ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ ದಸ್ತು ಪತ್ರ ಬರಹಗಾರರ ಒಕ್ಕೂಟದಿಂದ ಚೇತನ ಹೋಟೆಲ್‌ನಲ್ಲಿ ಸಭೆ ನಡೆದಿದ್ದು, ರಾಜ್ಯ ಪತ್ರ ಬರಹಗಾರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಡಿ.16ರಂದು ಬೆಳಗಾವಿ ಚಲೋ ನಡೆಸುವುದು ಸೇರಿದಂತೆ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.

- ಡೀಡ್ ರೈಟರ್ ಲಾಗಿನ್, ದಸ್ತಾವೇಜುಗಳಿಗೆ ಬಿ ಕಾಲಂ ಕಡ್ಡಾಯಕ್ಕೆ ಸ್ಪಂದಿಸದ ಸರ್ಕಾರ: ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ ದಸ್ತು ಪತ್ರ ಬರಹಗಾರರ ಒಕ್ಕೂಟದಿಂದ ಚೇತನ ಹೋಟೆಲ್‌ನಲ್ಲಿ ಸಭೆ ನಡೆದಿದ್ದು, ರಾಜ್ಯ ಪತ್ರ ಬರಹಗಾರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಡಿ.16ರಂದು ಬೆಳಗಾವಿ ಚಲೋ ನಡೆಸುವುದು ಸೇರಿದಂತೆ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರಾಜ್ಯ ಪತ್ರ ಬರಹಗಾರರ ಅಸ್ತಿತ್ವಕ್ಕಾಗಿ ಹಾಗೂ ರಾಜ್ಯದ ಎಲ್ಲ ಪತ್ರ ಬರಹಗಾರರಿಗೆ ಡೀಡ್ ರೈಟರ್ ಲಾಗಿನ್ ಹಾಗೂ ಎಲ್ಲ ನೋಂದಣಿ ದಸ್ತಾವೇಜುಗಳಿಗೆ ಬಿ ಕಾಲಂ ಕಡ್ಡಾಯಗೊಳಿಸುವಂತೆ ಕಳೆದ ವರ್ಷದಿಂದ ಸಂಬಂಧಪಟ್ಟ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಮತ್ತು ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ, ಇದುವರೆಗೂ ಯಾವುದೇ ಬೇಡಿಕೆ ಈಡೇರಿಸದೇ ಇರುವ ನಿರ್ಲಕ್ಷ್ಯವನ್ನು ಸಭೆಯಲ್ಲಿ ಖಂಡಿಸಲಾಯಿತು.

ಕಾವೇರಿ 1.0 ಮತ್ತು ಕಾವೇರಿ 2.0 ದಿಂದ ಮುಂದುವರಿದು ಈಗ ಕಾವೇರಿ 3.0 ತಂತ್ರಾಂಶದಡಿ ನೋಂದಣಿ ವ್ಯವಸ್ಥೆಯ ಕಾರ್ಯವನ್ನು ಜಾರಿಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರ ನೋಂದಣಿಯಾದ ಆಸ್ತಿಗಳಿಗೆ ಭದ್ರತೆ ಕಡಿಮೆಯಾಗುತ್ತದೆ. ಪತ್ರ ಬರಹಗಾರರಿಗೆ ಇನ್ನಿಲ್ಲದ ಸಮಸ್ಯೆಗಳೂ ಉಂಟಾಗುತ್ತವೆ. ಸರ್ಕಾರ ಯಾವುದೇ ಕೈಪಿಡಿ ಹೊರಡಿಸದೇ ಏಕಪಕ್ಷೀಯ ನಿರ್ಧಾರ ಮತ್ತು ಬದಲಾವಣೆಗಳನ್ನು ತರುತ್ತಿದೆ ಎಂದು ಸದಸ್ಯರು ಆಕ್ಷೇಪಿಸಿದರು.

ಈ ಹಿನ್ನೆಲೆ ಸರ್ಕಾರದ ಧೋರಣೆ ಖಂಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.16ರಂದು ಬೆಳಗಾವಿ ಚಲೋ ಕಾರ್ಯಕ್ರಮ ನಡೆಸಲಾಗುವುದು. ಬೆಳಗಾವಿಯ ಸುವರ್ಣ ಸೌಧದ ಮುಂದೆ ಧರಣಿ ನಡೆಸಲಾಗುವುದು. ಸರ್ಕಾರ ಇದಕ್ಕೂ ಸ್ಪಂದಿಸದೇ ಇದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದು, ರಾಜ್ಯಾದ್ಯಂತ ಎಲ್ಲ ಉಪ ನೋಂದಣಿ ಕಚೇರಿಗಳಲ್ಲಿ ಒಂದು ದಿವಸ ಲೇಖನಿ ಸ್ಥಗಿತಗೊಳಿಸಿ ಧರಣಿ ನಡೆಸುವ ಕುರಿತು ಸಹ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ರಾಜ್ಯ ಒಕ್ಕೂಟದ ಅಧ್ಯಕ್ಷ ಡಿ.ಕೆ. ಸಂಗಮೇಶ್ ಎಲಿಗಾರ್ ಅಧ್ಯಕ್ಷತೆ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಎನ್.ನವೀನ್ ಕುಮಾರ್, ಬಸವರಾಜ್ ಪಿ.ಲಕ್ಷ್ಮೇಶ್ವರ, ಶಾಂತರಾಜ್ ಪಿ. ಪೋಳ್ ಹಾಗೂ ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ವಿ. ಏಕಬೋಟೆ, ಖಜಾಂಚಿ ಡಿ.ಆರ್. ಗಿರಿರಾಜು, ಕೃಷ್ಣಮೂರ್ತಿ, ವಿನೋದ ಗೌಡ ಸಿ. ಪಾಟೀಲ್, ರುಕ್ಮಿಣಿ ಛಲವಾದಿ, ನಜೀರ್ ಅಹ್ಮದ್, ಫಕ್ರುದ್ದೀನ್ ಡಾಂಬಳೆ ಮತ್ತಿತರರು ಪಾಲ್ಗೊಂಡಿದ್ದರು.

- - -

-7ಕೆಡಿವಿಜಿ39:

ದಾವಣಗೆರೆಯಲ್ಲಿ ದಸ್ತು ಪತ್ರ ಬರಹಗಾರರ ಒಕ್ಕೂಟದಿಂದ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಡಿ.ಕೆ ಸಂಗಮೇಶ್ ಎಲಿಗಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.