ಗ್ರಂಥಾಲಯಗಳು ಆಧುನಿಕ ದೇವಾಲಯ ಇದ್ದಂತೆ. ಸಮಾಜದ ಸಾಂಸ್ಕೃತಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ.

ರಾಷ್ಟ್ರೀಯ ಗ್ರಂಥಾಪಾಲಕರ ದಿನಾಚರಣೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಅಂಕೋಲಾ

ಗ್ರಂಥಾಲಯಗಳು ಆಧುನಿಕ ದೇವಾಲಯ ಇದ್ದಂತೆ. ಸಮಾಜದ ಸಾಂಸ್ಕೃತಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಪುಸ್ತಕಗಳ ಸ್ಪರ್ಶ ಮತ್ತು ಗ್ರಂಥಾಪಾಲಕರು ನೀಡುವ ಮಾರ್ಗದರ್ಶನಕ್ಕೆ ಪರ್ಯಾಯವಿಲ್ಲ ಎಂದು ನಿವೃತ್ತ ಗ್ರಂಥಾಪಾಲಕ ಮಹಾಂತೇಶ ರೇವಡಿ ಹೇಳಿದರು.

ಸ್ಥಳೀಯ ಕೆಎಲ್ಇ ಸಂಸ್ಥೆಯ ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಗ್ರಂಥಾಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಎಸ್.ಆರ್. ರಂಗನಾಥನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸ್ವೀಕರಿಸಿ ಮಾತನಾಡಿದರು.

ಗ್ರಂಥಾಲಯಗಳು ಸಂಸ್ಥೆಯ ಹೆಬ್ಬಾಗಿಲಾಗಿದ್ದು ಶತಮಾನಗಳ ಹಿಂದೆ ಅನೇಕ ದಾಳಿಕೋರರು ಅವುಗಳನ್ನು ನಾಶ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದರೆ ಶಿಕ್ಷಕರು ಸಮಾಜ ಕಟ್ಟುವ ಹಾಗೂ ಸಂಸ್ಕೃತಿ ಬೆಳೆಸುವ ಶಕ್ತಿಯನ್ನು ಹೊಂದಿದ್ದು ಜ್ಞಾನದ ಪ್ರಚಾರಕರಾಗಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ, ಪುಸ್ತಕ ಓದುವುದರಿಂದ ಆತ್ಮವಿಶ್ವಾಸ ಹಾಗೂ ಶಬ್ಧ ಭಂಡಾರ ಹೆಚ್ಚಾಗುತ್ತದೆ. ಸಂಸ್ಕೃತಿ, ಸಂಸ್ಕಾರ, ಜ್ಞಾನ ಬೆಳವಣಿಗೆಗೆ ಇದು ಅತ್ಯಂತ ಅವಶ್ಯಕ ಎಂದರು.

ಶ್ರದ್ಧಾ ಸಂಗಡಿಗರು ಪ್ರಾರ್ಥಿಸಿದರು. ಸುಜಾತಾ ನಾಯ್ಕ ಸ್ವಾಗತಿಸಿದರು. ರಾಘವೇಂದ್ರ ದೇಶಪಾಂಡೆ ವಂದಿಸಿದರು. ಉಪನ್ಯಾಸಕ ಮಂಜುನಾಥ ಇಟಗಿ, ಗ್ರಂಥಾಪಾಲಕಿ ಪಲ್ಲವಿ ನಾಯಕ ಉಪಸ್ಥಿತರಿದ್ದರು. ರಕ್ಷಿತಾ ಅಂಬಿಗ ನಿರೂಪಿಸಿದರು.