ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಆರ್ಥಿಕವಾಗಿ ದುರ್ಬಲರಾಗಿರುವ ಆಟೋ ಚಾಲಕರಿಗೆ ಜೀವ ವಿಮಾ ಸೌಲಭ್ಯವನ್ನು ವೈಯಕ್ತಿಕವಾಗಿ ನೀಡುವುದಾಗಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಘೋಷಿಸಿದ್ದಾರೆ.ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯನ್ನು ವಿದ್ಯುತ್ ದೀಪ, ಡಿಜೆ, ಎಲ್ಇಡಿಗಳಿಂದ ಸಿಂಗಾರಿಸಲಾಗಿದ್ದ ಭವ್ಯ ವೇದಿಕೆಯಲ್ಲಿಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ರಜತ ಮಹೋತ್ಸವ ಹಾಗೂ ಗಣರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಡ್ಯಾನ್ಸ್ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಟೋ ಚಾಲಕರು ಮತ್ತು ಮಾಲೀಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಕೂಡ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಜನಸ್ನೇಹಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದ ಶಾಸಕರು ಬೆಂಗಳೂರಿನಲ್ಲಿ ಮತ್ತು ಕೊಡಗಿನಲ್ಲಿ ತಮ್ಮ ಆಟೋ ಪ್ರಯಾಣದ ಅನುಭವಗಳನ್ನು ಮೇಲುಕು ಹಾಕಿದರು. 25 ವರ್ಷಗಳಿಂದ ಸಂಘವನ್ನು ಹುಟ್ಟುಹಾಕಿ ಜನಮೆಚ್ಚುವ ರೀತಿಯಲ್ಲಿ ನಡೆಸಿಕೊಂಡು ಬಂದಿರುವುದು ಅಭಿನಂದಾರ್ಹ ಎಂದು ಶಾಸಕರು ಶ್ಲಾಘಿಸಿದರು.ಬಸವನಹಳ್ಳಿಯಲ್ಲಿ ಕೆಎಸ್ಆರ್ಟಿಸಿ ಡಿಪ್ಪೋ ಪ್ರಾರಂಭಕ್ಕೆ ಭೂಮಿಪೂಜೆ ನೇರವೇರಿದ್ದು, ಡಿಪ್ಪೋ ಆರಂಭದ ಬಳಿಕ ಕನಿಷ್ಠ 100 ಮಾರ್ಗಗಳು ಹೆಚ್ಚಾಗುತ್ತವೆ. ಆಗ ಬಸ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಶಾಲಾ ಮಕ್ಕಳಿಗೆ ಪರೀಕ್ಷೆಗಳಿಗೆ ಹಾಜರಾಗುವ ನಿಟ್ಟಿನಲ್ಲಿ ವಿಶೇಷ ಬಸ್ ವ್ಯವಸ್ಥೆಗೆ ಶನಿವಾರವೇ ಡಿಪ್ಪೋ ವ್ಯವಸ್ಥಾಪಕರಿಗೆ ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ ಎಂದು ಹೇಳಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯನ್ನು ಜನಸಂಖ್ಯೆ ಆಧಾರದ ಮೇರೆಗೆ ಕಾನೂನಿನ ಚೌಕಟ್ಟಿನಲ್ಲಿ ಪುರಸಭೆ ಮಾಡುವ ಬಗ್ಗೆ ಸರ್ಕಾರದೊಂದಿಗೆ ವ್ಯಹರಿಸಲಾಗುವುದು. ಸುಂಟಿಕೊಪ್ಪ ಆಸ್ಪತ್ರೆಯನ್ನು ಮೇಲ್ದೆದರ್ಜೆಗೆರಿಸುವ ಬದಲು ಒಳ್ಳೆಯ ವೈದ್ಯರನ್ನು ನೇಮಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.ಸುಂಟಿಕೊಪ್ಪ ಪಟ್ಟಣ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಜಲಜೀವನ್ ಯೋಜನೆಯಡಿಯಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಅದೇ ರೀತಿ ಕಸವಿಲೇವಾರಿಗೆ ಸದ್ಯಕ್ಕೆ 2 ಪಿಕಪ್ ವಾಹನಗಳನ್ನು ಪೂರೈಸುವ ಬಗ್ಗೆ ಪರಿಶೀಲಿಸಲಾಗುವುದೆಂದು ಭರವಸೆ ನೀಡಿದರು.
