ಸಾರಾಂಶ
ಬ್ಯಾಡಗಿ: ಗ್ರಂಥಾಲಯಗಳು ಜ್ಞಾನದ ವಿಶ್ವವಿದ್ಯಾಲಯವಿದ್ದಂತೆ, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಪ್ರತಿನಿತ್ಯ ತೆರಳಿ ಸ್ವಲ್ಪ ಸಮಯವನ್ನಾದರೂ ಗ್ರಂಥಾಲಯಗಳಲ್ಲಿ ಕಾಲ ಕಳೆಯುವಂತೆ ಶಾಸಕ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಹೇಳಿದರು. ತಾಲೂಕಿನ ಮೋಟೆಬೆನ್ನೂರಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಉದ್ಘಾಟನೆ ಮತ್ತು ಮೈಲಾರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಅನಕ್ಷರತೆ ಹೋಗಲಾಡಿಸಲು, ಜ್ಞಾನ ಸಂಪಾದನೆಗೆ ಗ್ರಂಥಾಲಯಗಳು ಪೂರಕವಾಗಿವೆ. ಗ್ರಾಮೀಣ ಪ್ರದೇಶದ ಗ್ರಂಥಾಲಯಗಳಲ್ಲಿಯೂ ಕೂಡ ವಿವಿಧ ರೀತಿಯ ಪುಸ್ತಗಳು ದೊರೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಯುವಕರು ಒಳ್ಳೆಯ ವಿಚಾರಗಳನ್ನು ಹೊಂದಿರುವ ಪುಸ್ತಕಗಳಿಂದ ಮಾಹಿತಿ ಪಡೆದುಕೊಳ್ಳುವ ಹವ್ಯಾಸ ಹಾಗೂ ಮಾಹಿತಿ ಹುಡುಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ದೇಶ ಸುತ್ತು ಇಲ್ಲವೇ ಕೋಶವನ್ನು ಓದು ಎನ್ನುವಂತೆ 4 ಗೋಡೆಗಳ ಮಧ್ಯದಲ್ಲಿ ವಿಶ್ವವನ್ನೇ ಪರ್ಯಟನೆ ಮಾಡಿದಷ್ಟು ಅನುಭವಗಳನ್ನು ಗ್ರಂಥಾಲಯಗಳು ಕೊಡುತ್ತಿದ್ದು ಉತ್ತಮ ಮಾಹಿತಿ ಕೇಂದ್ರಗಳಾಗಿವೆ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪಾರ್ವತೆಮ್ಮ ನಾಯ್ಕ, ಉಪಾಧ್ಯಕ್ಷೆ ಮೀನಾಕ್ಷಮ್ಮ ಅಂಗಡಿ, ಭೂದಾನಿಗಳಾದ ಗಿರೀಶ ಪೂಜಾರ, ಮುಖಂಡರಾದ ಶಿವಪುತ್ರಪ್ಪ ಅಗಡಿ, ನಾಗರಾಜ ಆನ್ವೇರಿ, ಮಾರುತೆಪ್ಪ ಜಿಂಗಾಡಿ, ಲಕ್ಷ್ಮಣ ಬಟ್ಟಲಕಟ್ಟಿ, ಶಿವಕುಮಾರ ಪಾಟೀಲ, ಸತೀಶ ಪಾಟೀಲ, ಮಂಜಪ್ಪ ಎಲಿ, ಬಸವರಾಜ ಬಳ್ಳಾರಿ, ಮಂಜುನಾಥ ಬೆನಕನಕೊಂಡ, ಅಶೋಕ ಅಗಡಿ, ರಾಜೀವ ಶಿಗ್ಲಿ, ನಾಗರಾಜ ಕಟಗಿ ಸೇರಿದಂತೆ ಇನ್ನಿತರರಿದ್ದರು.