ವಿದ್ಯಾರ್ಥಿನಿಯರು ವ್ಯಾಸಂಗದ ಜೊತೆ ಕಠಿಣ ಪರಿಶ್ರಮದ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು, ವಿದ್ಯಾರ್ಥಿನಿಗಳು ಶಿಸ್ತು ಬದ್ಧತೆ, ಸಂಯಮ ಅಳವಡಿಸಿಕೊಳ್ಳಬೇಕು. ಜನರು ಪ್ರಸ್ತುತ ನಗರ ಪ್ರದೇಶದತ್ತ ಮುಖ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಬದುಕೇ ನೆಮ್ಮದಿಯ ಬದುಕಾಗಿದೆ. ಗ್ರಾಮೀಣ ಭಾಗದಲ್ಲಿ ಸಿಗುವ ಸಂತೋಷ, ನೆಮ್ಮದಿ ನಗರ ಪ್ರದೇಶಗಳಲ್ಲಿ ಸಿಗುತ್ತಿಲ್ಲ, ಒತ್ತಡದ ಜೀವನ ನಗರ ಪ್ರದೇಶದ ಜೀವನವಾಗಿದೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೇವಲ ಅಂಕ ಗಳಿಸುವುದಷ್ಟೇ ಜೀವನವಲ್ಲ, ಕಲೆ ಮತ್ತು ಕ್ರೀಡೆಗಳು ಮನಸ್ಸನ್ನು ಸದಾ ಉತ್ಸಾಹದಿಂದ ಇಡಲಿದ್ದು, ಪಾಠದಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೊಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ.ನಿರಂಜನ್ ವಾನಳ್ಳಿ ಹೇಳಿದರು. ಅವರು ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಬದುಕಿನ ಭಾಗವಾಗಬೇಕು. ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅತ್ಯಗತ್ಯ ಎಂದರು.ವಿದ್ಯಾರ್ಥಿನಿಯರು ವ್ಯಾಸಂಗದ ಜೊತೆ ಕಠಿಣ ಪರಿಶ್ರಮದ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು, ವಿದ್ಯಾರ್ಥಿನಿಗಳು ಶಿಸ್ತು ಬದ್ಧತೆ, ಸಂಯಮ ಅಳವಡಿಸಿಕೊಳ್ಳಬೇಕು. ಜನರು ಪ್ರಸ್ತುತ ನಗರ ಪ್ರದೇಶದತ್ತ ಮುಖ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಬದುಕೇ ನೆಮ್ಮದಿಯ ಬದುಕಾಗಿದೆ. ಗ್ರಾಮೀಣ ಭಾಗದಲ್ಲಿ ಸಿಗುವ ಸಂತೋಷ, ನೆಮ್ಮದಿ ನಗರ ಪ್ರದೇಶಗಳಲ್ಲಿ ಸಿಗುತ್ತಿಲ್ಲ, ಒತ್ತಡದ ಜೀವನ ನಗರ ಪ್ರದೇಶದ ಜೀವನವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಾಸ್ಕೆಟ್ ಬಾಲ್ ಆಟಗಾರ್ತಿ ಮೈಸೂರಿನ ಬಿಂದಿಯಾ ಗುರುಸ್ವಾಮಿ ಅವರು ಮಾತನಾಡಿ, ಜೆಎಸ್ಎಸ್ ಸಂಸ್ಥೆಯು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸದಾ ಮುಂದಿರುತ್ತದೆ. ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದೆ. ಪುಸ್ತಕದ ಜ್ಞಾನದ ಜೊತೆಗೆ ಕಲೆ ಹಾಗೂ ಕ್ರೀಡೆಗಳು ಮುಖ್ಯ. ಅವು ಮಾನವೀಯತೆ ಮತ್ತು ಸೃಜನಶೀಲತೆಯನ್ನು ಬೆಳೆಸುತ್ತವೆ. ಆದ್ದರಿಂದ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಉತ್ತಮ ಸಾಧಕರಾಗಬೇಕು ಎಂದರು.ನಿಕಟ ಪೂರ್ವ ಕುಲಸಚಿವರಾದ ಡಾ.ನಾಗರಾಜು , ಪ್ರಾಂಶುಪಾಲ ಡಾ.ಎಚ್.ಎಸ್.ಕೊಂಗಳಪ್ಪ, ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಸೌಮ್ಯ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಧರ್ ಇನ್ನಿತರಿದ್ದರು.