬೆಸೆಯುತ್ತವೆ. ಸರ್ವ ಧರ್ಮೀಯರು ಒಂದೆಡೆ ಸೇರುವುದರಿಂದ ಭ್ರಾತೃತ್ವಕ್ಕೆ ಕಾರಣವಾಗಲಿದೆ, ಏಕತೆಯೇ ನಮ್ಮ ಅದ್ಯತೆಯಾಗುವ ಮೂಲಕ ಸಾಮಾಜಿಕ ಸಾಮರಸ್ಯ ಬೆಸೆಯೋಣ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ವರ್ದಿ ಗ್ರಾಮದಲ್ಲಿ ನಡೆದ ಹಜರತ್ ಹುಸ್ನುಲ್ ಫುಕ್ರಾ ಗುರುಗಳ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸಿವೆ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಮುನ್ನಡೆದರೆ ಸಾಮಾಜಿಕ ಸ್ವಾಸ್ಥ್ಯ ನೆಲೆಸಲಿದೆ. ಕೆಲವರು ತಮ್ಮ ಸ್ವಾರ್ಥ ಸಾಧನೆಗೆ ನಮ್ಮೊಳಗೆ ಒಡಕು ಮೂಡಿಸಿ, ಒಡಕಿನ ಲಾಭ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ಇಂಥ ಷಡ್ಯಂತ್ರಗಳಿಗೆ ಬಲಿಯಾಗುವುದು ಬೇಡ. ಧರ್ಮದ ನಿಜವಾದ ಸಾರವನ್ನು ಅರಿತು, ಮುನ್ನಡೆಯುವ ಸಂಕಲ್ಪ ನಾವಿಂದು ತೊಡಬೇಕಿದೆ. ಸೌಹಾರ್ದ ಮತ್ತು ಸಮಾನತೆಯ ಸಮಾಜದಿಂದ ಭಾರತದ ಶಕ್ತಿಯೂ ವೃದ್ಧಿಯಾಗಲಿದೆ. ಭಾರತ ವಿಶ್ವಗುರುವಾಗುವ ಕಾಲ ಸನ್ನಿಹಿತವಾಗಲಿದೆ ಎಂದರು.ಹಜರತ್ ಇಫ್ತಿಕಾರ್ ಅಹ್ಮದ್, ಹಜರತ್ಹಮದಾನಿ, ಹಜರತ್ ನೂಮಾನ್ ಪೀರಾ ಸಮ್ಮುಖ ವಹಿಸಿದ್ದರು. ಮುಖಂಡರಾದ ಕಲವೀರಪ್ಪ ಪವಾಡಿ, ಮಹಾಬಳೇಶ್ವರ ಸವಣೂರ, ಈರಪ್ಪ ಬೂದಿಹಾಳ, ರಜಾಕ್ಅಹ್ಮದ್ ನರೇಗಲ್, ಸುರೇಶ ಮಾಚಾಪೂರ, ಖಾಸೀಂಸಾಬ ತೊಂಡೂರ, ಹಸನಮಿಯಾ ತೊಂಡೂರ, ಸುರೇಶ ಹುರುಳಿಕುಪ್ಪಿ, ಖಲಂದರ್ ತಂಡೂರ, ಫಕ್ಕೀರೇಶ ಅಗಸಿಬಾಗಿಲ ಈ ಸಂದರ್ಭದಲ್ಲಿ ಇದ್ದರು.