ಸತ್ಯ, ಪ್ರಾಮಾಣಿಕತೆಯಿಂದ ನಡೆದರೆ ಜೀವನ ಸುಖಮಯ: ರಂಭಾಪುರಿ ಜಗದ್ಗುರು

| Published : Feb 18 2024, 01:34 AM IST

ಸತ್ಯ, ಪ್ರಾಮಾಣಿಕತೆಯಿಂದ ನಡೆದರೆ ಜೀವನ ಸುಖಮಯ: ರಂಭಾಪುರಿ ಜಗದ್ಗುರು
Share this Article
  • FB
  • TW
  • Linkdin
  • Email

ಸಾರಾಂಶ

ಕಲಾದಗಿ: ಇತಿಹಾಸ ಹೇಳುತ್ತಿದೆ. ನಿನ್ನೆ ಸುಖ ಇತ್ತು ಎಂದು, ವಿಜ್ಞಾನ ಹೇಳುತ್ತಿದೆ ನಾಳೆ ಸುಖ ಇದೆ ಎಂದು. ಆದರೆ ಧರ್ಮ ಹೇಳುತ್ತದೆ ಮನುಷ್ಯನಲ್ಲಿ ಸತ್ಯ, ಪ್ರಾಮಾಣಿಕತೆಯಿಂದ ಇದ್ದರೆ ನಿತ್ಯವೂ ಸುಖ ಇದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ,ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು. ಉದಗಟ್ಟಿ ಗ್ರಾಮದಲ್ಲಿ ಶನಿವಾರ ಮಹಾಪುರಾಣ ಮಂಗಲ ಹಾಗೂ ಧರ್ಮ ಜಾಗೃತಿ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಸರ್ವ ಕಾಲಕ್ಕೂ, ಸರ್ವ ಸಮುದಾಯಕ ಬೆಳಕು ಕೊಡುತ್ತಿರೋದು ಧರ್ಮ ಮಾತ್ರ ಎಂದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಇತಿಹಾಸ ಹೇಳುತ್ತಿದೆ. ನಿನ್ನೆ ಸುಖ ಇತ್ತು ಎಂದು, ವಿಜ್ಞಾನ ಹೇಳುತ್ತಿದೆ ನಾಳೆ ಸುಖ ಇದೆ ಎಂದು. ಆದರೆ ಧರ್ಮ ಹೇಳುತ್ತದೆ ಮನುಷ್ಯನಲ್ಲಿ ಸತ್ಯ, ಪ್ರಾಮಾಣಿಕತೆಯಿಂದ ಇದ್ದರೆ ನಿತ್ಯವೂ ಸುಖ ಇದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ,ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ಉದಗಟ್ಟಿ ಗ್ರಾಮದಲ್ಲಿ ಶನಿವಾರ ಮಹಾಪುರಾಣ ಮಂಗಲ ಹಾಗೂ ಧರ್ಮ ಜಾಗೃತಿ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಸರ್ವ ಕಾಲಕ್ಕೂ, ಸರ್ವ ಸಮುದಾಯಕ ಬೆಳಕು ಕೊಡುತ್ತಿರೋದು ಧರ್ಮ ಮಾತ್ರ. ಪ್ರತಿಯೊಬ್ಬರೂ ಸ್ವಧರ್ಮದಲ್ಲಿ ನಿಷ್ಠ, ಪರಧರ್ಮದಲ್ಲಿ ಸಹಿಷ್ಠುತಾ ಮನೋಭಾವನೆ ಹೊಂದಿ ಸಮಾಜದಲ್ಲಿ ಮುನ್ನಡೆದರೆ ಆರೋಗ್ಯಪೂರ್ಣವಾದ ಸಮಾಜವನ್ನು ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ. ಆಧುನಿಕ ಜಗತ್ತಿನಲ್ಲಿ ವೈಚಾರಿಕತೆಯ ನೆಪದಲ್ಲಿ ಭಾರತೀಯ ಉತ್ಕೃಷ್ಠತೆಯ ಸಂಸ್ಕೃತಿಯನ್ನು ಕಲುಷಿತಗೊಳಿಸುವ ಕೆಲಸ ನಡೆಯುತ್ತಿದೆ. ಪ್ರಜ್ಞಾವಂತರಾದ ಯಾರೂ ಸಹ ಇದಕ್ಕೆ ಅವಕಾಶ ಕೊಡಬಾರದು. ಮನುಷ್ಯ ಧರ್ಮದಿಂದ ವಿಮುಖವಾದರೆ ಮನುಷ್ಯನ ವ್ಯಕ್ತಿತ್ವ ಕುಂಠಿತಗೊಳ್ಳುವುದಲ್ಲಿ ಯಾವುದೇ ಅನುಮಾನ ಬೇಡ. ಧರ್ಮ ನಾಶ ಮಾಡುವ ಶಕ್ತಿ ಯಾರಲ್ಲೂ ಇಲ್ಲ, ಹಿಂದೆಯೂ ಧರ್ಮ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಯಾರಾದರೂ ಧರ್ಮವನ್ನು ನಾಶ ಮಾಡಲು ಹೊರಟರೆ ಧರ್ಮ ನಾಶ ಆಗುವುದಿಲ್ಲ. ಅವರೇ ಧರ್ಮದಿಂದ ಸಂಪೂರ್ಣವಾಗಿ ನಾಶ ಆಗುತ್ತಾರೆ. ದೇವರು ಇದ್ದಾನೆ ಎಂಬ ನಂಬಿಕೆ, ಮರಣ ತಪ್ಪಿದ್ದಲ್ಲ ಈ ಎರಡನ್ನೂ ಯಾರೂ ಮರೆಯಬಾರದು. ದೇವರ ಅಸ್ತಿತ್ವ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡಲಾರದು. ಮನುಷ್ಯ ಕೊಟ್ಟಿದ್ದು ಮನಿತನಕ, ದೇವರು ಕೊಟ್ಟಿದ್ದು ಕೊನೆತನಕ, ಇಂತಹ ಭಗವಂತವನ್ನು ದಿನದಲ್ಲಿ ಒಂದೆರಡು ಬಾರಿಯಾದರೂ ಪೂಜೆ, ನಾಮಸ್ಮರಣೆ ಮಾಡಿದಲ್ಲಿ ಜೀವನ ಪಾವನವಾಗುತ್ತದೆ ಎಂದರು.

ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದ ಧರ್ಮಕ್ಷೇತ್ರ ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಮಾತನಾಡಿದರು, ಕಲಾದಗಿಯ ಶ್ರೀ ಗಂಗಾಧರ ಶಿವಾಚಾರ್ಯರು, ಚಳಗೇರಿ ಹಿರೇಮಠದ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯರು, ಶಾಸಕ ಜೆ.ಟಿ. ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಅರಕೇರಿ, ನಾರಾಯನ ಹಾದಿಮನಿ ಇನ್ನಿತರರು ಇದ್ದರು.

ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ

ಕಾರ್ಯಕ್ರಮಕ್ಕೂ ಮುಂಚೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯಿತು.

ಯಾದವಾಡ ಅವರ ತೋಟದಿಂದ ಪ್ರಾರಂಭಗೊಂಡ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಶ್ರಿ ಗುರುಲಿಂಗೇಶ್ವರ ಮಠದವರೆಗೂ ೧೦೮ ಪೂರ್ಣ ಕುಂಭ ಸಮೇತ ಜರುಗಿತು. ಕುಂಭ ಹೊತ್ತು, ಆರತಿ ಹಿಡಿದು ಹೆಜ್ಜೆ ಹಾಕಿದ ಮಹಿಳೆಯರು ಮೆರುಗು ಹೆಚ್ಚಿಸಿದರು. ರಸ್ತೆಯುದ್ದಕ್ಕೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಆಗಮನದ ವೇಳೆ ಭಕ್ತರು ರಸ್ತೆಗೆ ನೀರು ಹಾಕಿ, ತೆಂಗಿನ ಕಾಯಿ ಒಡೆದು, ಊದುಬತ್ತಿ ಬೆಳಗಿ, ಪೂಜಿಸಿ ಶ್ರೀಗಳನ್ನು ಬರಮಾಡಿಕೊಂಡರು. ಮ್ಯುಜಿಕಲ್ ಪಾರ್ಟಿ, ಹಲಗಿ ಮಜಾಲ್ಸಿ, ಡೊಳ್ಳು ವಾದನ ಸೇರಿದಂತೆ ವಿವಿಧ ವಾಧ್ಯಗಳೊಂದಿಗೆ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಅನೇಕ ಶ್ರೀಗಳು, ಗ್ರಾಮದ ಹಿರಿಯರು, ನೂರಾರು ಭಕ್ತರು ಪಾಲ್ಗೊಂಡಿದ್ದರು.