ಮುಖ್ಯ ಅತಿಥಿ ವಿ.ಪಿ.ಶಶಿಧರ್ ಮಾತನಾಡಿ, ರಿಕ್ಷಾ ಚಾಲಕರ ಮಾಲೀಕರ ಸಂಘವು ಸಂವಿಧಾನದ ಆಶಯಗಳಿಗೆ ಪೂರಕವಾಗಿ ಪಕ್ಷಾತೀತ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಅಭಿನಂದಾರ್ಹ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಿನ್ನೆಲೆಯಲ್ಲಿ ಸಂಘ ಅತ್ಯುತ್ತಮವಾಗಿ ಜನರಿಗೆ ಸ್ಪಂದಿಸಿ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಬಣ್ಣಿಸಿದರು.ಮತ್ತೋರ್ವ ಅತಿಥಿ, ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಮಾತನಾಡಿ, ಸಂವಿಧಾನ ಜಾರಿಗೆ ಬಂದ ದಿನದಂದು ಸಮಾನತೆ, ಒಗ್ಗಟ್ಟು, ಸಹಬಾಳ್ವೆಯನ್ನು ಪ್ರದರ್ಶಿಸುವ ಸಂಘದ ನಡೆ ಅತ್ಯಂತ ಅಭಿನಂದನೆಗೆ ಪಾತ್ರವಾಗಿದೆ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಟ್ಟಿರುವುದು ಒಂದು ಅನುಕರಣೀಯ ಮಾದರಿ ಎಂದು ಹೇಳಿದರು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹರಪಳ್ಳಿ ರವೀಂದ್ರ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ವಹಿಸಿದ್ದರು.* ಗಣ್ಯರಿಗೆ ಸನ್ಮಾನ:
ಇದೇ ಸಂದರ್ಭ ಮಡಿಕೇರಿ ಶಾಸಕ ಮಂಥರ್ ಗೌಡ ಸನ್ಮಾನಿಸಲಾಯಿತು. 60 ವರ್ಷ ಮೇಲ್ಪಟ್ಟ ಹಿರಿಯ ಆಟೋಚಾಲಕ ಮತ್ತು ಮಾಲೀಕರಾದ ಸಂಜೀವ, ಕುಂಞ ಮಹ್ಮದ್, ಮೊಣ್ಣು, ಹಮೀದ್ ಹಾಗೂ ಸ್ಥಾಪಕ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ, ಸ್ಥಾಪಕ ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ, ಹಾಲಿ ಅಧ್ಯಕ್ಷ ಎ.ಎಂ.ಶರೀಫ್ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಶಿವಮ್ಮ ಮಹೇಶ್, ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ಬಿ.ಎಂ.ಸುರೇಶ್, ಐ.ಸೋಮನಾಥ್, ಆಲಿಕುಟ್ಟಿ, ರಫೀಕ್ ಖಾನ್, ಮಂಜುಳಾ, ವಸಂತಿ, ಶಾಂತಿ, ನಾಗರತ್ನ, ಮಂಗಳಾ, ಗೀತಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಇ.ಕರೀಂ, ತಾ.ಪಂ. ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಸುಧೀಶ್, ಭಾರತೀಯ ಹಾಕಿ ತರಬೇತುದಾರೆ ಅಂಕಿತಾ ಸುರೇಶ್, ಆಟೋ ಚಾಲಕರ ಸಂಘದ ಸ್ಥಾಪಕಾಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ, ಹಾಲಿ ಅಧ್ಯಕ್ಷ ಎ.ಎಂ.ಶರೀಫ್, ಪ್ರಧಾನ ಕಾರ್ಯದರ್ಶಿ ಸಿ.ಎ. ಸಚಿನ್ ಹಾಗೂ ಪದಾಧಿಕಾರಿಗಳು ಮತ್ತಿತರರು ಇದ್ದರು.